ಕಥೆ-908
ಬದುಕಿನ ಅದ್ಭುತ
ದಲ್ಲಾಳಿಯೊಬ್ಬ ಷೇರು ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದ. ಅದರಿಂದ ಖಿನ್ನತೆ ಆವರಿಸಿಕೊಂಡಿತು. ಆ ಹತಾಶೆಯಿಂದ ಹೊರಬರಲು, ಮಾಮೂಲಿಯಂತಿರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮನೆ ಮಂದಿಯೆಲ್ಲ ಮನವೊಲಿಸಿದ ಮೇಲೆ ಮನಃಶಾಂತಿಯನ್ನು ಅರಸುತ್ತ ಆಶ್ರಮಕ್ಕೆ ಬಂದ. ಅಲ್ಲಿ ಧ್ಯಾನ ಮಾಡಲಾಗದಷ್ಟು ಆತ ವಿಚಲಿತನಾಗಿದ್ದ. ಇವನ ಸ್ಥಿತಿಯನ್ನು ಕಂಡು ಆಶ್ರಮದ ಗುರುಗಳು 'ನೆಲದ ಮೇಲೆ ಮಲಗುವವರು ಎಂದೂ ತಮ್ಮ ಹಾಸಿಗೆಯ ಮೇಲಿಂದ ಬೀಳುವುದಿಲ್ಲ' ಎಂದು ಮಾರ್ಮಿಕವಾಗಿ ನುಡಿದರು.
ಗುರುವಿನ ಮಾತು ನಮ್ಮನ್ನು ಯೋಚನೆಗೆ ಹಚ್ಚುವಂಥದ್ದು. ನೆಲದ ಮೇಲೆ ಮಲಗುವುದು ವಿನಮ್ರತೆಯ ಗುಣವನ್ನು ಬೆಳೆಸಿಕೊಳ್ಳುವ ಪ್ರತೀಕವೂ ಆಗಿದೆ. ಸರಳತೆ, ಬೇಕುಗಳನ್ನು ಕಡಿಮೆ ಮಾಡಿಕೊಳ್ಳುವುದು, ಸೌಜನ್ಯದಿಂದ ವರ್ತಿಸುವುದು ಇವೆಲ್ಲ ಬದುಕಿನ ಹಾದಿಯನ್ನು ಸುಗಮಗೊಳಿಸುತ್ತವೆ. 'ಬೇಕು'ಗಳ ಅಬ್ಬರ ಅಶಾಂತಿ, ಚಡಪಡಿಕೆಯನ್ನು ಹೆಚ್ಚಿಸುತ್ತದೆ. ವಿನಮ್ರತೆಯ ಅಭಾವವಿದ್ದಲ್ಲಿ ಹತಾಶೆ, ಬೇಸರ, ಒತ್ತಡ, ಖಿನ್ನತೆ, ಅತೃಪ್ತಿಯ ಕೋಡಿ ಹರಿಯುವುದು ಸಾಮಾನ್ಯ. ಒಣ ಪ್ರದರ್ಶನವಿದ್ದಲ್ಲಿ ವ್ಯಕ್ತಿತ್ವಕ್ಕೆ ಯಾವುದೇ ಕಿಮ್ಮತ್ತೂ ಇರುವುದಿಲ್ಲ. ಆರ್ಥಿಕ ನಷ್ಟದಿಂದ ವ್ಯಕ್ತಿಯ ಘಾಸಿಯಾಗುತ್ತದೆ. ಪ್ರತಿಷ್ಠೆಗೆ ಆದರೆ, ಒಣಪ್ರತಿಷ್ಠೆ ಹೆಚ್ಚಾದಷ್ಟು ವ್ಯಕ್ತಿ ಹೆಚ್ಚು ಆಳಕ್ಕೆ ಕುಸಿಯುತ್ತಾನೆ. ಬುಡಸಮೇತ ಕಿತ್ತು ಬೀಳಿಸುವ ಪ್ರತಿಷ್ಠೆಯ ಬೆನ್ನು ಹತ್ತಿದರೆ ವಿನಮ್ರತೆಯ ಅಭಾವ ಕಾಡದೇ ಇರುವುದಿಲ್ಲ ಎನ್ನುವುದು ಸತ್ಯ. ಸರಳತೆಯ ವ್ಯಕ್ತಿತ್ವ ನೆಮ್ಮದಿಗೆ ಕಾರಣವಾಗುವ ಜತೆಗೆ, ಅತೃಪ್ತಿಯಿಂದ ದೂರ ಇರುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಸರಳ ಬದುಕೇ ನಿಜವಾದ ಜೀವನಧರ್ಮವೂ ಹೌದು. ಕರುನಾಡು ಕಂಡ ಮಹಾನ ದಾರ್ಶನಿಕ ಡಿವಿಜಿ ತಮಗೆ ಸಂದ ಬಹುತೇಕ ಬಹುಮಾನ, ಪ್ರಶಸ್ತಿಗಳ ಮೊತ್ತವನ್ನು ವಿನಮ್ರರಾಗಿ ಸಾರ್ವಜನಿಕ ಸಂಸ್ಥೆಗೆ ಮುಡಿಪಾಗಿಟ್ಟರು. ಸರ್ ಎಂ. ವಿಶ್ವೇಶ್ವರಯ್ಯ ಕೂಡ ಡಿವಿಜಿಯವರಿಗೆ ಹಣ ಸಂದಾಯ ಮಾಡಲು ಹೋಗಿ ವಿಫಲರಾಗಿದ್ದರು. ಅಷ್ಟು ಎತ್ತರದ ವ್ಯಕ್ತಿತ್ವ ಡಿವಿಜಿಯವರದ್ದು.
ಒಳ್ಳೆಯ ಮನಸ್ಸಿನ ಗುರುತರ ಚಿನ್ನೆಯೆಂದರೆ ವಿನಮ್ರತೆ. ಯಾರಿಗೂ ನೋವು ಮಾಡದ ಮಾತುಗಳು ಅಗತ್ಯ. ಇದರಿಂದ ಅಸಹಾಯಕರಿಗೆ ಸಹಾಯ ಮಾಡುವ ಹೃದಯ ದಕ್ಕುತ್ತದೆ. ಪ್ರತಿಷ್ಠೆಯ ದಾರಿಯಲ್ಲಿ ಹೆಜ್ಜೆ ಹಾಕುವವರ ಮಾತುಗಳು ಯಾರಿಗೂ ಬೇಡವಾಗುತ್ತವೆ. ಅವು ಖಾಲಿಡಬ್ಬಿಯಲ್ಲಿ ಕಲ್ಲು ಹಾಕಿ ಅಲ್ಲಾಡಿಸಿದಂತೆ. ಅಷ್ಟಕ್ಕೂ, ವಿನಮ್ರತೆ ತಾನಾಗಿ ಎಲ್ಲರಿಗೂ ಬರುವುದಿಲ್ಲ. ನಾವಾಗಿಯೇ ಕಲಿಯಬೇಕು, ಅಳವಡಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಸಂತಸದ ಚಿಲುಮೆ ಚಿಮ್ಮಿ ಹರಿಯುವುದು. ಜೀವನಪರ್ಯಂತ ಸಂತೋಷಕ್ಕೆ ಪಾರವೇ ಇಲ್ಲ. ವಿನಮ್ರತೆಗೆ ಕಟ್ಟು ಬಿದ್ದರೆ ನಮ್ಮಷ್ಟು ಸುಖಿಗಳು ಮತ್ತೊಬ್ಬರಿಲ್ಲ. ಅದು ಒಂದು ಕಲ್ಪವೃಕ್ಷದಂತೆ. ಒಮ್ಮೆ ಎದೆಯಲ್ಲಿ ಬಿತ್ತಲ್ಪಟ್ಟರೆ ಸಾಕು ಬೇಡಿದ್ದೆಲ್ಲವನ್ನು ಕರುಣಿಸುವುದು. ವಿನಮ್ರತೆ ಶತ್ರುವನ್ನೂ ಗೆಲ್ಲುತ್ತದೆ. ಇದು ಬದುಕಿನ ಅದ್ಭುತ ಅನುಭವಿಸೋಣವಲ್ಲವೇ?
ಕೃಪೆ :ನೆಟ್
No comments:
Post a Comment