ಕಥೆ-747
ಸಾಕ್ಷಿಭಾವ
ಅಧ್ಯಾತ್ಮ ಕ್ಷೇತ್ರದಲ್ಲಿ ಜನಕ ಮಹಾರಾಜನ ಹೆಸರು ದೊಡ್ಡದು. ಒಂದು ದಿನ ಆತನ ಸಭೆಯಲ್ಲಿ ಘನವಿದ್ವಾಂಸರೆಲ್ಲ ಸೇರಿದ್ದರು. ಆಕಸ್ಮಿಕವಾಗಿ ಅಷ್ಟಾವಕ್ರ ಮುನಿಗಳೂ ಅಲ್ಲಿಗೆ ಆಗಮಿಸಿದರು. ಅವರ ಶರೀರವು ನಿಜವಾಗಿಯೂ ಏಳೆಂಟು ರೀತಿಯಲ್ಲಿ ಮಣಿದು, ವಿಕಾರವಾಗಿತ್ತು. ಮನವು ಮಾತ್ರ ನಿಜಸಮಾಧಿಯಲ್ಲಿ ನೆಲೆನಿಂದಿತ್ತು!
ಅಷ್ಟಾವಕ್ರ ಮುನಿಗಳು ಅತ್ತಿತ್ತ ಹೊಯ್ದಾಡುತ್ತ ಒಳಗೆ ನಡೆದು ಬರುತ್ತಿದ್ದರು. ಅದನ್ನು ಕಂಡು ಅಲ್ಲಿದ್ದ ವಿದ್ವಾಂಸರೆಲ್ಲ ನಕ್ಕು ಬಿಟ್ಟರು. ಮರುಕ್ಷಣವೇ ಅಷ್ಟಾವಕ್ರ ಮುನಿಗಳು ಅವರಿಗಿಂತ ಜೋರಾಗಿ ನಕ್ಕರು! ಆಗ ಸಭೆಯು ಸ್ತಬ್ಧವಾಯಿತು. ಎಲ್ಲರಿಗೂ ಆಶ್ಚರ್ಯ. ಈ ಜಗತ್ತಿನಲ್ಲಿ ಮಾನ - ಸನ್ಮಾನಗೊಂಡವರು ನಗುತ್ತಾರೆಯೇ ವಿನಾ ಅಪಮಾನಿತರೂ ನಗುತ್ತಾರೆಯೇ?
ಜನಕ ಮಹಾರಾಜರೇ ಕೇಳಿದರು- "ಅಷ್ಟಾವಕ್ರ ಮುನಿಗಳೇ, ಇವರೆಲ್ಲ ನಕ್ಕಿದ್ದಕ್ಕೆ ಅರ್ಥವಿದೆ. ನೀವೂ ನಕ್ಕಿರಲ್ಲ, ಏಕೆ?'" ಮುನಿಗಳು ಹೇಳಿದರು, "ಅವರು ಏನನ್ನು ನೋಡಿನಕ್ಕರೋ ಆ ವಕ್ರದೇಹವನ್ನೇ ನೋಡಿ ನಾನೂ ನಕ್ಕೆ! ನಾನು ನಗಲು ಇನ್ನೊಂದು ಕಾರಣವೂ ಇದೆ. ಯಾವುದನ್ನು ನೋಡಿದರೆ ಅವರಿಗೆ ನಗು ಬರುತ್ತದೆಯೋ ಅದುವೇ (ದೇಹವೇ) ನಾನೆಂದು ತಿಳಿದು ನಗುತ್ತಿರುವ ವಿದ್ವಾಂಸರ ಅಜ್ಞಾನ ಕಂಡು ನಕ್ಕೆ!'' ಹೀಗೆ ಅಷ್ಟಾವಕ್ರ ಮುನಿಗಳು ಹೇಳಿದಂತ ಮನಸ್ಥಿತಿ ನಮಗೆ ಬಂದರೆ ಅದೆಂಥ ಸಮಾಧಾನ! ಇದು ಸಾಕ್ಷಿಭಾವ..
ಆಧಾರ: ಕಥಾಮೃತ
No comments:
Post a Comment