ಕಥೆ-630
ನಮ್ಮಲ್ಲಿದೆ ಅಗಾಧ ಸಾಮರ್ಥ್ಯ
ನಮ್ಮ ಜೀವನವು ಅಪರೂಪದ ವರದಾನ. ಇಂಥದೊಂದು ವರದಾನವೇ ಈ ಪ್ರಪಂಚದಲ್ಲಿ ಇನ್ನೊಂದಿಲ್ಲ. ನಮಗೆ ಬದುಕುವುದಕ್ಕೆ ಏನು ಬೇಕು ಅದೆಲ್ಲವೂ ನಮ್ಮೊಳಗಿದೆ. ಬೀಜದಲ್ಲಿ ಒಂದು ಮಹಾನ್ ವೃಕ್ಷವೇ ಹುದುಗಿದೆ. ಅಂತೆಯೇ ಅದೇ ಬೀಜವು ಭೂಮಿಗೆ ಬೀಳುವುದೆ ತಡ, ಬೇರು ಬಿಟ್ಟು ಮೊಳಕೆ ಒಡೆದು, ಹೂವಾಗಿ ಕಾಯಾಗಿ, ಹಣ್ಣಾಗಿ ಮೈದುಂಬಿ ಹಸಿರೆಲೆ ಧರಿಸಿ ಮಹಾನ್ ವೃಕ್ಷವಾಗಿ ಕಂಗೊಳಿಸುತ್ತದೆ.
ಇದೀಗ ಜನಿಸಿದ ಮಗುವು
ಒಂದು ಸಣ್ಣ ಬೀಜ ಇದ್ದಂತೆ. ಅದೇ ಮಗುವಿನಲ್ಲಿ ಕವಿ, ಕಲಾವಿದ, ಸಂಗೀತಜ್ಞ, ಯೋಗಿ, ತ್ಯಾಗಿಯಾಗಿ ಬೆಳೆಯುವ ಅದಮ್ಯ ಶಕ್ತಿ, ಸಾಮರ್ಥ್ಯ ಸುಪ್ತವಾಗಿ, ಗುಪ್ತವಾಗಿ ಇದೆ. ಯೋಗ್ಯ ಪರಿಸರ ದೊರೆತರೆ ಸಾಕು ಆ ಮಗು ಮುಂದೆ ಮಹಾ ಮಾನವನಾಗಿ ಬೆಳೆಯುತ್ತದೆ, ದೇವಮಾನವನಾಗುತ್ತದೆ.
ಬೀಜದಲ್ಲಿರುವ ಪ್ರಮುಖ ಅಂಗಗಳೆಂದರೆ: ಬೇರು, ಎಲೆ, ಹೂವು, ಹಣ್ಣು, ಹಾಗೆ
ನಮ್ಮಲ್ಲಿರುವ ಪ್ರಮುಖ ಅಂಗಗಳೆಂದರೆ, ತನು, ಮನ, ಬುದ್ದಿ, ಭಾವ (ಹೃದಯ). ಈ ದೇಹದಿಂದ ನಾವು ಏನೆಲ್ಲವನ್ನೂ ಸಾಧಿಸಬಹುದು. ಅನೇಕ ವಸಂತ ಕಾಲ ಬದುಕುವ ಈ ದೇಹವು ನಮ್ಮನ್ನು ಹೊತ್ತು ಪ್ರಪಂಚವನ್ನೇ ಸುತ್ತುತ್ತದೆ. ಹಿಮಾಲಯದ ಎತ್ತರಕ್ಕೆ ಏರುತ್ತದೆ. ಸಾಗರದ ಆಳಕ್ಕೆ ಇಳಿಯುತ್ತದೆ. ಕಣ್ಣು ಸಣ್ಣದಾದರೂ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನೇ ತೋರುತ್ತದೆ. ಕಿವಿಯು ಶಬ್ದ ಸಾಮ್ರಾಜ್ಯವನ್ನು, ನಾಲಿಗೆ ರಸಲೋಕವನ್ನು ಅನುಭವಿಸುತ್ತದೆ. ಹೀಗೆ ಒಂದೊಂದು ಅವಯವದ ಸಾಮರ್ಥ್ಯ ಅಗಾಧವಾದುದು. ಅವುಗಳ ಅರಿವು ನಮಗಾಗಬೇಕಿದೆ ಅವುಗಳ ಸಾಮರ್ಥ್ಯ ಅರಿತು ನಡೆದರೆ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವ್ಯಕ್ತಿ ಶ್ರೇಷ್ಠನಾಗುತ್ತಾನೆ..
-ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment