ಕಥೆ-933
ಪರಿಪೂರ್ಣ ವಿಕಾಸ
ಅರವಿಂದ ಮಹರ್ಷಿಗಳು ಮನುಷ್ಯನು ಪರಿಪೂರ್ಣ ವಿಕಾಸವಾಗಬೇಕು ಎಂದು ಹೇಳುತ್ತಾರೆ. ನಾವು ಮನುಷ್ಯರಾಗಿ ಹುಟ್ಟಿದರೂ ಚಿಂತೆಯಿಲ್ಲ. ಆದರೆ ದೇವಮಾನವರಾಗಿ ಬೆಳೆಯಬೇಕು ಎಂಬುದು ಅರವಿಂದ ಮಹರ್ಷಿಗಳ ಅಭಿಪ್ರಾಯವಾಗಿದೆ. ಒಂದು ಬೀಜ ಸಣ್ಣದಿರಬಹುದು. ಆದರೆ ಅದರಲ್ಲಿ ಒಂದು ಹೆಮ್ಮರವೇ - ಹುದುಗಿದೆ. ಒಂದಿಷ್ಟು ನೀರು, ಮಣ್ಣು, ಗಾಳಿ, ಬೆಳಕು ದೊರೆತರೆ - ಸಾಕು. ಅದೇ ಬೀಜವು ಬೃಹತ್ ವೃಕ್ಷವಾಗಿ ಬೆಳೆದು ನಿಲ್ಲುತ್ತದೆ. ತೊಟ್ಟಿಲಲ್ಲಿರುವ ಮಗುವು ಬೀಜದಂತೆ ಚಿಕ್ಕದಾಗಿರಬಹುದು. ಆದರೆ ಅದೇ ಮಗುವಿನಲ್ಲಿ ತತ್ವಜ್ಞಾನಿ, ಕವಿ, ಕಲಾವಿದ, ಯೋಗಿ, ತ್ಯಾಗಿ ಹುದುಗಿದ್ದಾನೆ. ಯೋಗ್ಯ ಪರಿಸರ, ಪ್ರೇರಣೆ, ಪ್ರೋತ್ಸಾಹ ದೊರೆತರೆ ಸಾಕು ಅದೇ ಮಗು ಮಹಾತ್ಮನಾಗಿ ಬೆಳೆದು ಲೋಕವಂದ್ಯನಾಗುತ್ತಾನೆ. ಮಹರ್ಷಿಗಳ ಪ್ರಕಾರ ಮೂಲತಹ ನಾವೆಲ್ಲರೂ ದೈವಿ ಸ್ವರೂಪರೇ ಆಗಿದ್ದೇವೆ. ಆದರೆ ಅದನ್ನು ಅರಳಿಸುವ ಪ್ರಯತ್ನ ಪರಿಶ್ರಮ ಮಾಡಬೇಕಷ್ಟೆ.
ಡಾರ್ವಿನ್ರ ಪ್ರಕಾರ ಏಕಾಣು ಜೀವಿಯೇ ಮಂಗನಾಗಿ ಬೆಳೆದು ಮರವೇರಿದ. ಕಾಲಕ್ರಮೇಣ ಅದೇ ಮಂಗವು ಮರದಿಂದ ಕೆಳಗೆ ಇಳಿದು ಮಾನವನಾದ. ಅರವಿಂದ ಮಹರ್ಷಿಗಳ ಪ್ರಕಾರ ಈ ಮಾನವನೇ ನಿರಂತರ ಸಾಧನೆಯಿಂದ ದೇವಮಾನವನಾಗಿ ಬೆಳೆಯಬೇಕು ಎನ್ನುತ್ತಾರೆ. ಇದು ದೈಹಿಕ ಅಥವಾ ಬಹಿರಂಗದ ಬೆಳವಣಿಗೆ ಅಲ್ಲ. ಇದು ಅಂತರಂಗದ ಅಥವಾ ಮಾನಸಿಕ ಬೆಳವಣಿಗೆ. ಮನಸ್ಸೇ ವಿಕಾಸವಾಗಿ ಅತಿಮಾನಸವಾಗುತ್ತದೆ ಉದಾತ್ತ ಮನಸ್ಸಾಗುತ್ತದೆ.
ಒಂದು ಆಲದ ಬೀಜ, ಅದನ್ನು ಚಿಕ್ಕ ಹೂದಾನಿಯಲ್ಲಿಟ್ಟು ಎರಡು ಮುಟ್ಟಿಗೆ ಮಣ್ಣು ಹಾಕಿ, ಎರಡು ಬಟ್ಟಲು ನೀರು ಹನಿಸಿದರೆ ಅದು - ಹೆಮ್ಮರವಾಗಿ ಹೇಗೆ ಬೆಳೆಯುತ್ತದೆ? ಇಪ್ಪತ್ತು ಮೂವತ್ತು ವರುಷ ಬೆಳೆದರೂ ಹೂದಾನಿಯನ್ನು ಬಿಟ್ಟು ಅದು ಹೊರಗೆ ಬರುವುದಿಲ್ಲ. ಮುಗಿಲೆತ್ತರಕ್ಕೆ ಬೆಳೆಯದೆ, ನೆಲವನ್ನೇ ನೋಡುತ್ತಿರುತ್ತದೆ. ಅದನ್ನೆ ಬೊನ್ಸಾಯ್ ಮರವೆಂದು ಹೇಳುವುದು. ಪ್ರಪಂಚದಲ್ಲಿ ನೀರು, ಗಾಳಿ, ಬೆಳಕು, ನೆಲ ಇಷ್ಟೊಂದು ವಿಸ್ತಾರವಾಗಿರುವಾಗ ನಾವೇಕೆ ಕುಬ್ಬರಾಗಿ ಉಳಿಯಬೇಕು.? ವಿಸ್ತಾರವಾಗಿ ಬೆಳೆದು ಹೃದಯ ವೈಶಾಲ್ಯಗಳಿಸಿ ವಿಶ್ವಪ್ರೇಮಿಗಳಾಗಿ ಶೋಭಿಸಬೇಕು. ಅದು ಅರವಿಂದರು ಹೇಳುವ ಪೂರ್ಣಯೋಗ. ಹಣವನ್ನು ಗಳಿಸಿ ಸಿರಿವಂತನಾಗುವುದು ಕಷ್ಟದ್ದಿರಬಹುದು. ಆದರೆ ಗುಣವನ್ನು ಗಳಿಸಿ ಹೃದಯವಂತನಾಗುವುದು ಕಷ್ಟದ್ದೇನಲ್ಲ. ಅದಕ್ಕೆ ವಿಶಾಲವಾದ ಮನಸ್ಸು ಬೇಕು ಅಷ್ಟೇ.
ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment