ಕಥೆ-884
ಒಂದಿಡೀ ತಲೆಮಾರಿಗೆ ಓದಿನ ರುಚಿ ಹತ್ತಿಸಿದವರು ಭೈರಪ್ಪನವರು.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡ ಅವರು
ಕೃತಿಯಿಂದ ಕೃತಿಗೆ ಅವರು ಬೆಳೆಯುತ್ತಾ ಹೋದ ಪರಿ ಅನನ್ಯ. ಭಾಷೆ ಎಂಬುದು ಅವರ ಬರಹಗಳಲ್ಲಿ ಮಿಂಚಾಗಿ ಹೊಳೆಯುತ್ತಿತ್ತು.
ಕಷ್ಟಗಳನ್ನು ಎದುರಿಸಿದರೂ, ಶಿಕ್ಷಣವನ್ನು ಮುಂದುವರಿಸುವ ಹಠ ಮತ್ತು ಬದುಕಿನ ಪ್ರತಿಯೊಂದು ಅನುಭವವನ್ನು ತನ್ನ ಸಾಹಿತ್ಯಕ್ಕೆ ಸ್ಪೂರ್ತಿಯಾಗಿ ಬಳಸಿಕೊಂಡ ಇವರ ಬದುಕು ಯುವಕರಿಗೆ ಸ್ಪೂರ್ತಿಯಾಗಿದೆ.
ಇವರ ಜೀವನವು ಸೃಜನಶೀಲತೆಗೆ ಯಾವುದೇ ಅಡ್ಡಿಯಾಗದಂತೆ ಅನುಭವಗಳನ್ನು ಎದುರಿಸುವ ಶಕ್ತಿ, ಬದುಕಿನ ಸೂಕ್ಷ್ಮ ವ್ಯತ್ಯಾಸಗಳನ್ನು ಅರಿಯುವ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಕಲಿಯುವ ಮನೋಭಾವವನ್ನು ತೋರಿಸುತ್ತದೆ.
ಅವರನ್ನು ಆರಾಧಿಸುವ ಓದುಗರಿದ್ದರು. ಹಾಗೆಯೇ ಅವರನ್ನು ವಿರೋಧಿಸುವ ಓದುಗರೂ ಇದ್ದರು. ಸ್ವಾರಸ್ಯವೆಂದರೆ ಎರಡು ಕಡೆಯವರೂ ಅವರ ಕೃತಿಗಳನ್ನು ಬಿಡುಗಡೆಯಾದ ತಕ್ಷಣವೇ ತಪ್ಪದೇ ಓದುತ್ತಿದ್ದರು.ನಂತರದ ದಿನಗಳಲ್ಲಿ ಆರಾಧಕರ ಕಡೆಯಿಂದ ಮೆಚ್ಚುಗೆಯೂ, ವಿರೋಧಿಗಳ ಕಡೆಯಿಂದ ಟೀಕೆಯೂ ಕೇಳಿ ಬರುತ್ತಿತ್ತು. ಅದೇ ಸಂದರ್ಭದಲ್ಲಿ ಆ ಕೃತಿಯ ವಸ್ತು, ವಿಷಯ, ತಂತ್ರಗಾರಿಕೆ, ಅಲ್ಲಿನ ಪಾತ್ರವೈವಿಧ್ಯದ ಬಗ್ಗೆ ಕೂಡ ಚರ್ಚೆಯಾಗುತ್ತಿತ್ತು. ಹೀಗೆ, ಒಂದು ಕೃತಿಯ ಮೂಲಕ ಎಲ್ಲರನ್ನೂ ತಲುಪುತ್ತಿದ್ದವರು ಎಸ್. ಎಲ್. ಭೈರಪ್ಪ.
ನೆಚ್ಚಿನ ನಟನೊಬ್ಬನ ಸಿನಿಮಾ ತೆರೆ ಕಾಣುವಾಗ, ಜನ ಉದ್ದುದ್ದ ಸಾಲುಗಟ್ಟುವುದನ್ನು ನೋಡಿದ್ದೇವೆ. ಟಿಕೆಟುಗಳೆಲ್ಲ ಬರಿದಾಗಿ, ಸೋಲ್ಡ್ ಔಟ್, ಹೌಸ್ಫುಲ್ ಎನ್ನುವ ಫಲಕ ನೇತುಬೀಳುವುದನ್ನೂ ಕಂಡಿದ್ದೇವೆ. ಅಂಥದ್ದೇ "ಮ್ಯಾಜಿಕ್' ಕಾದಂಬರಿ ಜಗತ್ತಿನಲ್ಲಿ ಘಟಿಸುವಂತೆ ಮಾಡಿದ ಮಾಂತ್ರಿಕ ಡಾ.ಎಸ್.ಎಲ್. ಭೈರಪ್ಪ, ಕಾದಂಬರಿ ಬಿಡುಗಡೆಗೂ ಮುನ್ನವೇ, ಮರುಮುದ್ರಣದ ಸುದ್ದಿ. ಅಭಿಮಾನಿಗಳಿಗೆ ಸಂವಾದಗಳ ಹಬ್ಬ. ತಿಂಗಳುಗಟ್ಟಲೆ, ವರ್ಷಗಟ್ಟಲೆ ಚರ್ಚೆ. ವಿರೋಧಿಗಳ ಬಾಯಿಯಲ್ಲೂ ಭೈರಪ್ಪ ನಾಮಜಪ. ಇವೆಲ್ಲ ಕಾರಣಕ್ಕಾಗಿಯೇ ಅವರನ್ನು ಜನ "ಸ್ಟಾರ್ ಕಾದಂಬರಿಕಾರ' ಅಂತ ಒಪ್ಪಿಕೊಂಡಿದ್ದರು.
ಕನ್ನಡದ ಕೃತಿಗಳಿಗೆ ಓದುಗರಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದವರು ಭೈರಪ್ಪ. ಎಲ್ಲಾ ವರ್ಗದ ಜನರೂ ಅವರ ಕೃತಿಗಳನ್ನು ಮುಗಿಬಿದ್ದು ಓದಿದರು (ಈಗಲೂ ಓದುತ್ತಿದ್ದಾರೆ). ಅದರಲ್ಲೂ 70 ಮತ್ತು 80 ರ ದಶಕಗಳಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಮನೆಯ ಜನ ಭೈರಪ್ಪನವರ ಕೃತಿಯ ಕುರಿತು ಮಾತಾಡುತ್ತಿದ್ದರು. ಗೃಹಿಣಿಯರು, ಹೊಸ ಕಾದಂಬರಿ ಬಂದಾಕ್ಷಣ ಕೊಡಬೇಕೆಂದು ಸಕ್ಯುಲೇಟಿಂಗ್ ಲೈಬ್ರರಿಯವರಿಗೆ ತಾಕೀತು ಮಾಡುತ್ತಿದ್ದರು. ಒಂದು ಕಾದಂಬರಿಯ ಪಾತ್ರ, ಒಂದು ಸಂಭಾಷಣೆ, ಕಾದಂಬರಿಯ ಅಂತ್ಯ ಕುರಿತು ಆಗ ಚರ್ಚೆಗಳಾಗುತ್ತಿದ್ದವು.
ಅವರ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಅನೇಕ ಕಾದಂಬರಿಗಳು ಸಿನಿಮಾ ಮತ್ತು ಧಾರವಾಹಿಗಳಾಗಿವೆ... ಪದ್ಮಭೂಷಣ ಪ್ರಶಸ್ತಿ ಸೇರಿ ಸರಸ್ವತಿ ಸಮ್ಮಾನ್, ನಾಡೋಜ ಇನ್ನು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ಕಾದಂಬರಿಗಳು ಅನೇಕ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಜೊತೆಗೆ ಇನ್ನಿತರ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ಎಸ್ ಎಲ್ ಭೈರಪ್ಪನವರ ನಿಧನ....ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ..
🙏🙏🙏🙏🙏
.jpg)
No comments:
Post a Comment