ಕಥೆ-1017
ಜೀವನದ ವಾಹನ ಗಣರಾಜ್ಯದ ದಿನ
(ಗಣರಾಜ್ಯೋತ್ಸವದ ಶುಭಾಶಯಗಳು)
ಇಂದು ( ಜನವರಿ 26ರಂದು) ಭಾರತೀಯರಾದ ನಮಗೆ, ನಮ್ಮನ್ನು ನಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ... ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನವೊಂದು ಅರ್ಪಿತವಾಯ್ತು.
ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್ರ ಅಧ್ಯಕ್ಷತೆಯಲ್ಲಿ 1950, ಜನವರಿ 26ರಂದು ಅಂಗೀಕರಿಸಲ್ಪಟ್ಟಿತ್ತು.
ಇಂದಿನ ಭಾರತದ ಪ್ರಜೆಗಳಲ್ಲಿ ದೇಶಪ್ರೇಮ ಕುಂದಿದೆ. ಮಹಾತ್ಮರ ಹೋರಾಟದ ಫಲವೇ ಸ್ವಾತಂತ್ರ್ಯ, ಎಲ್ಲರಿಗೂ ತಮ್ಮ ಲಾಭವೇ ಮುಖ್ಯವಾಗಬಾರದು, ದೇಶ ಮುಖ್ಯವಾಗಬೇಕು.
ಅನರ್ಹ ಅಭ್ಯರ್ಥಿಗಳು ಗೆದ್ದು ಅಧಿಕಾರಕ್ಕೆ ದೇಶಕ್ಕೆ ಮಾರಕ. ಹಾಗಾಗಿ ಮತದಾನ ಮಾಡುವ ಸರಿ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಕೈಯಲ್ಲಿದೆ.
ಅಂದಿನ ಮಹಾತ್ಮರು ಸಂವಿಧಾನ ಎಂಬ ಪೌಷ್ಠಿಕಾಂಶದಿಂದ ಭಾರತದ ಅಭಿವೃದ್ಧಿ ಎಂಬ ಮಗು ಮುಂದೆ ಏಳಿಗೆಯತ್ತ ಹೆಜ್ಜೆ ಹಾಕುತ್ತೆ ಎಂಬ ಕಲ್ಪನೆಯಲ್ಲಿದ್ದರು. ದೇಶದ ಸಮಗ್ರ ಏಳಿಗೆಯ ಕನಸು ಕಂಡರು. ಪುಟ್ಟ ಮಗುವಿನ ಭವಿಷ್ಯದ ಬಗ್ಗೆ ತಾಯಿ ಕಲ್ಪಿಸಿಕೊಂಡಂತೆ. ಆದರೆ ಅವರ ನಿರೀಕ್ಷೆಯ ಮಟ್ಟದಲ್ಲಿ ಇಂದಿನ ಸಮಾಜ, ದೇಶ ಅಭಿವೃದ್ಧಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ?
ಗಣರಾಜ್ಯ ದಿನ ಎಂದರೆ ಸರಕಾರಿ ರಜೆ. ಅನ್ನುವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅರ್ಥೈಸಿಕೊಂಡಂತಿದೆ. ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯದಿನದ ಆಚರಣೆಗಳನ್ನು ಟೀವಿಯಲ್ಲಿ ನೋಡಿ ಸಂತಸ ಪಟ್ಟು, ಟಿವಿ ಕಾರ್ಯಕ್ರಮ ಮುಗಿದಾಗ ಭವ್ಯ ಭಾರತದ ಪ್ರಜೆಗಳ ಗಣರಾಜ್ಯ ದಿನದ ಆಚರಣೆಯೂ ಮುಗಿದು ಹೋಗುತ್ತದೆ.
ಎಲ್ಲ ಧಾರ್ಮಿಕ ಹಬ್ಬಗಳಂತೆ, ರಾಷ್ಟ್ರೀಯ ಹಬ್ಬಗಳೂ ರಾಷ್ಟ್ರದ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು, ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಪಡೆದುಕೊಂಡ ದೇಶ ನಮ್ಮದು. ನಮ್ಮ ಧ್ಯೇಯ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಅನುರಣಿಸುತ್ತಿರಬೇಕು.
ಸುಸಂಸ್ಕೃತ ಸಮಾಜದ, ಸರ್ವತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಯಶಸ್ವಿ ದೇಶದ ಕನಸು ಕಂಡು, ಆ ದೇಶಕ್ಕಾಗಿ ಬೃಹತ್ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಆ ನಾಯಕರ, ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕು. ಆ ನಾಯಕರ ಉದ್ದೇಶವನ್ನು ನೆನಪಿಸಿಕೊಂಡು, ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗುವಂತಾಗಬೇಕೆಂಬ ಉದ್ದೇಶ ಇಂಥ ರಾಷ್ಟ್ರೀಯ ದಿನಗಳ ಆಚರಣೆಯ ಹಿಂದಿದೆ.
ಅಖಂಡ ಭಾರತದ ಕೋಟಿ ಕೋಟಿ ಪ್ರಜೆಗಳಿಗೂ ದೇಶದ ಜವಾಬ್ದಾರಿಯನ್ನು ಅಧಿಕೃತವಾಗಿ ನೀಡಿದ ಶುಭ ದಿನ ಇವತ್ತು. ಪ್ರತಿಯೊಬ್ಬ ಭಾರತೀಯನೂ ದೇಶದ ಅಭಿವೃದ್ಧಿಗೆ ಜವಾಬ್ದಾರನಾಗಿರುತ್ತಾನೆ. ಗಣರಾಜ್ಯದಿನದಂತೆ ಶುಭ ದಿನದಲ್ಲಿ ನಮ್ಮ ಎಲ್ಲ ಜವಾಬ್ಧಾರಿಗಳಿಗೂ ಬದ್ಧರಾಗಿರುತ್ತೇನೆ ಎಂಬ ಪ್ರತಿಜ್ಞೆ ಮಾಡುವುದರ ಮೂಲಕ, ಗಣರಾಜ್ಯದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು. ಆಗಲೇ ಈ ಗಣರಾಜ್ಯದಿನಕ್ಕೆ ನಿಜವಾದ ಅರ್ಥ ಬರುತ್ತದೆ.
ಕೃಪೆ :ನೆಟ್
No comments:
Post a Comment