ಕಥೆ-877
ಕೇವಲ ಅತಿಯಾಶೆ ಮಾಡಿದರೆ ಗತಿಗೆಡದೆ ಇರದು.
https://basapurs.blogspot.com
ಒಂದೂರಲ್ಲಿ ಓರ್ವ ತಾಯಿ, ಅವಳಿಗೊಬ್ಬ ಮಗ. ಆ ಮಗುವಿನ ತಂದೆ ಇರಲಿಲ್ಲ. ತಾಯಿಯೇ ಮಗನಿಗೆ ತಂದೆಯಾಗಿ, ಗುರುವಾಗಿ ಬದುಕಲಿಕ್ಕೆ ಬೇಕಾದ ಒಳ್ಳೆಯ ಸಂಸ್ಕಾರವನ್ನೆಲ್ಲ ಕೊಟ್ಟಿದ್ದಳು. ಅವರದೊಂದು ಚಿಕ್ಕಮನೆ. ಆ ಮನೆಯ ಮುಂದೆ ನಾಲ್ಕೈದು ತೆಂಗಿನ ಮರಗಳು, ಆ ಮರದ ಕಾಯಿಗಳನ್ನೇ ಮಾರಿ ಅವರು ಬದುಕುತ್ತಿದ್ದರು. ಒಂದು ದಿನ ಆ ಬಾಲಕನು ದಾರಿಯ ಪಕ್ಕದಲ್ಲಿ ಕುಳಿತು ತೆಂಗಿನಕಾಯಿ ಮಾರುತ್ತಿದ್ದ. ಅಲ್ಲಿಗೆ ಒಬ್ಬ ಸಿರಿವಂತ ಕುದುರೆಯನ್ನೇರಿ ಬಂದ. ಬೇಸಿಗೆ ಕಾಲವಾದ್ದರಿಂದ ಸಿರಿವಂತನಿಗೆ ತುಂಬಾ ಬಾಯಾರಿಕೆ ಆಗಿತ್ತು. ತೆಂಗಿನ ಕಾಯಿ ನೋಡಿದ ಕೂಡಲೆ ಅವನಿಗೆ ನೀರು ಕುಡಿದಷ್ಟೇ ಸಂತಸವಾಯಿತು. ಕುದುರೆಯನಿಳಿದ ಸಿರಿವಂತ ಆ ಬಾಲಕನೊಂದಿಗೆ ಮಾತುಕತೆಗೆ ಇಳಿದ.
ಸಿರಿವಂತ-ಒಂದು ತೆಂಗಿನ ಕಾಯಿಯ ಬೆಲೆ ಎಷ್ಟು?
ಬಾಲಕ -30 ರೂಪಾಯಿ
ಸಿರಿವಂತ -ತುಂಬಾ ದುಬಾರಿಯಾಯಿತಲ್ಲ.
ಬಾಲಕ - 20 ರೂ. ಕೊಡಿ.
ಸಿರಿವಂತ -ಇದೂ ದುಬಾರಿಯೇ...!
ಬಾಲಕ - ಇದು ಕಾಯಿಯ ಬೆಲೆಯಲ್ಲ, ಮರದಿಂದ ಕಾಯಿ ಇಳಿಸಿದ್ದರ ಬೆಲೆ.
ಸಿರಿವಂತ -ಒಂದು ವೇಳೆ ನಾನೇ ಕಾಯಿ ಇಳಿಸಿದರೆ?
ಬಾಲಕ - ನೀವೇ ಇಳಿಸುವುದಾದರೆ ಅದಕ್ಕೇನೂ ಬೆಲೆ ಕೊಡಬೇಕಾಗಿಲ್ಲ, ನೀವು ಎಷ್ಟು ಬೇಕು ಅಷ್ಟು ಇಳಿಸಿಕೊಳ್ಳಬಹುದು.
ಆಗಲಿ ಎಂದವನೇ ಸಿರಿವಂತ ಮರವನೇರತೊಡಗಿದ. ''ಸಿರಿವಂತರೇ ತಮಗೆ ವಯಸ್ಸಾಗಿದೆ ಹುಶಾರಾಗಿರಿ'' ಎಂದು ಹೇಳಿ ಬಾಲಕ ದೂರಸರಿದು ನಿಂತ. ಸಿರಿವಂತ ನೂರಾರು ಕಾಯಿ ಇಳಿಸಿದ. ಮರದ ತುದಿಯಲ್ಲಿ ಒಂದೇ ಒಂದು ಕಾಯಿ ಉಳಿದಿತ್ತು. ಸಿರಿವಂತ ಅದಕ್ಕೂ ಕೈ ಹಾಕಿದ. ಬಾಲಕ ಹೇಳಿದ- ''ಅದೊಂದಾದರೂ ಇರಲಿ ಬಿಡಿ!'' ಸಿರಿವಂತ ಹೇಳಿದ- ''ಭಾಗ್ಯದ ಲಕ್ಷ್ಮಿ ಕೈಗೆ ಬಂದಾಗ ಬಿಡಬಾರದು! ನಿನಗೇನು ತಿಳಿಯುತ್ತದೆ. ಇಂಥ ಅವಕಾಶ ಮತ್ತೆ ಮತ್ತೆ ಬರುವುದಿಲ್ಲ!'' ಬಾಲಕ ಹೇಳಿದ ''ಹಾಗಾದರೆ ನಾನು ಏನೂ ಹೇಳಲಾರೆ, ನಿಮ್ಮ ಇಷ್ಟ!'' ಸಿರಿವಂತ ಆ ಕೊನೆಯ ಕಾಯಿ ಹರಿಯಲು ಕೈಚಾಚಿದ, ಕಾಲುಜಾರಿ ಕೈಯಲ್ಲಿ ತೆಂಗು ಹಿಡಿದುಕೊಂಡೇ ನೆಲಕ್ಕೆ ಬಿದ್ದಿದ್ದ. ಪ್ರಾಣಪಕ್ಷಿ ಹಾರಿಹೋಗಿತ್ತು. ಆ ಮುದುಕನ ಪ್ರಾಣವನ್ನು ತೆಗೆದದ್ದು ಕಾಯಿಯಲ್ಲ, ಅವನ ಅತಿ ಆಸೆ. ಕೃಪೆ:ವಿಜಯ ಕರ್ನಾಟಕ.
No comments:
Post a Comment