ಕಥೆ-1024
ಎಲ್ರಿಗೂ ಎಲ್ಲಾ ಹೊತ್ತೂ ಹಾಗೆ ಅನಿಸ್ಲೇಬೇಕು ಅಂತೇನಿಲ್ಲ.
ಚೀನಾದಲ್ಲಿ ಚೌ ಆಡಳಿತ ಕಾಲದಲ್ಲಿ ಸುಂಗ್ ಹೆಸರಿನ ಹಳ್ಳಿಲಿ ಒಬ್ಬ ರೈತ ಇದ್ದ, ಅವ್ನು ಯಾವಾಗ್ಲೂ ಒರಟಾದ ಸೆಣಬಿನ ಬಟ್ಟೆ ಮಾತ್ರ ತೊಟ್ಕೋತ್ತಿದ್ದ. ಚಳಿಗಾಲದಲ್ಲೂ ಅವ್ನು ಬೇರೆ ಬಟ್ಟೆ ಹಾಕ್ಕೊಳ್ತಾ ಇರ್ಲಿಲ್ಲ. ಗದ್ದೇಲಿ ಹೊಲ ಉಳುವಾಗ ಬಿಸಿಲಲ್ಲಿ ತನ್ನ ಮೈ ಬೆಚ್ಚಗೆ ಮಾಡ್ಕೊಳ್ತಿದ್ದ.
ದೊಡ್ ದೊಡ್ಡ ಅರಮನೆ, ಚಳಿಕಾಯಿಸೋ ಅಗ್ಗಿಷ್ಟಿಕೆ ಗೂಡು, ರೇಷ್ಮೆ ಬಟ್ಟೆ, ನರಿದೋ ತೋಳದ್ದೋ ತುಪ್ಪಳದ ಕೋಟು, ಇವೆಲ್ಲ ಇರತ್ತೆ ಅಂತಾನೇ ಅವ್ನಿಗೆ ಗೊತ್ತಿರಲಿಲ್ಲ. ಒಂದಿನ ಅವ್ನು ತನ್ನ ಹೆಂಡ್ತಿ ಹತ್ರ, “ಎಳೆ ಬಿಸಿಲಲ್ಲಿ ಬೆನ್ನು ಕಾಯಿಸ್ಕೊಳೋದು ಎಂಥಾ ಸುಖ ಅಂತ ತುಂಬಾ ಜನಕ್ಕೆ ಗೊತ್ತೇ ಇಲ್ಲ. ಇದನ್ನ ಹೋಗಿ ದೊರೆ ಹತ್ರ ಹೇಳ್ತೀನಿ. ಇಷ್ಟೊಳ್ಳೆ ವಿಚಾರ ಹೇಳಿದ್ದಕ್ಕೆ ಅವ್ನು ನಂಗೆ ಬಹುಮಾನ ಕೊಟ್ರೂ ಕೊಡ್ಬಹುದು” ಅಂದ. ಅಷ್ಟೇ ಅಲ್ಲ, ದೊರೆನ ಭೇಟಿ ಮಾಡಕ್ಕೆ ಅವಕಾಶ ಕೊಡ್ಸು ಅಂತ ಊರಿನ್ ಶ್ರೀಮಂತ ವ್ಯಾಪಾರಿ ಹತ್ರ ಹೋಗೂಬಿಟ್ಟ.
ಆ ಶ್ರೀಮಂತ ಅವ್ನು ಹೇಳಿದ್ದೆಲ್ಲ ಕೇಳಿ, “ನಿನ್ನನ್ ನೋಡಿ ನಮ್ಮಪ್ಪ ಹೇಳಿದ್ ಕತೆ ನೆನಪಾಯ್ತು. ಒಂದ್ ಸಲ ಒಬ್ಬಂಗೆ ಹಬೆಯಾಡೋ ಹದ ಬೆಂದ ಬೀನ್ಸ್, ಸುಟ್ಟ ಗೆಣಸು, ಖಾರ ಮಸಾಲೆ ಹಚ್ಚಿದ ಬಾತುಕೋಳಿ ಮಾಂಸ – ಸ್ವರ್ಗ ಸುಖ ಅನಿಸಿಬಿಟ್ಟಿತ್ತು. ಇನ್ಮೇಲೆ ಊರಿಗೆ ಇದೇ ಆಹಾರ ಆಗ್ಬೇಕು ಅಂತ ಶಿಫಾರಸು ಮಾಡೋಕೆ ಊರಿನ ಮುಖಂಡನ ಹತ್ರ ಹೋದ. ಆ ಮುಖಂಡ ಎಲ್ಲಿ ನೋಡೇ ಬಿಡೋಣ ಅಂತ ಅವನ್ನ ತಿನ್ನೋಕೆ ಹೋದಾಗ ಬಾಯೆಲ್ಲ ಸುಟ್ಟು, ಖಾರ ಅತಿಯಾಗಿ ಒದ್ದಾಡೋ ಪರಿಸ್ಥಿತಿ ಬಂದುಬಿಡ್ತು. ಆಮೇಲೆ ಹೊಟ್ಟೆನೋವು ಶುರುವಾಯ್ತು. ಕೊನೆಗೆ ಆ ಮನುಷ್ಯ ಊರಿನವರ ಕೋಪಕ್ಕೆ ಗುರಿಯಾಗ್ಬೇಕಾಯ್ತು” ಅಂದ.
ಶ್ರೀಮಂತನ ಮಾತು ರೈತನಿಗೆ ಅರ್ಥವಾಯ್ತು. ಸುಮ್ಮನೆ ಮನೆಗೆ ವಾಪಸ್ ಬಂದ.
ನಮ್ದೇ ಕತೆ ತಾನೆ ಇದು? ನಾವೂ ಆ ರೈತನ ಥರಾನೇ!
ಎಳೆ ಬಿಸಿಲು ಮೈಗೆ ಸೋಕೋದು ಹಿತವೇನೋ ಹೌದು. ಆದ್ರೆ ಅದು ಎಲ್ರಿಗೂ ಎಲ್ಲಾ ಹೊತ್ತೂ ಹಾಗೆ ಅನಿಸ್ಲೇಬೇಕು ಅಂತೇನಿಲ್ಲ. ಜನ ತಮ್ಮ ಲೈಫ್ ಸ್ಟೈಲಿಗೆ, ಉದ್ಯೋಗಕ್ಕೆ, ಅನಿವಾರ್ಯಕ್ಕೆ ತಕ್ಕ ಹಾಗೆ ಇಷ್ಟಾನಿಷ್ಟಗಳನ್ನ ಬೆಳೆಸ್ಕೊಂಡಿರ್ತಾರೆ. ಕಂಫರ್ಟ್ಗಳನ್ನ ರೂಢಿಸ್ಕೊಂಡಿರ್ತಾರೆ. ಒಬ್ರಿಗೆ ನಡ್ಕೊಂಡ್ ಹೋಗೋದೇ ಸುಖ ಆದ್ರೆ ಒಬ್ರಿಗೆ ಆಟೋ ಬೇಕೇಬೇಕು. ಒಬ್ರಿಗೆ ಟ್ರೈನಲ್ಲಿ ಪ್ರಯಾಣ ಅರಾಮ್ ಅನಿಸಿದ್ರೆ ಇನ್ಯಾರಿಗೋ ಫ್ಲೈಟೇ ಬೇಕು. ಒಬ್ರಿಗೆ ಅಕ್ಕಿ ಅಡುಗೆ ಕಂಫರ್ಟಬಲ್ ಆದ್ರೆ ಒಬ್ರಿಗೆ ಗೋಧಿದು. ಹುಡುಕ್ತಾ ಹೋದ್ರೆ ಅವರವರ ಕಂಫರ್ಟ್ನ ಪುಷ್ಟೀಕರಿಸೋ ಲಾಜಿಕ್ ಕೂಡ ಸಿಗ್ತವೆ. ಅಕ್ಕಿ ಒಳ್ಳೇದು ಅನ್ನೋ ತೀರ್ಮಾನವನ್ನ ಹಿಡ್ಕೊಂಡು ಲಾಜಿಕ್ ಹುಡುಕಿದ್ರೆ ಅದನ್ನ ಸಾಬೀತುಪಡಿಸೋ ಪುರಾವೆಗಳೇ ಸಿಗ್ತವೆ. ಕೆಟ್ಟದ್ದು ಅಂತ ತೀರ್ಮಾನ ಮಾಡ್ಕೊಂಡು ಹುಡುಕ್ತಾ ಹೋದ್ರೆ ಅಂಥವೇ ಸಿಗ್ತವೆ.
ಕೃಪೆ :ಅಂತರ್ಜಾಲ
No comments:
Post a Comment