ಕಥೆ-823
ಮರವನ್ನೇ ತನ್ನ ಗುರುವೆಂದ
ಯಾರು ಏನೇ ಹೇಳಲಿ ಈ ಜೀವನ ಯಾತ್ರೆಯಲ್ಲಿ ನಮಗೆ ಸರಿಕಂಡ ದಾರಿಯಲ್ಲಿ ನಾವು ಶ್ರದ್ಧೆಯಿಂದ, ಧೈರ್ಯದಿಂದ ಮುನ್ನುಗ್ಗಿದಾಗಲೇ ನಾವು ನಮ್ಮ ಗುರಿಯನ್ನು ತಲುಪಬಲ್ಲೆವು. ಈ ಜೀವನದಿ ದೇವಸಾಗರ ಸೇರುವವರೆಗೆ ಎಲ್ಲ ಎಡರು ತೊಡರುಗಳನ್ನು
ಎದುರಿಸಲೇಬೇಕಲ್ಲವೆ? ಪ್ರಕೃತಿ ಕರುಣಿಸಿರುವ ಈ ತನುಮನ ಬುದ್ದಿ ಸರಿಯಾಗಿ ಬಳಸಿಕೊಂಡು ನಾವು ಬೆಳೆಯಬೇಕು. ಮಧುರ ಕಂಠವಿದ್ದರೆ
ಹಾಡಿ ನಲಿಯಬಹುದು, ಶಕ್ತಿ ಸಾಮರ್ಥ್ಯವಿದ್ದರೆ ದುಡಿದು ಗಳಿಸಬಹುದು, ಸದ್ಭಾವ ಸದ್ವಿಚಾರ, ಸತ್ಕಾರ್ಯಗಳಿಂದ ಜೀವನ ಸಾರ್ಥಕಗೊಳಿಸಬೇಕು. ಹಾಗಲ್ಲದೆ ವ್ಯರ್ಥ ಜೀವನ ಕಳಿಯುವುದರಲ್ಲಿ ಏನರ್ಥವಿದೆ?
ಓರ್ವ ಯುವಕ ಸಶಕ್ತ, ಸುಂದರ ಆದರೆ ಹೊಲ, ಮನೆ ಏನೂ ಇರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಉದ್ಯೋಗ ದೊರೆಯಲಿಲ್ಲ. ಇನ್ನು ಬದುಕಿಯಾದರೂ ಏನು ಮಾಡುವುದೆಂದು ಜೀವನದಲ್ಲಿ ನಿರಾಶೆ ತಾಳಿದ. ಒಂದು ಹಗ್ಗವನ್ನು ತೆಗೆದುಕೊಂಡು ಹೊರಟ. ಒಂದು ಮಾವಿನ ಮರದ ಕೆಳಗೆ ಬಂದು ಕುಳಿತ. ತನ್ನ ಜೀವನ ಕೊನೆಗೊಳಿಸಬೇಕು ಅಂದುಕೊಂಡಿದ್ದ. ಅಷ್ಟರಲ್ಲಿ ಆ ಮಾಮರವು ಯುವಕನೊಂದಿಗೆ ಮೆಲ್ಲನೆ ಮಾತನಾಡತೊಡಗಿತು.
“ನೋಡು; ಮೈತುಂಬಾ ಹಸಿರು, ತಲೆತುಂಬ ಹೂವು ಕಾಯಿ, ಹಣ್ಣು. ನನಗೇನು ಯಾರೂ ಹೋಳಿಗೆ, ಹಾಲು, ತುಪ್ಪ ಉಣಿಸುವುದಿಲ್ಲ. ತಮಗೆ ಬೇಡಾದ ನೀರನ್ನೋ ತಿಪ್ಪೆಯ ಕಸವನ್ನೋ ತಂದು ಹಾಕುತ್ತಾರೆ. ಅದನ್ನೇ ಹೀರಿಕೊಂಡು ನಾನು ಹೆಮ್ಮರವಾಗಿ ನಿಂತಿದ್ದೇನೆ. ನನ್ನ ಹತ್ತಿರ ಬರುವವರಿಗೆ ನೆರಳನ್ನು ನೆರವನ್ನು ಕೊಡುತ್ತೇನೆ. ಹೋಗುವಾಗ ಒಂದೆರಡು ಹಣ್ಣನ್ನು ಕೊಟ್ಟು ಕಳುಹಿಸುತ್ತೇನೆ. ಎಲ್ಲರೂ ಮನಸ್ಸಿನಲ್ಲೇ ನನಗೆ ಧನ್ಯವಾದ ಹೇಳುತ್ತಾರೆ. ಆಗ ನನ್ನ ಜೀವನ ಸಾರ್ಥಕವೆನಿಸುತ್ತದೆ. ನಿನ್ನಂತೆ ನನಗೇನು ಕೈ, ಕಾಲು, ಕಣ್ಣು, ಬಾಯಿ ಏನೂ ಇಲ್ಲ. ಎಲ್ಲವೂ ಇದ್ದು ನೀನು ಹೀಗೆ ಹೇಡಿಯ ಹಾಗೆ ಅಮೂಲ್ಯವಾದ ಜೀವನವನ್ನು ವ್ಯರ್ಥವಾಗಿ, ಕಳೆದುಕೊಳ್ಳಲು ಯೋಚಿಸುತ್ತಿರುವಿ? ಇದು ಜಾಣತನವೋ ದಡ್ಡತನವೋ ನೀನೇ ಹೇಳು. ಮರದ ಈ ಉಪದೇಶವನ್ನು ಕೇಳಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುವುದೇಕೆ ಎಂದು ಮನೆಗೆ ಹೋಗಿ ದುಡಿದು ಸಂತೃಪ್ತ ಜೀವನ ಸಾಗಿಸಿದ. ಮರವನ್ನೇ ತನ್ನ ಗುರುವೆಂದು ಸ್ವೀಕರಿಸಿ ಧನ್ಯನಾದ... ಮರ ಮಾತನಾಡಿದ್ದು ಕಾಲ್ಪನಿಕ ಇರಬಹುದು ಆದರೆ ಅದರ ಕಾರ್ಯವಂತು ಸತ್ಯವೇ ಆಗಿದೆ....
-ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment