Friday, May 30, 2025

 ಕಥೆ-744      

ಸಾರ್ಥಕ್ಯದೆಡೆಗೆ ಸಾಫಲ್ಯದ ಹೆಜ್ಜೆ                 

ನಾವು ಪ್ರತಿನಿತ್ಯ ಪತ್ರಿಕೆಯಲ್ಲಿ ಓದುವ ಅನೇಕ ಸುದ್ದಿ-ಸಮಾಚಾರಗಳಲ್ಲಿ ಅತ್ಯಂತ ಬೇಸರದ, ದುಃಖದಾಯಕ ಸಮಾಚಾರಗಳು ಇರುತ್ತವೆ. ಲಾರಿಗೆ ಕಾರು, ಬಸ್-ಆಟೊ, ಮೋಟಾರ್ ಬೈಕ್‌ಗಳು ಡಿಕ್ಕಿ ಹೊಡೆದಾಗ ಒಂದೆರಡು ಜನರು ಆಸ್ಪತ್ರೆ ಸೇರಿದ್ದರೆ, ಒಂದೆರಡು ಮಂದಿ ತೀರಿಕೊಂಡ ಸುದ್ದಿ ಇರುತ್ತದೆ. ಹೀಗೆ ತೀರಿಕೊಂಡವರು ನಮ್ಮ ಬಂಧುಗಳೂ, ಸ್ನೇಹಿತರೂ, ಪರಿಚಿತರೂ, ಅಲ್ಲದಿದ್ದರೂ, ಸಾವಿನ ಸುದ್ದಿ ಕೇಳಿದೊಡನೆಯೇ ''ಛೆ ಪಾಪ! ಗಂಡ-ಹೆಂಡತಿಯರಿಬ್ಬರೂ ತೀರಿಕೊಂಡರಂತೆ, ತಾಯಿ ಮತ್ತು ಎಂಟು ವರ್ಷದ ಮಕ್ಕಳಿಬ್ಬರೂ ಆಸ್ಪತ್ರೆಯಲ್ಲಿದ್ದಾರಂತೆ! ಆ ಮಕ್ಕಳಿಗಾರು ಗತಿ? ಈ ಯಮರಾಜನಿಗೆ ಒಂದಿಷ್ಟು ದಯೆ ಬೇಡವೆ?,'' ಎಂದು ವಿಷಾದಿಸುತ್ತೇವೆ. ಈ ರೀತಿಯಲ್ಲಿ ಮೃತ್ಯುವಿನ ಬಗ್ಗೆ ವಿಶ್ಲೇಷಣೆಗೆ ಹೊರಟಾಗ ಗುರುವೊಬ್ಬರು ಜೀವನದ ಕುರಿತು ನೀಡಿದ ಮಾರ್ಗದರ್ಶನವು ಹೃದಯಸ್ಪರ್ಶಿಯಾಗಿದ್ದು, ಸಮಗ್ರ ಮಾನವ ಜನಾಂಗಕ್ಕೇ ಮಾರ್ಗದರ್ಶಿಯಾಗಿದೆ. 


ಸುಪ್ರಸಿದ್ಧ ತತ್ವಜ್ಞಾನಿಗಳಾದ ಲಾವೋತ್ಸೆ ಅವರ ಬಳಿಗೆ ಚೀ-ಲು ಎಂಬ ಯುವಕನೊಬ್ಬ ಬಂದು ಕಂಬನಿ ಹರಿಸುತ್ತಾ ತನ್ನ ಸಮಸ್ಯೆ ನಿವೇದಿಸಿಕೊಂಡ. ''ಗುರುಗಳೇ, ನಾನು ಎರಡು ವರ್ಷದವನಿರುವಾಗ ನನ್ನ ತಾಯಿ ತೀರಿಕೊಂಡಿದ್ದರು. ಇತ್ತೀಚೆಗೆ ತನ್ನ 21ನೇ ವರ್ಷದಲ್ಲಿ 45 ವರ್ಷದ ತನ್ನ ತಂದೆ ತೀರಿಕೊಂಡರು. ನಾನು ಈ ಮೃತ್ಯುವಿನ ಬಗ್ಗೆ ತಿಳಿಯಬಯಸುತ್ತೇನೆ. ಈ ಮೃತ್ಯುವೆಂದರೇನು? ಕೃಪೆ ಇಟ್ಟು ನನ್ನ ಈ ಸಮಸ್ಯೆ ಬಗೆಹರಿಸಿ.' ಲಾವೋತ್ಸೆ ಅವರಂದರು- ''ಸಮಸ್ಯೆ ವಾಸ್ತವದಲ್ಲಿ ಜೀವನದ್ದಾಗಿದೆ. ಮೃತ್ಯುವಿನಲ್ಲಿ ಸಮಸ್ಯೆ ಎಲ್ಲಿಂದ ಬಂತು?,'' ಎಂದು ಮುಗುಳ್ನಕ್ಕರು. ಚೀ-ಲುವಿಗೆ ಏನೂ ಅರ್ಥವಾಗಲಿಲ್ಲ. ''ದಯವಿಟ್ಟು ವಿಸ್ತಾರವಾಗಿ ವಿವರಿಸಿ, ನನ್ನ ಸಮಸ್ಯೆ ಬಗೆಹರಿಸಿರಿ'' ಎಂದು ಪ್ರಾರ್ಥಿಸಿಕೊಂಡ. 


ಆಗ ಲಾವೋತ್ಸೆ ಅವರು ಸಮಾಧಾನದಿಂದ ಉತ್ತರಿಸಿದರು- ''ನಿಜವಾಗಿ ಯಾರು ಜೀವನದ ಸಮಸ್ಯೆಗೆ ಸೂಕ್ತ ಸಮಾಧಾನ ಕಂಡುಕೊಂಡಿಲ್ಲವೋ ಅವರಿಗೆ ಮಾತ್ರ ಮೃತ್ಯು ಸಮಸ್ಯೆಯಾಗಿ ಕಾಡುತ್ತದೆ. ನಾವು ನಮ್ಮ ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡದ್ದೇ ಆದ ಪಕ್ಷದಲ್ಲಿ ಆ ಬಳಿಕ ಮೃತ್ಯುವಿನ ಬಗ್ಗೆ ಚಿಂತನ ನಡೆಸಬೇಕಾಗುತ್ತದೆ. ನೀನು ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು. ನೀನು ಮೃತ್ಯು ಮತ್ತು ಮೃತಾತ್ಮರ ಬಗ್ಗೆ ಚಿಂತನ ನಡೆಸುವ ಬದಲು ಜೀವನ ಮತ್ತು ಜೀವಂತ ಮನುಷ್ಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಕಲಿಯಬೇಕು. ಜೀವನವನ್ನೇ ಅರ್ಥ ಮಾಡಿಕೊಳ್ಳದವನಿಗೆ ಮೃತ್ಯುವಿನ ಪರಿಚಯ ಏತಕ್ಕೆ ಬೇಕು?,'' 


ಲಾವೋತ್ಸೆ ಅವರ ಗಂಭೀರವಾದ ಹೇಳಿಕೆ ನಿಧಾನವಾಗಿ ಚೀ-ಲುವಿನ ಅಂತರಂಗ ಸ್ಪರ್ಶಿಸಿದಾಗ ಆತನೂ ''ಜೀವನದ ಸಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರೇ ಮೃತ್ಯುವನ್ನೂ ಅರ್ಥೈಸಿಕೊಳ್ಳಬಲ್ಲರು,'' ಎಂದು ತಿಳಿದುಕೊಂಡ. ಜೀವನದ ರಹಸ್ಯವನ್ನರಿತ ಜನರ ಪಾಲಿಗೆ ಮೃತ್ಯುವು ಒಂದು ರಹಸ್ಯವೆನಿಸುವುದೇ ಇಲ್ಲ. ಬದುಕಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ನವೀನಾತಿನವೀನ ವಿಷಯಗಳನ್ನು ಅರ್ಥೈಸಿಕೊಂಡು ಸಾರ್ಥಕ್ಯದೆಡೆಗೆ ಸಾಫಲ್ಯದ ಹೆಜ್ಜೆ ಹಾಕುವುದೇ ಜೀವನದ ಲಕ್ಷ್ಯವಾಗಬೇಕೆಂದು ನಿರ್ಧರಿಸಿದ ಚೀ-ಲು ಲಾವೋತ್ಸೆ ಅವರ ಚರಣ ಕಮಲಗಳಿಗೆ ವಂದಿಸಿದ. 

ಡಾ. ಡಿ. ವೀರೇಂದ್ರ ಹೆಗ್ಗಡೆ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು