ಕಥೆ-769
ವ್ಯಕ್ತಿಗಿಂತ ವಿಶ್ವದಲ್ಲಿ ಆಸಕ್ತಿ ತಾಳಿರಿ'
ಜ್ಞಾನವು ಅಮೂಲ್ಯ ಸಿರಿ. ಅದರಿಂದ ಜೀವನದಲ್ಲಿ ಸುಖ, ಶಾಂತಿ, ವಿಕಾಸವಾದ ಸಿದ್ಧಾಂತದ ಪ್ರಕಾರ ಕಾಲ ಕಾಲಕ್ಕೆ ಮಾನವನ ದೇಹವಷ್ಟೇ ವಿಕಾಸವಾಗಲಿಲ್ಲ. ಅದರೊಂದಿಗೆ ಜ್ಞಾನವೂ ವಿಕಾಸವಾಯಿತು.ತನು, ಮನ, ಇವು ನಮ್ಮಲ್ಲಿರುವ ಜ್ಞಾನಸಾಧನಗಳು ಅವುಗಳನ್ನು ನಾವು ಲೌಕಿಕ ಸಿರಿ ಸಂಪದದ ಗಳಿಕೆಗಾಗಿ ಬಳಸುತ್ತೇವೆ. ಹಗಲು ರಾತ್ರಿ ಪ್ರಾಪಂಚಿಕ ಸುಖಕ್ಕಾಗಿಯೇ ದುಡಿಯುತ್ತೇವೆ. ಆದರೆ ಮಹಾತ್ಮರು ಸತ್ಯದ ಸಂಶೋಧನೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ. ಅವರ ಪರಿಶ್ರಮದಿಂದ ಪ್ರಪಂಚವೇ ಸಂಪದ್ಭರಿತವಾಯಿತು.
ಮೇಡಂ ಕ್ಯೂರಿ ಮಹಾವಿಜ್ಞಾನಿ, ಆದರೆ ಮೈತುಂಬ ಬಟ್ಟೆ ಹೊಟ್ಟೆ ತುಂಬ ಊಟವೂ ಒಮ್ಮೊಮ್ಮೆ ಇರುತ್ತಿರಲಿಲ್ಲ ಅಂಥ ಬಡತನದಲ್ಲಿಯೇ ಅವಳು ಅದೆಷ್ಟು ನಿಷ್ಠೆಯಿಂದ ಸತ್ಯದ ಸಂಶೋಧನೆಗೆ ತೊಡಗಿದಳು! ಅದರಿಂದ ಅವರ ಮನೆತನಕ್ಕೆ ಐದು ನೊಬೆಲ್ ಮರಸ್ಕಾರಗಳು ದೊರೆತವು. ಅವಳಿಗೆ ಎರಡು, ಗಂಡನಿಗೆ ಒಂದು. ಮಗಳಿಗೆ ಒಂದು, ಅಳಿಯನಿಗೂ ಒಂದು. ಬಹುಶ ಪ್ರಪಂಚದಲ್ಲಿಯೇ ಇದೊಂದು ಅಪರೂಪದ ಘಟನೆ. ಒಂದು ದಿನ ಹಿರಿಯ ಪತ್ರಕರ್ತರು ಅವಳನ್ನು ಕಾಣಲು ಬಂದರು. ಮೇರಿ ತನ್ನ ಮನೆಯ ಮುಂದಿನ ಕೈತೋಟದಲ್ಲಿ ಕಳೆ ತೆಗೆಯುತ್ತ ಕುಳಿತಿದ್ದಳು. 'ಮೇಡಂ ಕ್ಯೂರಿ ಎಲ್ಲಿ?' ಎಂದು ಆ ಪತ್ರಕರ್ತರು ಕ್ಯೂರಿಗೆ ಕೇಳಿದರು. 'ಕ್ಯೂರಿ ಮನೆಯ ಒಳಗಿಲ್ಲ, ನೀವು ಬಂದರೆ ನಿಮಗೆ ಸಂದೇಶ ಕೊಡಲು ಹೇಳಿದ್ದಾಳೆ' ಎಂದು ಒಂದು ಸಂದೇಶ ಬರೆದುಕೊಟ್ಟಳು. 'ವ್ಯಕ್ತಿಗಿಂತ ವಿಶ್ವದಲ್ಲಿ ಆಸಕ್ತಿ ತಾಳಿರಿ' ಎಂಬುದೇ ಅವಳ ಸಂದೇಶವಾಗಿತ್ತು!
ಕೃಪೆ : ಸಿದ್ದೇಶ್ವರ ಸ್ವಾಮೀಜಿ
No comments:
Post a Comment