ಕಥೆ-978
ರೈತರ ಸಂಭ್ರಮದ ಹಬ್ಬ, ಎಳ್ಳು ಅಮಾವಾಸ್ಯೆ,
ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ, ಚೆರಗ ಚೆಲ್ಲುವುದು ಎಂದರೆ ರೈತಾಪಿ
ಸ್ತ್ರೀಯರು ತಮ್ಮ ಸೀರೆಯ ಚೆರಗಿನಲ್ಲಿ ಅಂದರೆ ಅಂಚಿನಲ್ಲಿ ಕೆಲವು ವಸ್ತುಗಳನ್ನು ಹಾಕಿಕೊಂಡು, ದೇವರು-ಪಿತೃರನ್ನು ಸ್ಮರಿಸಿ, ಭಕ್ತಿಯಿಂದ ಭೂಮಿಗೆ ಅರ್ಪಿಸುವುದು ಎಂದರ್ಥ.
ಇನ್ನೊಂದು ನಂಬಿಕೆ ಪ್ರಕಾರ ಹೊಲಗಳಲ್ಲಿ ಬೆಳೆದು ನಿಂತ ಪೈರು ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವುದನ್ನು ಚರಗ ಎನ್ನುತ್ತಾರೆ.
ಹಳೆಯ ನೆನಪುಗಳು ಬಹಳ ಚಂದ, ಅದೆಂದರೆ, ಬಂಡಿಯ ಗರಗರ ಸದ್ದು, ಎತ್ತಿನ ಗುಮರಿಗಳ ನಾದ, ಗೆಜ್ಜೆಗಳ ಸದ್ದು, ಮೈ ಮೇಲಿನ ಜಗ ಮಗಿಸುವ ಝೂಲ, ಎತ್ತಿನ ಸಿಂಗಾರ, ಸುಂದರವಾದ ದೃಶ್ಯ ಈಗಲೂ ಮತ್ತೆ ಮತ್ತೆ ಕಾಡುತ್ತದೆ.
“ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ” ಎಂದು ಹೇಳುತ್ತಾ ತಳದಲ್ಲಿರುವ ಹುಲ್ಲಿಗೂ ಮತ್ತು ಅಂಬರಕ್ಕೂ ನೈವೇದ್ಯ ಅರ್ಪಣೆ ಎನ್ನುವ ಧನ್ಯತಾ ಭಾವನೆ ರೈತರದ್ದು..
ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಪೈರುಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ ಎಂದು ನಂಬಲಾಗಿದೆ
ಈ ಬಾರಿ ನನ್ನ ಎಳ್ಳ ಅಮವಾಸ್ಯೆ ಹಬ್ಬದ ಆಚರಣೆ ದೋಟಿಹಾಳದಲ್ಲಿ ನೆರವೇರಿತು.. ಕುಟುಂಬದ ಸದಸ್ಯರು, ಬಂಧುಗಳು ಸ್ನೇಹಿತರು ಎಲ್ಲರೂ ಒಂದೇ ಕಡೆ ಕುಳಿತುಕೊಂಡು ಊಟ ಮಾಡಿ ಸಂಭ್ರಮಿಸುತ್ತ, ನಂತರ ಹಸಿ ಕಡಲೆ ಗಿಡಗಳನ್ನು ಕಿತ್ತಿ ಕಾಯಿಗಳ ಸ್ವಾದವನ್ನು ಆಸ್ವಾದಿಸುತ್ತ, ಬಂದಿರುವ ಬಂಧುಗಳಿಗೆ, ಸ್ನೇಹಿತರಿಗೂ ಸಹ ಕಡಲೆ ಗಿಡಗಳನ್ನು ಕೊಟ್ಟು ಸಂಭ್ರಮಿಸೋದು ಇದೆ ಅಲ್ಲಾ ಅದು ಬಹಳ ಚಂದ..
ನಮ್ಮಲ್ಲಿನ ಪ್ರತಿಯೊಂದು ಹಬ್ಬವೂ ಸಹ ಒಂದು ಭಾವೈಕ್ಯತೆಯನ್ನು ಸಾರುತ್ತದೆ..
ಎಳ್ಳು ಅಮಾವಾಸ್ಯೆ, ರೈತರು ಸಂಭ್ರಮಿಸುವ ಹಬ್ಬವಾಗಿದ್ದು, ನಾಲ್ಕಾರು ಸ್ನೇಹಿತರ ಜೊತೆ ಜಾತಿ, ಮತ ಭೇದವಿಲ್ಲದೇ ಸಹೋದರರಲ್ಲಿ ಏಕತೆಯನ್ನು ನೆರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಮೂಡಿಸುವ ಒಂದು ರೀತಿಯ ಪಿಕ್ನಿಕ್ ಆಗಿದೆ..
No comments:
Post a Comment