ಕಥೆ-822
ಹಾಲಿನಲ್ಲಿನ ನೀರಿನಂತೆ...
ನಮ್ಮ ಮಾತುಗಳು ಕೇವಲ ಸುಂದರವಾಗಿದ್ದರೆ ಸಾಲದು ಅದರಲ್ಲಿ ಸತ್ಯವೂ ಇರಬೇಕು. ಹಾಲಿನಲ್ಲಿ ಬರೀ ನೀರು ಇರಬಾರದು. ಸ್ವಲ್ಪ ನೀರಿದ್ದರೆ ನಡೆಯುತ್ತದೆ. ನಮ್ಮ ಮಾತಿನಲ್ಲಿ ಸಾಧ್ಯವಾದಷ್ಟು ಎಲ್ಲವೂ ಸತ್ಯವೇ ಇರಬೇಕು. ಅದರಲ್ಲಿ ಎಲ್ಲೋ ಒಂದೆರಡು ಸುಳ್ಳು ಹಾಲಿನಲ್ಲಿ ಒಂದೆರಡು ಹನಿ ನೀರಿದ್ದಂತೆ ಇದ್ದರೆ ನಡೆಯಬಹುದು. ಯಾರಾದರೂ ಊಟಮಾಡ ಬನ್ನಿ ಎಂದು ಔಪಚಾರಕ್ಕೆ ಕರೆದರೆ “ಇದೀಗ ಊಟ
ಮಾಡಿದ್ದೇನೆಂದೋ ಹಸಿವೆ ಇಲ್ಲವೆಂದೋ” ಎಂದು ಸುಮ್ಮನೆ ಹೇಳುತ್ತೇವೆ. ಹೀಗೆ ಒಂದು ಸಣ್ಣ ಸುಳ್ಳು ಹೇಳುವುದರಿಂದ
ಮನೆಯವರಿಗೂ ಗೌರವ ನಮಗೂ ಗೌರವ. ಹಾಗಲ್ಲದೆ, ಸುಮ್ಮನೇ ಉಪಚಾರಕ್ಕಾಗಿ ಊಟ ಮಾಡ ಬನ್ನಿ ಎಂದಾಗ, ಹಿಂದೂ ಮುಂದೂ ನೋಡದೆ ನಾವು ಊಟಕ್ಕೆ ಕುಳಿತರೆ, ಮನೆಯವರ ಗತಿ ದೇವರೇ
ಗತಿ. ಅಂದು ಅವರು ಏಕಾದಶಿ ಮಾಡಬೇಕಾದೀತು ಅಲ್ಲವೇ?
ಅಪರೂಪಕ್ಕೆ ಯಾರೋ ಬಂಧು, ಮಿತ್ರರು ಬಹಳ ದಿನಗಳ ತರುವಾಯ ನಮಗೆ ಭೇಟಿಯಾಗಿರುತ್ತಾರೆ. ಆಗ ಸಹಜವಾಗಿ ಆರಾಮವಾಗಿದ್ದೀರಾ,ಎಂದು ನಮಗೆ ಕೇಳುತ್ತಾರೆ. “ಧನ್ಯವಾದ ನಾವು ಆರಾಮವಾಗಿದ್ದೇವೆ, ನೀವು ಆರಾಮವಾಗಿದ್ದೀರಾ?” ಎಂದು ಮುಗುಳು ನಗುತ್ತ ಕೇಳಿ ಬಿಟ್ಟರೆ ಅವರಿಗೂ ಆನಂದ ನಮಗೂ ಆನಂದ. ಹಾಗಲ್ಲದೆ
'ಆರಾಮವಾಗಿದ್ದೀರಾ' ಎಂದು ಅವರು ಕೇಳಿದ ಕೂಡಲೇ ನಾವು ಎಲ್ಲಿಯ ಆರಾಮರೀ? ಎನ್ನುತ್ತಾ ನಮ್ಮ ಮನೆಯ ದವಾಖಾನೆ ಇತಿಹಾಸ ಹೇಳತೊಡಗಿದರೆ, ಕೇಳಿದವರು ಯಾಕಾದರೂ ಇವರಿಗೆ
ಕೇಳಿದೆವೋ? ಎಂದುಕೊಳ್ಳಬಹುದಲ್ಲವೇ? ಇಲ್ಲವೆ ಈಗ ಸಮಯವಾಗಿದೆ ಮತ್ತೊಮ್ಮೆ ಬರುತ್ತೇನೆ ನಮಸ್ಕಾರ ಎಂದು
ಹೋಗಲಿಕ್ಕಿಲ್ಲವೆ?.
ಹಾಗೆಂದು ನಾವು ಬರೀ ಸುಳ್ಳನ್ನೇ ಹೇಳುವುದಲ್ಲ. ಸಮಯ ಸಂದರ್ಭ ನೋಡಿಕೊಂಡು ತಂಬಿಗೆ ಹಾಲಿನಲ್ಲಿ ಒಂದೆರಡು ಹನಿ ನೀರು ಬೆರೆತಂತೆ ಯಾರಿಗೂ ಹಾನಿಯಾಗದಂತೆ ಅನಿವಾರ್ಯವಾಗಿದ್ದರೆ
ಮಾತ್ರ ಆಪದ್ಧರ್ಮವೆಂಬಂತೆ ಹೇಳಬಹುದಷ್ಟೆ. ಆದರೆ ದುರುದ್ದೇಶದಿಂದ
ಇನ್ನೊಬ್ಬರನ್ನು ಅವಮಾನಿಸಲು ಅಗೌರವಿಸಲು ಸುಳ್ಳನ್ನು ಹೇಳಿದರೆ, ಅದರ ಪರಿಣಾಮ ಭಯಾನಕವಾಗಬಹುದು.
*-ಶ್ರೀ ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment