ಕಥೆ-1007
ಆಗುವದೆಲ್ಲ ಒಳ್ಳೆಯದಕ್ಕೆ
ಹಿಂದೆ ವೀರಸೇನನೆಂಬ ಶೂರನಾದ ರಾಜನಿದ್ದನು. ಅವನಿಗೊಬ್ಬ ಎಡವಟ್ಟು ಮಂತ್ರಿಯಿದ್ದನು ರಾಜ್ಯದಲ್ಲಿ ಏನೇ ಸಂಭವಿಸಿದರು ಮತ್ತು ಯಾರು ಏನೇ ಹೇಳಿದರು ಅದಕ್ಕೆ ಅವನು 'ಆಗುವದೆಲ್ಲ ಒಳ್ಳೆಯದಕ್ಕೇ ಆಯಿತು' ಎನ್ನುತ್ತಿದ್ದನು. ಇದರಿಂದ ರಾಜನಿಗೆ ಒಮ್ಮೊಮ್ಮೆ ಬೇಸರವೂ ಮತ್ತು ಕೋಪವೂ ಬರುತ್ತಿತ್ತು.
ಒಮ್ಮೆ ನೆರೆಯ ರಾಜ್ಯದ ರಾಜನು ವೀರಸೇನನ ರಾಜ್ಯದ ಮೇಲೆ ದಾಳಿ ಮಾಡಿದನು. ವೀರಸೇನನು ಶೂರತನದಿಂದ ಹೋರಾಡಿ ನೆರೆಯ ರಾಜ್ಯದ ರಾಜನನ್ನು ಸೋಲಿಸಿದ್ದನು, ಯುದ್ಧದಲ್ಲಿ ವೀರಸೇನನಿಗೆ ಖಡ್ಗದ ಮೊನೆ ತಾಕಿ ಕೈ ಬೆರಳು ಕೊಂಚ ಕತ್ತರಿಸಿತ್ತು. ಅದನ್ನು ಮಂತ್ರಿಯು ನೋಡಿ "ಆಗುವುದೆಲ್ಲ ಒಳ್ಳೆಯದಕ್ಕೆ ಆಯಿತು" ಎಂದನು. ಮಂತ್ರಿಯ ಈ ಮಾತಿನ ಚಾಳಿಯನ್ನು ಕೇಳಿ ರಾಜನು ಕೋಪಿಸಿಗೊಂಡು ಮಂತ್ರಿಯನ್ನು ಬಂಧಿಸಿ ಸೆರೆಮನೆಯಲ್ಲಿಟ್ಟನು. ಆಗಲೂ ಮಂತ್ರಿಯು "ಆಗುವದೆಲ್ಲ ಒಳ್ಳೆಯದಕ್ಕೆ ಆಯಿತು" ಎಂದನು.
ಹೀಗಿರುವಾಗ ವೀರಸೇನನು ತನ್ನ ಕೈ ಬೆರಳಿನ ನೋವಿನ ಉಪಸಮನಕ್ಕಾಗಿ ಹಾಗೂ ವನ ವಿಹಾರವೂ ಆದಂತಾಯಿತೆಂದೂ ತನ್ನ ಸೈನಿಕರೊಡನೆ ಅರಣ್ಯಕ್ಕೆ ಭೇಟಿಯಾಡಲು ಹೋದನು. ಅರಣ್ಯದಲ್ಲಿ ಭೇಟಿಯಾಡುವ ಸಮಯದಲ್ಲಿ ಸೈನಿಕರೊಂದು ಕಡೆ, ರಾಜನೊಂದು ಕಡೆ ಬೇರೆ ಬೇರೆಯಾದರು. ರಾಜನಿಗೆ ಅರಮನೆಯ ದಾರಿ ಗೊತ್ತಾಗದೇ ಅಲೆದಾಡತೊಡಗಿದನು. ಆಗ ಅರಣ್ಯದಲ್ಲಿರುವ ಕಾಡು ಜನರ ಕೈಯಲ್ಲಿ ಸಿಕ್ಕಿಹಾಕಿಕೊಂಡನು. ಕಾಡು ಜನರು ರಾಜನನ್ನು ತಮ್ಮ ದೇವರಿಗೆ ಬಲಿ ಕೊಡಬೇಕೆಂದು ರಾಜನ ಅವಯವಗಳೆಲ್ಲವನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ರಾಜನ ಬೆರಳು ಕೊಂಚ ಕತ್ತರಿಸಿದ್ದರಿಂದ “ಇವನು ನಮ್ಮ ದೇವರಿಗೆ ಬಲಿ ಕೊಡಲು ಯೋಗ್ಯನಲ್ಲ" ಎಂದು ತೀರ್ಮಾನಿಸಿ ಕಾಡು ಜನರು ರಾಜನನ್ನು ಬಿಡುಗಡೆ ಮಾಡಿದರು. ರಾಜನಿಗೆ ಮರುಜೀವ ಬಂದಂತಾಗಿ ಹೇಗೋ ಅರಮನೆ ತಲುಪಿದನು.
ರಾಜನು ಅರಮನೆಗೆ ಬಂದ ಕೂಡಲೇ ಸೆರೆಮನೆಯಲ್ಲಿದ್ದ ಮಂತ್ರಿಯನ್ನು ಬಿಡುಗಡೆಗೊಳಿಸಿದನು. ಮಂತ್ರಿಗಳೇ ನೀವು ಯಾವಾಗಲೂ ಹೇಳುವ "ಆಗುವದೆಲ್ಲ ಒಳ್ಳೆಯದಕ್ಕೆ ಆಯಿತು" ಎಂಬ ಮಾತನ್ನು ನಾನು ಒಪ್ಪುತ್ತೇನೆ, ಎಂದು ಹೇಳಿ ಕಾಡಿನಲ್ಲಿ ನಡೆದ ಪ್ರಸಂಗವನ್ನು ತಿಳಿಸಿದನು. ಆಗ ಮಂತ್ರಿಯು “ಹೌದು ಪ್ರಭುಗಳೇ, ನೀವು ನನ್ನನ್ನು ಸೆರಮನೆಯಲ್ಲಿಡದ್ದಿದ್ದರೆ ನಾನು ನಿಮ್ಮೊಂದಿಗೆ ಭೇಟೆಗೆ ಬರಬೇಕಾಗುತ್ತಿತ್ತು. ಆಗ ಅಡವಿಯಲ್ಲಿರುವ ಕಾಡು ಜನರು ಕೈ ಬೆರಳು ಕತ್ತರಿಸಿಕೊಂಡಿರುವ ನಿಮ್ಮನ್ನು ಬಿಟ್ಟು ಸರಿಯಿರುವ ನನ್ನನ್ನು ತಮ್ಮ ದೇವರಿಗೆ ಬಲಿ ಕೊಡುತ್ತಿದ್ದರು ಎಂದು ಹೇಳಿ, "ಆಗುವದೆಲ್ಲ ಒಳ್ಳೆಯದಕ್ಕೆ ಆಯಿತು" ಎಂದು ಪುನರುಚ್ಚರಿಸಿದನು..
ಪ್ರತಿ ತಪ್ಪು ಅನುಭವವೂ ಒಂದು ಪಾಠ,
ನಾವು ಕಳೆದುಕೊಂಡದ್ದಕ್ಕಿಂತ, ಪಡೆದ ಪಾಠವೇ ಹೆಚ್ಚು ಮೌಲ್ಯವಾದದ್ದು.
ದುಃಖದ ಹಿಂದೆ ಸಂತೋಷದ ಬೀಜ ಅಡಗಿದೆ, ನಾಳೆ ಒಳ್ಳೆಯದು ಕಾದಿದೆ ಎಂಬ ಆಶಾಭಾವನೆ ಹೊಂದಿರಬೇಕು...
ಸಂಗ್ರಹ: ಸ್ವಾತಿ ಅರಮನೆ ಹಿರೇಮ್ಯಾಗೇರಿ
No comments:
Post a Comment