ಕಥೆ-708
ಅಂಬೇಡ್ಕರ ಜಯಂತಿ ಶುಭಾಶಯಗಳು
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೆ ಜಾತಿ ಹಾಗೂ ಅಸ್ಪೃಶ್ಯತೆಯ ಕ್ರೂರ ಅನುಭವಗಳು, ಸಹಪಾಠಿಗಳ ಜೊತೆಯಲ್ಲಿ ಕೂರುವಂತಿರಲಿಲ್ಲ. ಶಾಲೆಯ ಹೊರಗೆ ಗೋಣಿ ಚೀಲದ ಮೇಲೆ ಕೂತು ಪಾಠ ಕೇಳಬೇಕಾಗಿತ್ತು. ಎಲ್ಲರೂ ಬಳಸುವ ನೀರನ್ನು ಮುಟ್ಟುವಂತಿರಲಿಲ್ಲ. ಬಾಯಾರಿಕೆಯಾದಾಗ ಯಾರಾದರೂ ಬೊಗಸೆಗೆ ನೀರನ್ನು ಸುರಿಯಬೇಕಿತ್ತು. ಈ ಎಲ್ಲಾ ಕಾರಣದಿಂದ ಬಾಲ್ಯದಲ್ಲಿ ಅಂಬೇಡ್ಕರರಿಗೆ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿದವು. ನಾವು ಸಹ ಮನುಷ್ಯರಾಗಿದ್ದರೂ ಯಾಕೆ ತಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ? ಯಾಕೆ ಬೇರೆಯವರ ಮನೆಗಳಿಗೆ, ದೇವಾಲಯಗಳಿಗೆ ನಮಗೆ ಪ್ರವೇಶವಿಲ್ಲ? ಸಾರ್ವಜನಿಕರು ಬಳಸುವ ನೀರನ್ನು ಯಾಕೆ ನಾವು ಬಳಸುವಂತಿಲ್ಲ? ನಮ್ಮನ್ನು ಯಾಕೆ ಇಷ್ಟು ಕೀಳಾಗಿ ಕಾಣಲಾಗುತ್ತಿದೆ? ನಾವೇನು ತಪ್ಪು ಮಾಡಿದೆವು? ಮುಂತಾದ ಪ್ರಶ್ನೆಗಳು ಕಾಡತೊಡಗಿದವು.
ಓದು,ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ ಶಿಕ್ಷಣ,ಮೂಢನಂಬಿಕೆ,ದೌರ್ಜನ್ಯಗಳ ಬಗ್ಗೆ ತಿಳಿಸಲಿಲ್ಲ ಎಂದರೆ ಆ ವ್ಯಕ್ತಿ ಬದುಕಿದ್ದು ಸತ್ತಂತೆ. ಅಂದುಕೊಂಡು ಸಮಾಜದ ಬದಲಾವಣೆಗೆ ಟೊಂಕ ಕಟ್ಟಿ ನಿಂತರು..
ಅವರ ಪುಸ್ತಕ ಪ್ರೇಮ ಎಲ್ಲರಿಗೂ ಮಾದರಿ
ವಕೀಲ ವೃತ್ತಿಯಲ್ಲಿ ವ್ಯಾಜ್ಯವೊಂದರಲ್ಲಿ ವಾದಿಸಿದ್ದರಿಂದ ಐದುನೂರು ರೂಪಾಯಿ ಗಳಿಕೆ ಬಂದಿರುತ್ತದೆ. ಅದರಿಂದ ತಕ್ಷಣ ಪುಸ್ತಕ ಖರೀದಿಸಿ ತರುತ್ತಾರೆ. ಮನೆಗೆ ಬಂದ ತಕ್ಷಣ ಓದಲು ಕೂತಿರುತ್ತಾರೆ. ಪತ್ನಿ ರಮಾಬಾಯಿ ಅಡುಗೆ ಮಾಡಿ ಊಟ ಬಡಿಸಲು ಮುಂದಾಗಿ ಮೇಲಿಂದ ಮೇಲೆ ಊಟಕ್ಕೆ ಬರಲು ಕರೆದಾಗ, ಆಯಿತು ಇನ್ನೈದು ನಿಮಿಷ ಮುಗಿತು. ಇನ್ನೆರಡು ನಿಮಿಷ ಬಂದೆ. ಬಂದೆ, ಒಂದೇ ಪುಟ ಎಂದು ಹೇಳುತ್ತಲೇ ಇದ್ದರು. ರಮಾಬಾಯಿ ಜೋರು ಮಾಡಿದಾಗ 'ರಮಾ ನಾನು ಐದು ನೂರು ರೂಪಾಯಿಯಿಂದ ಪುಸ್ತಕ ಖರೀದಿ ಮಾಡಿ ತಂದು ಓದುತ್ತಿದ್ದೇನೆ! ನಿನಗೆ ಊಟವೇ ಹೆಚ್ಚಾಯಿತೆ?' ಎಂದು ಗದರಿದರಂತೆ. ಇದು ಅವರಿಗೆ ಓದು ಎಂದರೆ ಎಷ್ಟು ಮೌಲ್ಯಯುತವಾದುದು ಎಂಬುದನ್ನು ದೃಢಪಡಿಸುತ್ತದೆ.
ಒಮ್ಮೆ ಮದನ್ ಮೋಹನ್ ಮಾಲ್ವಿಯಾ ಅವರು ಅಂಬೇಡ್ಕರ್ ಅವರ ಪುಸ್ತಕ ಭಂಡಾರವನ್ನು ಕಂಡು 'ನಿಮ್ಮ ಈ ಪುಸ್ತಕಗಳನ್ನು ನಾನು ಎರಡು ಲಕ್ಷ ರೂಪಾಯಿಗಳಿಗೆ ಖರೀದಿಸುತ್ತೇನೆ ಕೊಟ್ಟುಬಿಡಿ ಎಂದಿದ್ದರಂತೆ, ಅದಕ್ಕುತ್ತರವಾಗಿ ಅವರು ಈ ಪುಸ್ತಕಗಳು ಇಲ್ಲವಾದರೆ ನನ್ನ ಜೀವವೇ ಹೋದಂತೆ' ಎಂದು ಉತ್ತರಿಸಿದರಂತೆ. ಪುಸ್ತಕವೆಂದರೆ ಅವರಿಗೆ ಪಂಚಪ್ರಾಣ. ಅದೊಂದು ಸಂಪತ್ತು. ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸ್ವತಂತ್ರ ಗ್ರಂಥಾಲಯವನ್ನು ಹೊಂದಿದ್ದ ಜಗತ್ತಿನ ಏಕೈಕ ವ್ಯಕ್ತಿ ಅವರಾಗಿದ್ದರು.
'ಸತ್ತು ಹೋದ ಮೇಲೆ ಮತ್ತೆ ಬದುಕಬೇಕಂದರೆ ಒಂದು ಕೆಲಸ ಮಾಡಿ, ಜನ ಓದುವ ಹಾಗೆ ಏನಾದರೂ ಬರೆದು ಬಿಟ್ಟು ಹೋಗಿ ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯಮಾಡಿ ಎಂದು ಹೇಳಿದವರು ಅಂಬೇಡ್ಕರ್.
ನಮ್ಮ ಸಂವಿಧಾನದ ಶಿಲ್ಪಿ ಎಂದು ಅಂಬೇಡ್ಕರ್ ಅವರನ್ನು ಇವತ್ತು ಜಗತ್ತು ಗೌರವಿಸುತ್ತಿದೆ
ಅಂಬೇಡ್ಕರ್ ಅವರ ಪುಸ್ತಕಪ್ರೀತಿ ಅಗಾಧವಾದುದು. 'ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ'
ಓದು, ಓದು, ಓದು ಯಾಕೆಂದರೆ ಶತ್ರುಗಳು ನಿನ್ನ ಜ್ಞಾನಕ್ಕೆ ಮಾತ್ರ ಹೆದರುತ್ತಾರೆ.
ಡಾ. ಬಿ.ಆರ್. ಅಂಬೇಡ್ಕರ್
No comments:
Post a Comment