ಕಥೆ-361
*ಸಹವಾಸದ ಫಲ*
ಒಂದು ದಿನ ಮಧ್ಯರಾತ್ರಿಯ ಸಮಯ. ಮಹಾರಾಣಿ ಮತ್ತು ಚಕ್ರವರ್ತಿ ಇಬ್ಬರೂ ಅಂತ:ಪುರದಲ್ಲಿ ಮಲಗಿಕೊಂಡೇ ರಾಜಕುಮಾರಿಯ ವಿವಾಹದ ಬಗ್ಗೆ ಮಾತಾಡುತ್ತಿದ್ದರು.
ಅದೇ ಸಮಯದಲ್ಲಿ ಒಬ್ಬ ಕಳ್ಳನು ಕಳ್ಳತನ ಮಾಡಲು ಅರಮನೆಯನ್ನು ಪ್ರವೇಶಿಸಿದನು.
ಮಹಾರಾಣಿ – 'ಮಹಾರಾಜ!! ನಮ್ಮ ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆಂಬುದು ನಿಮಗೆ ಮರೆತು ಹೋಗಿದೆಯೇ' ?
ರಾಜ – 'ಪ್ರಿಯೆ! ನೆನಪಿದೆ. ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ. ಈಗೇಕೆ ಆ ಯೋಚನೆ ?'
ಮಹಾರಾಣಿ – 'ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ ಎಂದು ಸುಮ್ಮನಿರಲಾದೀತೇ ? ಬೇಗನೇ ಯೋಗ್ಯ ವರನನ್ನು ಹುಡುಕಬೇಕಲ್ಲವೇ ?'
ರಾಜ – 'ನಮ್ಮ ಮಗಳು ಸುಂದರವಾಗಿದ್ದಾಳೆ. ಅವಳಿಗೆ ವರನನ್ನು ಹುಡುಕುವುದು ಕಷ್ಟವೇನಲ್ಲ!!'
ರಾಣಿ – 'ಏನು,ಅಷ್ಟೊಂದು ಸುಲಭವೇ ? ಅವಳಿಗೆ ಯೋಗ್ಯನಾದ ವರನನ್ನು ಎಲ್ಲಿ ಹುಡುಕುವಿರಿ ?'
ರಾಜ- 'ಪಟ್ಟಣದ ಹತ್ತಿರ ಒಂದು ಆಶ್ರಮವಿದೆಯಲ್ಲವೇ ? ಅಲ್ಲಿ ಅನೇಕ ಋಷಿಕುಮಾರರು ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲರೂ ವಿದ್ಯಾವಂತರೂ, ಬುದ್ಧಿವಂತರೂ, ಸಭ್ಯರೂ ಮತ್ತು ವೀರರೂ ಆಗಿದ್ದಾರೆ. ಅವರಲ್ಲೇ ಒಬ್ಬನನ್ನು ಆರಿಸಿ ಮಗಳಿಗೆ ವಿವಾಹ ಮಾಡೋಣ.'
ರಾಣಿ – 'ಅಷ್ಟೊಂದು ಉತ್ತಮ ವರರಿದ್ದರೆ, ನಾನೂ ಸಹ ಅವರನ್ನು ನೋಡಬೇಕು. ಯಾವಾಗ ಹೋಗೋಣ ?'
ರಾಜ – 'ಈಗ ಸದ್ಯ ನನಗೆ ಬಹು ಮುಖ್ಯವಾದ ರಾಜಕಾರ್ಯಗಳಿವೆ. ಸ್ವಲ್ಪ ತಿಂಗಳ ನಂತರ ಹೋಗೋಣ.
ಅರಮನೆಗೆ ಕದಿಯಲು ಬಂದ ಕಳ್ಳನು ಈ ಎಲ್ಲಾ ಸಂಭಾಷಣೆಯನ್ನು ಕೇಳಿಸಿಕೊಂಡನು. ಅವನು ಹೀಗೆ ಯೋಚಿಸಿದನು – ನಾನು ಈಗ ಕಳ್ಳತನ ಮಾಡಿದರೆ ಸ್ವಲ್ಪ ಮಾತ್ರ ಲಾಭ ಸಿಗುವುದು! ಋಷಿಯ ಆಶ್ರಮಕ್ಕೆ ಸೇರಿಕೊಂಡು ಋಷಿಕುಮಾರನಂತೆ ನಡೆದುಕೊಂಡರೆ, ರಾಜನು ನನ್ನನ್ನು ನೋಡಿ ತನ್ನ ಮಗಳಿಗೆ ಇವನೇ ವರನಾಗಲಿ ಎಂದು ಒಪ್ಪಿಕೊಳ್ಳುವನು!! ಆಗ ನನಗೆ ಈ ರಾಜ್ಯವೇ ಸಿಗುವುದು!!!:
ಹೀಗೆ ಯೋಚಿಸಿದ ಆ ಕಳ್ಳನು ಮರುದಿನವೇ ಆಶ್ರಮಕ್ಕೆ ಸೇರಿಕೊಂಡು ಋುಷಿಕುಮಾರರ ಜೊತೆ ಕೂಡಿಕೊಂಡನು. ಅವರಂತೆಯೇ ವೇಷಧರಿಸಿ, ಆಶ್ರಮದ ಆಚಾರ-ವಿಚಾರಗಳೆಲ್ಲವನ್ನೂ ಕಲಿತುಕೊಂಡನು.
ಪ್ರತಿದಿನ ಆಶ್ರಮದ ಪಾಠ-ಪ್ರವಚನಗಳಲ್ಲಿ ಉತ್ಸಾಹ, ಪ್ರೀತಿ, ಶ್ರದ್ಧೆಯಿಂದ ಭಾಗವಹಿಸುತ್ತಿದ್ದನು.
ಎಲ್ಲಾ ಋಷಿಕುಮಾರರಂತೆ ಪ್ರಾತ:ಕಾಲದಲ್ಲಿಯೇ ಎದ್ದು, ನದಿಯಲ್ಲಿ ಸ್ನಾನಮಾಡಿ ಪೂಜೆ, ವೇದಾಧ್ಯಯನಗಳಲ್ಲಿ ನಿರತನಾದನು.
ಹೀಗೆ ಕೆಲವು ದಿನಗಳು ಕಳೆಯುತ್ತಿರಲು, ಆ ಕಳ್ಳನ ಮನಸ್ಸಿಗೆ ಆಶ್ರಮದ ಜೀವನವೇ ಹಿತವೆನಿಸತೊಡಗಿತು.
ಒಂದು ದಿನ ಮಹಾರಾಜನು ತನ್ನ ಪತ್ನಿಯೊಡನೆ ಆಶ್ರಮಕ್ಕೆ ಬಂದನು. ಅಲ್ಲಿರುವ ಋಷಿಕುಮಾರರನ್ನೆಲ್ಲಾ ನೋಡಿದನು. ಈ ಕಳ್ಳನನ್ನೇ ತನ್ನ ಮಗಳಿಗೆ ಯೋಗ್ಯ ವರನೆಂದು ನಿಶ್ಚಯಿಸಿ, ಕಳ್ಳನ ಹತ್ತಿರ ಬಂದು ಪ್ರಾರ್ಥಿಸಿದನು.
ಪೂಜ್ಯರೇ!! ನನ್ನ ಮಗಳ ಕೈ ಹಿಡಿದು ತಮ್ಮ ಪತ್ನಿಯಾಗಿ ಸ್ವೀಕರಿಸಿ!! ಎಂದು.
ಆಗ ಕಳ್ಳನು – “ರಾಜಕುಮಾರಿಯನ್ನು ಮದುವೆಯಾಗಲೆಂದೇ ನಾನು ಇಷ್ಟೆಲ್ಲಾ ಪ್ರಯತ್ನವನ್ನು ಮಾಡಿದೆ. ಇಷ್ಟು ದಿನ ಈ ಆಶ್ರಮದಲ್ಲಿದ್ದುಕೊಂಡು ಋಷಿಗಳಂತೆ ಸಾತ್ವಿಕ ಜೀವನ ಮಾಡಿದೆ. ಋಷಿಕುಮಾರರ ಸಹವಾಸದಿಂದ ನಾನು ವಿವೇಕವನ್ನು ಪಡೆದುಕೊಂಡೆ. ನನಗೆ ಈಗ ಈ ಜೀವನವೇ ಇಷ್ಟವಾಗಿದೆ. ಅರಮನೆಯ ಭೋಗ ಜೀವನದಲ್ಲಿ, ಸುಖ-ಸಂಪತ್ತಿನಲ್ಲಿ ನನಗೆ ಯಾವುದೇ ಆಸೆ-ಅಪೇಕ್ಷೆಗಳಿಲ್ಲ” ಎಂದು ಹೇಳಿದನು.
ಹೀಗೆ ಋಷಿಕುಮಾರರ ಸಹವಾಸದಿಂದ ಕಳ್ಳನೂ ಸಹ ವಿವೇಕಿಯೂ, ಜ್ಞಾನಿಯೂ ಆದನು.
*ಸಹವಾಸದಿಂದಲೇ ಮನುಷ್ಯನಿಗೆ ಅಧಮ, ಮಧ್ಯಮ ಮತ್ತು ಉತ್ತಮ ಗುಣಗಳು ಪ್ರಾಪ್ತವಾಗುತ್ತವೆ.*
💐💐💐💐💐💐
No comments:
Post a Comment