ಕಥೆ-911
ಅನುಭವವೇ ನಮ್ಮ ಜೀವನದ ಮಹಾಗುರು.
https://basapurs.blogspot.com/
ಅನುಭವವೇ ನಮ್ಮ ಜೀವನದ ಮಹಾಗುರು. ಅದು ಕಲಿಸುವ ಪಾಠ ಅರಿವನ್ನು ಮೂಡಿಸುತ್ತದೆ. ಆದ್ದರಿಂದಲೇ ಗುರು, ಹಿರಿಯರ ಅನುಭವದ ಮಾತುಗಳಿಗೆ ನಾವು ತಲೆಬಾಗಬೇಕು. ಇದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಅಲ್ಲದೆ, ಸರಳ ಸುಂದರ ಜೀವನಕ್ಕೆ ಈ ಅನುಭವವೇ ಅಡಿಪಾಯ ಆಗುತ್ತದೆ.
ಒಂದು ಪುಟ್ಟ ಹಳ್ಳಿ. ಅವರಿವರ ಮನೆಗೆಲಸ ಮಾಡಿ ಮಗನನ್ನು ಬೆಳೆಸಿದ ಗೌರಮ್ಮ ಎಂದರೆ ಹಳ್ಳಿಯವರಿಗೆಲ್ಲ ಬಹಳ ಗೌರವ, ಬೆಳೆದು ನಿಂತ ಮಗನಿಗೆ ಸುಂದರವಾದ ಹುಡುಗಿಯನ್ನು ಹುಡುಕಿ ಗೌರಮ್ಮ ಮದುವೆ ಮಾಡಿದಳು. ವರ್ಷದೊಳಗೆ ಮನೆಯಲೆಲ್ಲಾ ಕಾಲೆಜ್ಜೆನಾದ ತುಂಬಿತು. ಅಂದು ಜೋರಾದ ಗಾಳಿ ಬೀಸಿ ಮನೆಯ ಮಾಳಿಗೆಯ ಕೆಲವು ಹೆಂಚುಗಳು ಮುರಿದು ಬಿದ್ದವು. ಸುಡು ಬಿಸಿಲಿದ್ದರೂ ಮಗ ಮಾಳಿಗೆಯ ಮೇಲೆ ಹತ್ತಿ ಹೆಂಚುಗಳನ್ನು ಬದಲಾಯಿಸುತ್ತಿದ್ದ. ಇದನ್ನು ಗಮನಿಸಿದ ತಾಯಿ, 'ಒಳಗೆ ಬಾ ಮಗನೆ, ಅಮೇಲೆ ಮಾಡಿದರಾಯಿತು' ಎಂದು ಗೋಗರೆದಳು. ತಾಯಿಯ ಮಾತು ಕೇಳಿಸಿದರೂ ಕೇಳಿಸದಂತೆ ಕೆಲಸ ಮಾಡುವುದನ್ನು ಮಗ ಮುಂದುವರಿಸಿದ. ಹಲವು ಬಾರಿ ಕರೆದರೂ ಬಾರದ ಮಗನಿಗೆ ಬುದ್ದಿ ಕಲಿಸಲು ಗೌರಮ್ಮ ಒಂದು ಉಪಾಯ ಮಾಡಿದಳು. ಮೊಮ್ಮಗುವನ್ನು ಎತ್ತಿಕೊಂಡು ಹೊರಗೆ ಬಿಸಿಲಿನಲ್ಲಿ ಚಾಪೆಯ ಮೇಲೆ ಮಲಗಿಸಿದಳು. ಬಿಸಿಲಿನ ತಾಪಕ್ಕೆ ಮಗು ಅಳಲಾರಂಭಿಸಿತು. ಇದನ್ನು ಕಂಡ ಮಗ ಸರಸರನೇ ಕೆಳಗಿಳಿದು ಮಗುವನ್ನು ಎತ್ತಿ ಮುದ್ದಿಸಿದ. ತಾಯಿಯನ್ನು ಏಕೆ ಹೀಗೆ ಮಾಡಿದೆ? ಎಂದು ಗದರಿಸಿದ. ಆಗ ತಾಯಿ, 'ಮಗನೇ, ಈಗ ನಿನಗೆ ಆದ ಕಷ್ಟದ ಅನುಭವವೇ ನನ್ನ ಮಗನಾದ ನೀನು ಬಿಸಿಲಿನಲ್ಲಿ ಇದ್ದಾಗ ನನಗೂ ಆಯಿತು' ಎಂದು ಹೇಳಿ ಒಳನಡೆದಳು. ಮಗನ ಕಣ್ಣಂಚಿನಲ್ಲಿ ನೀರಾಡಿತು. ತಾಯಿ ತನಗೆ ಏಕೆ ಹಾಗೆ ಹೇಳಿದ್ದಳೆಂದು ಮನವರಿಕೆಯಾಯಿತು.
ಹೀಗೇ ಅಲ್ಲವೇ, ಅನುಭವಗಳಿಂದಲೇ ನಾವು ಜೀವನದ ಪಾಠವನ್ನು ಕಲಿಯುವುದು? ಅನುಭವ ಇರುವಲ್ಲಿ ಅಮೃತತ್ವವಿದೆ ಎಂದು ಹಿರಿಯರು ಹೇಳುತ್ತಾರೆ. ಇದು ಅನುಭವದ ಮಾತು. ನಾವು ಅತಿ ಜಾಣತನ, ಜಾಗರೂಕತೆ ಹಾಗೂ ಲೆಕ್ಕಾಚಾರದ ಜೀವನ ಮಾಡಿ ಸುಂದರ ಅನುಭವಗಳನ್ನು ಕಳೆದುಕೊಳ್ಳುತ್ತೇವೆ. ಸೋತರೂ ಎದ್ದು ನಿಲ್ಲುವ ಶಕ್ತಿಯನ್ನು ಅನುಭವಗಳು ನಮಗೆ ನೀಡುತ್ತವೆ. ಸ್ವಂತ ಅನುಭವದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ನಾವು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಜೀವನದಲ್ಲಿ ಬಹಳಷ್ಟನ್ನು ಅನುಭವಿಸಿಯೇ ಕಿರಿಯರೂ ಹಿರಿಯರೂ ಕಲಿಯಬೇಕು!
-ಆರಶ್ಮಿ ಕೆ.
No comments:
Post a Comment