ಕಥೆ-647
ಅಪ್ಪನ ಜೀವನ ಪಾಠ
ನವಿಲೂರಿನಲ್ಲಿ ಸಾಗರ್ ಎಂಬ ಪುಟ್ಟ ಹುಡುಗನಿದ್ದ. ಅವನು ಚಿಕ್ಕವನಿದ್ದಾಗಲೇ ಆತನ ತಾಯಿ ತೀರಿ ಹೋಗಿದ್ದರು. ಸಾಗರ್ ತಂದೆ ಹನುಮಂತಪ್ಪನಿಗೆ ಮಗನನ್ನು ಸಾಕಲು ಕಷ್ಟವಾದರೂ ಆತನಿಗೆ ಏನೂ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಿದ್ದ. ಇರುವ ಒಬ್ಬ ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಪಟ್ಟಣಕ್ಕೆ ಬಂದು ಒಂದು ಖಾಸಗಿ ಶಾಲೆಗೆ ಸೇರಿಸಿದ್ದ
ಒಮ್ಮೆ ಸಾಗರ್ನ ತಂದೆಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಆತ ಅಪ್ಪನನ್ನು ನೋಡಿಕೊಳ್ಳಲು ಶಾಲೆಗೆ ಕೆಲವು ದಿನ ರಜೆ ಹಾಕಿದ. ಅದೇ ಸಮಯದಲ್ಲಿ ಅವನಿಗೆ ಪರೀಕ್ಷೆಗಳು ಹತ್ತಿರದಲ್ಲಿದ್ದವು. ಅವನಿಗೆ ಯಾರು ಸಹ ತರಗತಿಯಲ್ಲಿ ತಾನು ಪಡೆದ ರಜೆ ದಿನಗಳ ಪಾಠಗಳ ನೋಟ್ ಪುಸ್ತಕ ಕೊಡಲಿಲ್ಲ. ಅವನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದ. ಇದರಿಂದಾಗಿ ಅವನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಸಾಗರ್ ಇದಕ್ಕೆ ಬೇಸರ ಮಾಡಿಕೊಳ್ಳದೆ ಮಾರ್ಕ್ಸ್ ಕಾರ್ಡನ್ನು ಅಪ್ಪನಿಗೆ ತೋರಿಸಿದಾಗ ಅಪ್ಪ, 'ಯಾಕಿಷ್ಟು ಕಡಿಮೆ ಅಂಕ ಬಂದಿದೆ. ನೀನು ನೂರಕ್ಕೆ ನೂರು ಅಂಕ ತೆಗೆದುಕೊ ಎಂದು ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ?' ಎಂದರು. ಅದಕ್ಕೆ ಸಾಗರ್ 'ಹೌದಪ್ಪ, ನೀವು ಹೇಳುವುದೇನೋ ಸರಿ. ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿನಾನು ರಜೆ ಹಾಕಿದ್ದೆನಲ್ಲ. ಅಂದು ನಡೆದ ಪಾಠದ ನೋಟ್ ಪುಸ್ತಕವನ್ನು ನನಗೆ ಯಾರೂ ನೀಡಲಿಲ್ಲ. ನಾನೇನು ಮಾಡ್ಲಿ?' ಎಂದ. ಅದಕ್ಕೆ ಅಪ್ಪ 'ಅವರು ಯಾರೂ ಪುಸ್ತಕ ಕೊಡಲಿಲ್ಲಎಂದು ಹೀಗೆ ನೀನು ನೆಪ ಹೇಳಿ ಕೂರಬಾರದು. ನಿಮ್ಮ ಟೀಚರ್ಗೆ ಹೇಳಿ ಅವರಿಂದ ಹೇಳಿಸಿ ಪಡೆಯಬಹುದಿತ್ತಲ್ವ? ಟೀಚರ್ಗೆ ಕೇಳಲು ಭಯವಾದರೆ ನನ್ನನ್ನು ಕೇಳಬಹುದಿತ್ತು. ನಾನು ಬಂದು ನಿಮ್ಮ ಶಿಕ್ಷಕರಿಗೆ ಕೇಳುತ್ತಿದ್ದೆ' ಎಂದರು ಅದಕ್ಕೆ ಸಾಗರ್ 'ಹೌದಪ್ಪ, ನನಗಿದು ಹೊಳೆಯಲೇ ಇಲ್ಲ' ಎಂದ. ಅದಕ್ಕೆ ತಂದೆ 'ಇದು ಕೇವಲ ಓದಿಗೆ ಮಾತ್ರ ಸೀಮಿತವಾಗಬಾರದು. ಜೀವನದಲ್ಲೂ ಅಷ್ಟೆ. ಯಾರು ಕೂಡ ನೀನು ಮುಂದುವರೆಯಲು ಆಸರೆ ಮತ್ತು ಸಹಾಯ ನೀಡದೇ ಇರಬಹುದು. ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ' ಎಂದರು. ಸಾಗರ್ ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ಬಿಟ್ಟು ಜಾಣ ವಿದ್ಯಾರ್ಥಿಯಾದ
No comments:
Post a Comment