ಕಥೆ-886
ಹೃದಯದಲ್ಲಿ ಜಾಗ ಖರೀದಿಸುವುದೇ ಶ್ರೀಮಂತಿಕೆ
ಹಣವಿದ್ದವರು ಏನು ಬೇಕಾದರೂ ಖರೀದಿಸಬಹುದು. ಹಣದಿಂದಲೇ ಎಲ್ಲವೂ ಇದೆ ಎಂದು ತಿಳಿದವರು ಬಹಳ ಜನ. ಆದರೆ, ಇನ್ನೊಬ್ಬರ ಹೃದಯದಲ್ಲಿ ಜಾಗ ಖರೀದಿಸಲು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಹಣವಲ್ಲ ನಮ್ಮ ಉತ್ತಮವಾದ ವ್ಯಕ್ತಿತ್ವ.. ಕೆಟ್ಟವರು ತುಂಬಾ ತುಂಬಾ ಬೆಳೆಯಬಹುದು. ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು. ಆದರೆ, ನಾಶ ಮಾಡಲು ಆಗುವುದಿಲ್ಲ. ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ, ಆದರೆ, ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ. ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುನ್ನುಗ್ಗಿದಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿಯಾಗುತ್ತೇವೆ.
ಸಕ್ಕರೆ ಸಹವಾಸ ಮಾಡಿದ ಹಾಲು ಸಿಹಿ ಆಗುತ್ತದೆ ಹುಳಿ ಸಹವಾಸ ಮಾಡಿದ ಹಾಲು ಒಡೆದು ಹೋಗುತ್ತದೆ. ಅದೇ ರೀತಿ ಒಳ್ಳೆಯವರ ಸಹವಾಸ ಮಾಡಿದರೆ ಜೀವನ ಸುಖಮಯವಾಗುತ್ತದೆ. ಕೆಟ್ಟವರ ಸಹವಾಸ ಮಾಡಿದರೆ ಜೀವನ ಒಡೆದು ಹೋಗುತ್ತದೆ. ಮನುಷ್ಯ ಅದೆಷ್ಟೋ ಹಣ ಗಳಿಸಿ ಶ್ರೀಮಂತರಾದರು ಅವನ ಮನದಲ್ಲಿ ಕರುಣೆ ಪ್ರೀತಿ ಇಲ್ಲ ಅಂತ ಅಂದ್ರೆ ಅವನು ಬಡವರಲ್ಲಿಯೇ ಕಡು ಬಡವನಾಗುತ್ತಾನೆ. ಜೀವನದಲ್ಲಿ ಇಬ್ಬರನ್ನು ಮರೆಯಬಾರದು. ಒಬ್ಬರು ನಮಗೆ ಅಗತ್ಯವಿದ್ದಾಗ ದೂರ ಸರಿದವರು ಮತ್ತು ಎರಡನೆಯವರು ನೀವು ಕೇಳುವ ಮುನ್ನವೇ ನಿಮ್ಮ ಸಹಾಯಕ್ಕೆ ಮುಂದಾದವರು. ಜೀವನ ನಿತ್ಯ ಕಲಿಯುವ ಪಾಠಶಾಲೆ. ಸಜ್ಜನರಿಂದ ಸಂತೋಷದ ಪಾಠ ಕಲಿತರೆ ದುರ್ಜನರಿಂದ ದುಃಖದ ಪಾಠ ಕಲಿಯುತ್ತೇವೆ. ಕಲಿತ ಪಾಠ ಅರಗಿಸಿಕೊಳ್ಳುವುದೇ ಜೀವನದ ಶ್ರೇಷ್ಠಕಲಿಕೆ.
ಬಹಳ ಓದಿದವರು ದೊಡ್ಡವರಾಗುವುದಿಲ್ಲ. ಜನರ ವೇದನೆಯನ್ನು ಅರಿತವರು ಮಾತ್ರ ದೊಡ್ಡವರಾಗುತ್ತಾರೆ. ಬಡವ ಹೊಲದಲ್ಲಿ ಬೆವರು ಸುರಿಸಿದರೆ, ಸಿರಿವಂತ ಜಿಮ್ ನಲ್ಲಿ ಬೆವರು ಸುರಿಸುತ್ತಾನೆ. ಅವಧಿ ಮುಗಿದ ಮೇಲೆ ಔಷಧ ಉಪಯೋಗಕ್ಕೆ ಬರುವುದಿಲ್ಲ. ನಂಬಿಕೆ ಕಳೆದುಕೊಂಡ ಮೇಲೆ ಸಂಬಂಧಗಳಿಗೆ ಬೆಲೆ ಇರುವುದಿಲ್ಲ. ಈ ಪ್ರಪಂಚ ಬಹಳ ವಿಚಿತ್ರವಾದುದು. ಇಲ್ಲಿ ಸುಳ್ಳು ಹೇಳಿದರೆ ಮಾತ್ರ ಸಂಬಂಧಗಳು ಉಳಿಯುತ್ತವೆ. ಹಾಲು ಮೊಸರುಗಳಿಗಿಂತ ತಡವಾಗಿ ಹುಟ್ಟಿದ ತುಪ್ಪ ಶ್ರೇಷ್ಠವಾಗುತ್ತದೆ. ಹಿರಿತನವೆಂಬುದು ಒಳ್ಳೆಯ ಗುಣಗಳಿಂದ ಪ್ರಾಪ್ತವಾಗುವುದೇ ವಿನಹ ವಯಸ್ಸಿನಿಂದಲ್ಲ, ಒಳ್ಳೆಯತನವೇ ಜೀವನದ ದಾರಿಗೆ ಬೆಳಕು ತೋರುವುದೆಂಬ ಮಾತು ನೂರಕ್ಕೆ ನೂರು ಸತ್ಯ ಎಂಬುದನ್ನು ಮರೆಯಬಾರದು.
ರಂಭಾಪುರಿ ಶ್ರೀಗಳು ಬಾಳೆಹೊನ್ನೂರು
No comments:
Post a Comment