ಏನೈತಿ? ಅದರಾಗೆ ಅಂಥಾದ್ದೇನೈತಿ?*
ಈ ನಿಜಜೀವನದ ಘಟನೆ ನಡೆದದ್ದು ಸುಮಾರು ಆರು ನೂರು ವರ್ಷಗಳ ಹಿಂದೆ! ಜಗದ್ವಿಖ್ಯಾತ ಶಿಲ್ಪಿ, ಚಿತ್ರಕಾರ, ವಾಸ್ತುಶಿಲ್ಪಿ ಹಾಗೂ ಕವಿಯಾಗಿದ್ದ ಇಟಲಿಯ ಮೈಕೇಲೇಂಜೆಲೋ ಒಮ್ಮೆ ರೋಮ್ ನಗರದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ರಸ್ತೆಯ ಪಕ್ಕದಲ್ಲೇ ಇದ್ದ ದೊಡ್ಡ ಮನೆಯ ಆವರಣದಲ್ಲಿ ಬಿದ್ದಿದ್ದ ಒಂದು ದೊಡ್ಡ ಬಂಡೆಗಲ್ಲು ಅವರನ್ನು ಆಕರ್ಷಿಸಿತು. ಅವರು ಆ ಬಂಡೆಗಲ್ಲನ್ನೇ ನೋಡುತ್ತ ಬಹಳ ಹೊತ್ತು ನಿಂತರಂತೆ. ಎಷ್ಟೋ ವರ್ಷಗಳಿಂದ ಅಲ್ಲಿ ಬಿದ್ದಿದ್ದ ಕಲ್ಲನ್ನು ಯಾರೂ ಗಮನಿಸಿರಲಿಲ್ಲ. ಇದರಿಂದ ಆಶ್ಚರ್ಯಗೊಂಡ ಮನೆಯ ಯಜಮಾನರು ತಾವು ಯಾರು? ಏಕೆ ಈ ಕಲ್ಲನ್ನು ನೋಡುತ್ತಾ ನಿಂತಿದ್ದೀರೆಂದು ಕೇಳಿದರು. ಆಗ ಮೈಕೇಲೇಂಜೆಲೋ ತನ್ನ ಪರಿಚಯವನ್ನು ಹೇಳಿಕೊಂಡು ನನಗೆ ಈ ಬಂಡೆಗಲ್ಲು ಕೊಡುತ್ತೀರಾ ಎಂದು ಕೇಳಿದರು. ಮನೆಯ ಆವರಣದಲ್ಲಿ ಅಷ್ಟು ಜಾಗವನ್ನು ಆಕ್ರಮಿಸಿಕೊಂಡು ಎಷ್ಟೋ ವರ್ಷಗಳಿಂದ ವೃಥಾ ಬಿದ್ದಿದ್ದ ನಿಷ್ಪ್ರಯೋಜಕ ಬಂಡೆ ಬೇಕೆನ್ನುವುದನ್ನು ಕೇಳಿ ಯಜಮಾನರಿಗೆ ಸಂತೋಷವಾಯಿತು. ಅವರು ಧಾರಾಳವಾಗಿ ತೆಗೆದುಕೊಂಡು ಹೋಗಿ ಎಂದರು. ತಕ್ಷಣ ಮೈಕೇಲೇಂಜೆಲೋ ಅದನ್ನು ಸಾಗಿಸಿಕೊಂಡು ಹೊರಟುಹೋದರು. ನಂತರ ಈ ಘಟನೆಯನ್ನು ಯಜಮಾನರು ಮರೆತುಬಿಟ್ಟರು.
ಆರು ತಿಂಗಳ ನಂತರ ಊರಲ್ಲೆಲ್ಲ ಒಂದು ಸುದ್ದಿ ಹಬ್ಬಿತ್ತು. ಅದೇನೆಂದರೆ ಊರಿನಲ್ಲಿ ಕಟ್ಟುತ್ತಿರುವ ಹೊಸ ದೇವಾಲಯದಲ್ಲಿ ಒಂದು ಸುಂದರ ಮೂರ್ತಿ ನಿಲ್ಲಿಸಲಾಗಿದೆಯಂತೆ, ಆ ಮೂರ್ತಿ ಜೀವಂತವೋ ಎನಿಸುವಷ್ಟು ಚೆನ್ನಾಗಿದೆಯೆಂಬುದೇ ಸುದ್ದಿ. ಮನೆಯ ಯಜಮಾನರೂ ಅದನ್ನು ನೋಡಲು ಹೋದರು. ಅಲ್ಲಿ ನೆರೆದಿದ್ದ ಜನ ಮೂರ್ತಿಯನ್ನು ಮೆಚ್ಚಿಕೊಳ್ಳುತ್ತಿದ್ದರು. ಯಜಮಾನರಿಗೂ ಮೆಚ್ಚುಗೆಯಾಯಿತು. ಮೂರ್ತಿಯ ಪಕ್ಕದಲ್ಲಿ ನಿಂತಿದ್ದ ಶಿಲ್ಪಿಯನ್ನು ಯಜಮಾನರು ಗುರುತಿಸಿ ಅಭಿನಂದಿಸಿದರು. ಏಕೆಂದರೆ ಅವರ ಮನೆಯ ಆವರಣದಲ್ಲಿ ವೃಥಾ ಬಿದ್ದಿದ್ದ ಬಂಡೆಗಲ್ಲನ್ನು ಕೇಳಿ ತೆಗೆದುಕೊಂಡು ಹೋದಾತ ಅದೇ ಶಿಲ್ಪಿ....
ಈ ಸುಂದರ ಮೂರ್ತಿ ಎಲ್ಲಿಂದ ಬಂದಿತು? ಎಂದು ಕೇಳಿದಾಗ, ಮೈಕೇಲೆಂಜೆಲೋರವರು ಗಟ್ಟಿಯಾಗಿ ನಕ್ಕು ಇದು ಎಲ್ಲಿಂದಲೋ ಬಂದದ್ದಲ್ಲ! ನಿಮ್ಮ ಮನೆಯ ಆವರಣದಲ್ಲೇ ಬಿದ್ದಿದ್ದ ಬಂಡೆಯಲ್ಲಿ ಈ ಮೂರ್ತಿ ಹುದುಗಿ ಕುಳಿತಿತ್ತು. ಮೂರ್ತಿಗೆ ಅನವಶ್ಯಕವಾದ ಬಂಡೆಯ ಚೂರುಗಳನ್ನೆಲ್ಲ ಕೆತ್ತು ತೆಗೆದು ಹೊರಹಾಕಿದಾಗ ಕೊನೆಗೆ ಉಳಿದಿದ್ದು ಈ ಸುಂದರ ಮೂರ್ತಿ ಎಂದರು. ಯಜಮಾನರು ಹೊರಗೆ ಸಂತಸ ವ್ಯಕ್ತಪಡಿಸಿದರೂ, ಒಳಗೊಳಗೆ ಅಷ್ಟೊಂದು ವರ್ಷ ನಮ್ಮ ಮನೆಯ ಆವರಣದಲ್ಲೇ ಬಿದ್ದಿದ್ದ ಬಂಡೆಯೊಳಗಿನ ಮೂರ್ತಿ ನನಗೇಕೆ ಕಾಣಲಿಲ್ಲ? ಕಂಡಿದ್ದರೆ ಒಂದಿಷ್ಟು ಹಣ ಪಡೆದು ಬಂಡೆಯನ್ನು ಕೊಡಬಹುದಿತ್ತು ಎಂದುಕೊಂಡು ಚಿಂತಿಸುತ್ತಾ ಮನೆಗೆ ಹಿಂತಿರುಗಿದರಂತೆ!
ನಮಗೂ ರೋಮ್ ನಗರಕ್ಕೆ ಹೋಗುವ ಅವಕಾಶ ಸಿಕ್ಕರೆ, ಅಲ್ಲಿನ ಸಿಸ್ಟೀನ್ ಚಾಪೆಲ್ಲಿನಲ್ಲಿರುವ ಆ ಸುಂದರ ಮೂರ್ತಿಯನ್ನು ನೋಡಬಹುದು!
ಹಾಗೆಯೇ ನಾವೂ ಆ ಬಂಡೆಗಲ್ಲಿನಂತೆ ಅಷ್ಟಿಷ್ಟು ಜಾಗವನ್ನು ಆವರಿಸಿಕೊಂಡು ನಿಷ್ಪ್ರಯೋಜಕರಾಗಿ ಬಿದ್ದಿದ್ದೇವೆಯೇ ಎಂದು ಯೋಚಿಸಬಹುದು. ನಮ್ಮ ಬದುಕಿನ ಶಿಲ್ಪಿಗಳಾದ ನಮ್ಮ ಗುರುಗಳಿಗೋ, ಮತ್ತಾರಿಗೋ ನಮ್ಮಲ್ಲಿರುವ ಸುಂದರ ದೈವಿಕ ಮೂರ್ತಿ ಭಾಸವಾಗಬೇಕು. ಅವರು ಸೂಕ್ತ ಬೋಧನೆಯ ಮೂಲಕ, ತರಬೇತಿಯ ನಮ್ಮಲ್ಲಿರುವ ದೈವಿಕವಲ್ಲದ ಆಸುರೀ ಗುಣಗಳನ್ನು ಕಿತ್ತು ತೆಗೆಯುತ್ತಾರೆ. ಆಸುರೀ ಗುಣಗಳೆಂದರೆ *ದುರಹಂಕಾರ, ದರ್ಪ, ದುರಭಿಮಾನ, ಕೋಪ, ಕಾಠಿಣ್ಯ ಮತ್ತು ಅಜ್ಞಾನ* ಮುಂತಾದವುಗಳು. ಈ ಗುಣಗಳಿರುವವರೆಗೆ ನಮಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದು ತಿಳಿಯುವುದಿಲ್ಲ. ಶುಚಿತ್ವವಿರುವುದಿಲ್ಲ ಮತ್ತು ಸನ್ನಡತೆಯಿರುವುದಿಲ್ಲ. ಅವನ್ನೆಲ್ಲ ಕೆತ್ತಿ ತೆಗೆದಾಗ ಉಳಿಯುವುದು ಸುಂದರ ಮೂರ್ತಿ ಮಾತ್ರ...
ಹಾಗಾಗಲೆಂದು ಹಾರೈಸೋಣ
ಕೃಪೆ: ವಿಶ್ವವಾಣಿ.
No comments:
Post a Comment