ಕಥೆ-967
ಕೊರೋನಾ ಕಾಲದ ಕರುಣೆಯ ಕಥೆ (ಒಂದು ನಿಜವಾದ ಘಟನೆ)
ಜೀವನ ಮತ್ತು ಮರಣದ ಹೋರಾಟದ ಕಹಿ ನೆನಪು ಎಂದರೆ ಕರೋನ ಸಂದರ್ಭ. ಜನನ ಮತ್ತು ಮರಣ ಮಧ್ಯೆ ನಾವು ಹೇಗೆ ಬದುಕುತ್ತೇವೆ ಎಂಬುದು ನಮ್ಮ ಆಯ್ಕೆಯ ಮೇಲೆ ಅವಲಂಬಿತವಾಗಿದೆ.
2020ರ ಮಾರ್ಚ್ 24ರಂದು ದಕ್ಷಿಣ ಭಾರತದ ಮದುರೈ ನಗರದಲ್ಲಿ ಕೊರೊನಾ ಕಾರಣದಿಂದ ಲಾಕ್ಡೌನ್ ಘೋಷಿಸಲಾಯಿತು. ಅಲ್ಲಿ ಇದ್ದ ವಲಸಿಗರು ತಕ್ಷಣವೇ ತಮ್ಮ ತಮಿಳುನಾಡಿನ ಮೂಲ ಗ್ರಾಮಗಳಿಗೆ ಹಿಂತಿರುಗಬೇಕಾಯಿತು. ಎಲ್ಲವೂ ತುಂಬಾ ವೇಗವಾಗಿ, ನಡೆಯುತ್ತಿತ್ತು… ನಾವೆಲ್ಲರೂ ಆ ಕಾಲದ ಸಾಕ್ಷಿಗಳೇ. ಅನೇಕ ಬಡ ಕಾರ್ಮಿಕರು ಊರಿಗೆ ಹಿಂದಿರುಗುವಾಗ, ಕೆಲವರಿಗೆ ಪಾದರಕ್ಷೆಗಳೇ ಇರಲಿಲ್ಲ, ಕೆಲವರ ಬಟ್ಟೆಗಳು ಹರಿದು ಹಾಳಾಗಿ ಹೋಗಿದ್ದವು, ಚಿಕ್ಕ ಮಕ್ಕಳು ಹಸಿವಿನಿಂದ ಅತ್ತರು ಇಂತಹ ದೃಶ್ಯ ತುಂಬಾ ಕರಾಳವಾಗಿತ್ತು.
ಈ ದೃಶ್ಯ ಮಧುರೈನಲ್ಲಿ ವಾಸಿಸುತ್ತಿದ್ದ ನೇತ್ರಾ ಎಂಬ ಮಗುವಿನ ಮನಸ್ಸನ್ನು ಆಳವಾಗಿ ಕದಡಿತು. ಅಷ್ಟು ಜನ ಕಷ್ಟದಲ್ಲಿರುವುದನ್ನು ಕಂಡು ಅವಳಿಗೆ ನಿದ್ದೆಯೇ ಬಾರದಷ್ಟು ತಲ್ಲಣವಾಯಿತು. ‘ನಾನು ಇವರಿಗಾಗಿ ಏನು ಮಾಡಬಹುದು?’ ಎಂಬ ಚಿಂತೆಯೇ ಅವಳನ್ನು ಕಾಡಿತು. ಆ ಚಿಂತೆಯೇ ಅವಳನ್ನು ತಂದೆಯ ಬಳಿಗೆ ಕರೆದೊಯ್ದಿತು.
ಅವಳ ತಂದೆ ಶ್ರೀ ಸಿ. ಮೋಹನ್ ಅವರು ಕ್ಷೌರಕಾರರಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಸಂಬಳವಿರಲಿಲ್ಲ. ಆದರೂ ತಮ್ಮ ಮಗಳ ಶಿಕ್ಷಣಕ್ಕಾಗಿ ಬಹಳ ವರ್ಷಗಳ ಪರಿಶ್ರಮದಿಂದ ₹5,00,000 ಸಂಗ್ರಹಿಸಿದ್ದರು. UPSC ಪರೀಕ್ಷೆ ಬರೆಯುವುದು ನೇತ್ರಾದ ಕನಸು. ಆದರೆ ನೇತ್ರಾ ತಂದೆಯನ್ನು ಕೇಳಿದ್ದು.. “ಅಪ್ಪಾ, ದಯವಿಟ್ಟು ನನ್ನ ಓದಿಗಾಗಿ ನೀವು ಸಂಗ್ರಹಿಸಿದ ಹಣವನ್ನೆಲ್ಲ ಈ ಬಡ ಜನರಿಗೆ ನೆರವಾಗಲು ಬಳಸಿ.”
ತಂದೆಗೆ ಏನು ಹೇಳುವುದು ತಿಳಿಯಲಿಲ್ಲ. ಭಾರವಾದ ಹೃದಯದಿಂದ ಹೇಳಿದರು,
“ಮಗಳೇ, ಅಷ್ಟು ಜನರಿಗೆ ಸಹಾಯ ಮಾಡಲು ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಹಾಗೆಯೇ ನಿನ್ನ ಶಿಕ್ಷಣಕ್ಕೆ ನಾನು ಮತ್ತೆ ಹಣವನ್ನು ಹೇಗೆ ಜೋಡಿಸಲಿ?”
ಅದಕ್ಕೆ ನೇತ್ರಾ ತಕ್ಷಣ ಉತ್ತರಿಸಿದಳು:
“ಅದಕ್ಕಾಗಿ ನೀವು ಚಿಂತಿಸಬೇಡಿ ಅಪ್ಪಾ. ಅದನ್ನು ಬಿಡಿ. ನೀವು ನನ್ನ ಓದಿಗಾಗಿ ಉಳಿಸಿದ ಈ ಹಣವನ್ನು ಈ ಬಡ ಕಾರ್ಮಿಕರಿಗೆ ಬಳಸಿ.”
ನೇತ್ರಾಳ ನಿಸ್ವಾರ್ಥ ಮನಸ್ಸು ತಂದೆಯ ಹೃದಯವನ್ನೇ ಸ್ಪರ್ಶಿಸಿತು. ಅವರು ನಿರಾಕರಿಸಲಾರದೆ ಒಪ್ಪಿಕೊಂಡರು. ನಂತರ ನೇತ್ರಾ ತನ್ನ ಬಳಿ ಇರುವವರನ್ನು ಕೂಡಿಸಿ ಒಂದು ತಂಡ ರಚಿಸಿ. ಆಹಾರ ಪ್ಯಾಕೆಟ್ಗಳು, ಬಟ್ಟೆ, ಅಗತ್ಯ ಸಾಮಗ್ರಿಗಳನ್ನು ಮಾಡಿ ಆ ಬಡ ಜನರಿಗೆ ನೀಡಲು ಶುರು ಮಾಡಿದಳು.
ಅವರ ಈ ಹೃದಯಸ್ಪರ್ಶಿ ಕಾರ್ಯ ಎಲ್ಲರಿಗೂ ತಲುಪಿ ಜನರ ಮನಗಳನ್ನು ಮುಟ್ಟಿತು. ಪತ್ರಿಕೆಗಳ ಮೂಲಕ ಈ ವಿಷಯ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೂ ತಲುಪಿತು. ‘ಮನ ಕಿ ಬಾತ್’ ಕಾರ್ಯಕ್ರಮದಲ್ಲಿಯೇ ಅವರು ನೇತ್ರಾಳ ಬಗ್ಗೆ ಮಾತನಾಡಿದರು — ತನ್ನ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನೆಲ್ಲ ಬಡವರಿಗೆ ಕೊಟ್ಟ ಆ ಬಾಲಕಿಯ ನಿಸ್ವಾರ್ಥ ಸೇವೆಯನ್ನು ಹೊಗಳಿದರು. ನಂತರ ಈ ಸುದ್ದಿ UNಗೂ ತಲುಪಿದ್ದು, UNDAP ನೇತ್ರಾಳನ್ನು ಬಡವರಿಗಾಗಿ ‘ಗುಡ್ವಿಲ್ ಅಂಬರ್ಸೆಡರ್’ ಆಗಿ ನೇಮಿಸಿತು.
ಈ ಎಲ್ಲದರ ಬಗ್ಗೆ ನೇತ್ರಾಗೆ ಕೇಳಿದಾಗ, ಅವಳು ಹೇಳಿದ್ದು:
“ನಾವು ಏನು ಮಾಡುತ್ತಿದ್ದೇವೆ ಅದು ಬಹಳ ಮುಖ್ಯವಾಗುತ್ತದೆ.. ಮುಂದೇನು ಆಗುತ್ತದೆ ಯಾವುದೂ ಗೊತ್ತಿರಲ್ಲ. ನಮ್ಮ ಏಕೈಕ ಉದ್ದೇಶ ಬಡವರಿಗೆ ಸಹಾಯ ಮಾಡುವುದು. ಈಗ ಇಷ್ಟು ಪ್ರೋತ್ಸಾಹ ಸಿಕ್ಕಿರುವುದು ಜನಸೇವೆಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ.”
ಸಿವಿಲ್ ಸರ್ವಂಟ್ ಆಗಬೇಕೆನ್ನುವ ಅವಳ ಕನಸಿಗೆ ತಕ್ಕಂತೆ, ‘ಬಡತನ ನಿರ್ಮೂಲನೆ’ ಕುರಿತು UN ವೇದಿಕೆಯಲ್ಲಿ ಮಾತನಾಡುವ ಅವಕಾಶ ದೊರೆತದ್ದು ನನ್ನ ಪುಣ್ಯ ಎಂದು ಹೇಳುತ್ತಾಳೆ..
ಎಷ್ಟೋ ಜನ IAS ಮಾಡಬೇಕು, ಜನರ ಸೇವೆ ಮಾಡಬೇಕೆಂದು ಅಂದುಕೊಳ್ಳುತ್ತಾರೆ, ಅಲ್ಲದೆ ಪರೀಕ್ಷೆ ಪಾಸ್ ಆಗುತ್ತಾರೆ ನಂತರ ಆ ಪದವಿ ಏರಿದ ನಂತರ ಬಡಜನರನ್ನು/ ಸಮಾಜ ಸೇವೆಯನ್ನು ಮರೆತುಬಿಡುತ್ತಾರೆ... ಸೇವೆ ಮಾಡಬೇಕು ಅಂದರೆ ಹುದ್ದೆಯಲ್ಲಿ/ ಪದವಿಯಲ್ಲಿ ಇರಬೇಕೆಂದೇನಲ್ಲ.. ಸೇವೆ ಮಾಡಬೇಕೆಂಬ ಮನಸ್ಥಿತಿ ಗಟ್ಟಿಯಾಗಿರಬೇಕು...
ತಮಿಳುನಾಡು ಸರ್ಕಾರ ನೇತ್ರಾಳ ಸಂಪೂರ್ಣ ವಿದ್ಯಾಭ್ಯಾಸವನ್ನು ಉಚಿತಗೊಳಿಸಿದೆ.
ಬಹಳ ಸಮಸ್ಯೆಗಳ ಬೇರು — ನಾವು ಹೃದಯದ ಮಾತು ಕೇಳದೆ ಇರುವುದರಲ್ಲಿ ಇದೆ.
ಎಲ್ಲರೂ ಹೃದಯದ ಮೂಲಕವೇ ಸಂಪರ್ಕಿತರಾಗಿದ್ದೇವೆ.”
ನೇತ್ರಾ ತನ್ನ ಹೃದಯದ ಮಾತನ್ನು ಅನುಸರಿಸಿದಾಗ, ಸಾವಿರಾರು ಜನರ ಹೃದಯಗಳನ್ನು ಗೆದ್ದಳು. ಪೋಷಕರು ಮಾತ್ರವಲ್ಲ — ದೇಶ, ಜಗತ್ತು… ಇಂತಹ ಮಕ್ಕಳನ್ನು ಬಯಸುತ್ತದೆ..
— ದಾಜೀ
No comments:
Post a Comment