Wednesday, February 4, 2026

 ಕಥೆ-1026

ದಿಕ್ಕು ಸ್ಪಷ್ಟವಾಗಿರುವ ಒಂದು ಹೆಜ್ಜೆ ಸಾವಿರ ತಪ್ಪು ಹೆಜ್ಜೆಗಿಂತ ಶ್ರೇಷ್ಠ.. 

ಒಂದು ದೊಡ್ಡ ಕಾಡಿನ ಅಂಚಿನಲ್ಲಿ ಇರುವ ಕೆಂಪು ಮಣ್ಣಿನ ಮೇಲೆ ಸಾವಿರಾರು ಇರುವೆಗಳು ದಿನವೂ ಓಡಾಡುತ್ತಿದ್ದವು.

ಬೆಳಿಗ್ಗೆಯಿಂದ ಸಂಜೆವರೆಗೆ ಅವುಗಳು ಓಡುತ್ತಲೇ ಇರುತ್ತಿದ್ದವು. ನೋಡಿದವರಿಗೆ ಅವುಗಳು ತುಂಬಾ ಕೆಲಸ ಮಾಡುತ್ತಿರುವಂತೆ ಕಾಣುತ್ತಿತ್ತು.


ಆದರೆ ಒಂದು ಇರುವೆ ಮಾತ್ರ ಬೇರೆಯಾಗಿತ್ತು.ಅದು ಗದ್ದಲದ ಸಾಲಿನಲ್ಲಿ ಸೇರದೆ, ನಿಂತು ಸುತ್ತಲೂ ನೋಡುತ್ತಿತ್ತು.

“ಎಲ್ಲರೂ ಎಲ್ಲಿ ಹೋಗುತ್ತಿದ್ದೀರಿ?” ಎಂದು ಕೇಳಿತು.


ಇರುವೆಗಳ ಉತ್ತರ ಒಂದೇ:

“ನಮಗೆ ಗೊತ್ತಿಲ್ಲ… ಎಲ್ಲರೂ ಹೋಗುತ್ತಿರುವ ದಿಕ್ಕಿಗೆ ನಾವು ಹೋಗುತ್ತಿದ್ದೇವೆ!”


ಆ ಮಾತು ಆ ಇರುವೆಯನ್ನು ಯೋಚನೆಗೆ ತಳ್ಳಿತು.


ಅದು ನೆಲದ ಮೇಲೆ ಬಿದ್ದಿದ್ದ ಸಿಹಿ ಹಣ್ಣಿನ ವಾಸನೆ ಕಂಡು.

ಆ ಕಡೆಗೆ ಹೋಗಿ, ದಾರಿಯಲ್ಲಿ 

ಅದು ಅಪಾಯದ ದಾರಿ ಅಲ್ಲ, ಎಂದು ಅನ್ನಿಸಿತು.


 ಧೈರ್ಯವಾಗಿ ಆ ದಿಕ್ಕಿನಲ್ಲಿ ನಡೆಯಲು ಶುರುಮಾಡಿತು.


ಮತ್ತೊಂದು ಕಡೆ ಸಾವಿರಾರು ಇರುವೆಗಳು ದಿನವಿಡೀ ಓಡಿದರೂ, ಅವುಗಳ ಗೂಡು ತುಂಬಲಿಲ್ಲ.

ಆದರೆ ಈ ಒಂದೇ ಇರುವೆ, ಸರಿಯಾದ ದಿಕ್ಕಿನಲ್ಲಿ ನಡೆದ ಕಾರಣ, ತನ್ನ ಗೂಡಿಗೆ ಸಾಕಷ್ಟು ಆಹಾರವನ್ನು ತಲುಪಿಸಿತು.


ಸಂಜೆ ಹಿಂತಿರುಗಿದಾಗ ಉಳಿದ ಇರುವೆಗಳು ಅಚ್ಚರಿಯಿಂದ ನೋಡಿದವು.

ಅದು ನಗುತಾ ಹೇಳಿತು,

ಬೇಸತ್ತಂತೆ ಓಡುತ್ತಿರೋದು ಪ್ರಗತಿ ಅಲ್ಲ, ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡುವುದೇ ನಿಜವಾದ ಸಾಧನೆ.

ಎಷ್ಟೋ ವಿದ್ಯಾರ್ಥಿಗಳು ಓದುತ್ತಿರುತ್ತಾರೆ, ಏನು ಓದುತ್ತಿದ್ದಾರೆ ಎಂಬುದೇ ಅವರಿಗೆ ಗೊತ್ತಿರುವುದಿಲ್ಲ.. ಅರ್ಥವಿಲ್ಲದ ಓದು ವ್ಯರ್ಥ


ಕೆಲವರು ಯಾವಾಗಲೂ ಬ್ಯುಸಿ ಅಂದುಕೊಳ್ಳುತ್ತಾರೆ, ಸದಾ ಬ್ಯುಸಿಯಾಗಿರುವುದೇ ಯಶಸ್ಸು ಅಲ್ಲ.. ಗುರಿಯಿಲ್ಲದ ಬ್ಯುಸಿ, ಓಟ ಜೀವನವನ್ನು ಮುಂದೆ ಕೊಂಡೊಯ್ಯದು


ದಿಕ್ಕು ಸ್ಪಷ್ಟವಾಗಿರುವ ಒಂದು ಹೆಜ್ಜೆ ಸಾವಿರ ತಪ್ಪು ಹೆಜ್ಜೆಗಿಂತ ಶ್ರೇಷ್ಠ.. 

ಕೃಪೆ :ಅಂತರ್ಜಾಲ

Tuesday, February 3, 2026

 ಕಥೆ-1025

ಸಂತೋಷ ಹೊರಗಿನ ವಸ್ತುಗಳ­ಲ್ಲಿಲ್ಲ. ಅದು ನಮ್ಮ ಆಂತರ್ಯದಲ್ಲಿದೆ..


  30 ವರ್ಷ­ಗಳ ಹಿಂದೆ ನನ್ನ ವಿದ್ಯಾರ್ಥಿನಿಯಾಗಿದ್ದವಳು ಅತ್ಯಂತ ಬೆಲೆ­ಬಾಳುವ ಕಾರಿನಲ್ಲಿ, ತುಂಬ ಬೆಲೆಬಾಳುವ ಬಟ್ಟೆಗಳನ್ನು ಧರಿಸಿ, ಬಹಳ ಬೆಲೆಯ ಸುಗಂಧ ಸಿಂಪಡಿ­ಸಿಕೊಂಡು ಬಂದಿದ್ದಳು. ಮುಖದ ತುಂಬೆಲ್ಲ ಪ್ಲಾಸ್ಟಿಕ್ ನಗೆ ಅಂಟಿಸಿ­­­ಕೊಂಡಿದ್ದಳು. ಮಾತನಾಡುತ್ತ ಕುಳಿತಾಗ, ‘ಈಗ ಹೇಗಿದ್ದೀ?’ ಅಮ್ಮ ಎಂದು ಕೇಳಿದೆ. ಅದೇಕೋ ಕ್ಷಣದಲ್ಲಿಯೇ ಪ್ಲಾಸ್ಟಿಕ್ ನಗೆ ಕರಗಿ ಹೋಯಿತು.


ಕೈಯ್ಯ­ಲ್ಲಿದ್ದ ವಸ್ತ್ರವನ್ನು ಕಣ್ಣಿಗೊತ್ತಿ­ಕೊಂಡು ಬಿಕ್ಕಿದಳು. ತನ್ನ ಕಥೆ ಹೇಳಿದಳು. ಅದು ಚಿನ್ನದ ಪಂಜರದಲ್ಲಿಯೇ ಉಳಿದ ಸುಂದರ ಹಕ್ಕಿಯ ಕಥೆ. ಮುಂದಿನ ಬೆಂಚಿ­ನಲ್ಲಿಯೇ ಕುಳಿತು, ಸುಂದರ ಮುಖದ, ಕಣ್ಣರಳಿಸಿ ಪಾಠ ಕೇಳುತ್ತಿದ್ದ ಈ ಹುಡು­ಗಿಯ ಅಂದಿನ ಚಹರೆ ತಕ್ಷಣ ನನ್ನ ಕಣ್ಣ ಮುಂದೆ ಬಂತು. ಮಧ್ಯಮ ವರ್ಗದ ಮನೆ­­ಯಲ್ಲಿ ಎಷ್ಟು ಸಂತೋಷವಾ­ಗಿದ್ದಳಲ್ಲ ಆಕೆ!


ಇಂತಹ ಬಹಳಷ್ಟು ಮಂದಿ­ಯನ್ನು ನಾನು ಕಂಡಿದ್ದೇನೆ. ಪ್ರಪಂಚದ ಹೊಳೆಹೊಳೆ­ಯುವ ವಸ್ತುಗಳಲ್ಲಿ, ಹಣ­ದಲ್ಲಿ ಬಂಗಲೆಗಳಲ್ಲಿ, ಕಾರುಗಳಲ್ಲಿ ಸಂತೋಷ­ವಿ­ದೆಯೆಂದು ನಂಬಿ ಬದುಕನ್ನು ಒತ್ತೆ ಹಾಕಿ, ಏಕಾಂತದಲ್ಲಿ ಬಿಕ್ಕುವ ಜೀವ­ಗಳನ್ನು ಕಂಡಾಗ ಹೃದಯ ಮರು­ಗು­ತ್ತದೆ. 


 ವಿಜಯಾ ದಬ್ಬೆಯವರ ಕವನದಂತೆ 

ರೇಷ್ಮೆ ಲಂಗ, ಬಂಗಾರದ, ಮುತ್ತಿನ ಹಾರವನ್ನು ಕೊಟ್ಟ ಹುಡುಗ ನಿಜ­­ವಾಗಿಯೂ ತನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ಹುಡುಗಿಗೆ. ಆದರೆ ಕೆಲ ಸಮ­­ಯದ ನಂತರ ಈ ತೋರಿಕೆಯ ಪ್ರೇಮದ ಹಿಂದೆ ಅದೆಂಥ ಹಿಂಸೆ ಇದೆ ಎಂಬ ಅರಿವು ಆಕೆಗೆ ಆಗುತ್ತದೆ.


ಈ ರೇಶಿಮೆಯ, ಮುತ್ತು ಚಿನ್ನದ ಬೆನ್ನು ನೋಡಿ

ನಡಗುತ್ತಿದೆ ಜೀವ.

ಈ ಮೋಹದ ವಸ್ತುಗಳೆಲ್ಲ

ಹಿಂಸೆಯ ಮೊಟ್ಟೆಗಳೆಂದು

ನಮಗೇಕೆ ತಿಳಿಯುವುದಿಲ್ಲ?


ಆಕೆಗೆ ಹೊಳೆಯುವ ರೇಷ್ಮೆಯಾಗುವ ಮೊದಲು ಕುದಿದು, ಬೆಂದು, ಸತ್ತ, ಹುಳದ ನೋವು, ಮುತ್ತಾಗುವ ಮುನ್ನ ಚಿಪ್ಪಿನೊಳಗೇ ಸಂಕಟಪಟ್ಟ. ಮೈತರ­ಚಿ­ಕೊಂಡ ಮೃದ್ವಂಗಿಯ ನರಳಿಕೆ, ತಿಳಿದಿದೆ. ಹಿಂಸೆಯಿಲ್ಲದೇ ಪ್ರೀತಿ ಸಾಧ್ಯವಿಲ್ಲವೇ ಎಂಬ ಹುಡುಕಾಟ ನಡೆಸುತ್ತಾಳೆ. 


ಇರಬಹುದೆ

ಕೃತಕ ರೇಷ್ಮೆ, ರೋಲ್ಡಗೋಲ್ಡಿನಲ್ಲಿ,

ಹಿಂಸೆಯಿಲ್ಲದ ಪ್ರೀತಿ?

ಎಲ್ಲಿದ್ದರೂ ಸರಿ

ಅದ ಹುಡುಕಬೇಕು


ಹೀಗೆ ಹಿಂಸೆಯಿಲ್ಲದ ಪ್ರೀತಿ, ವ್ಯವಹಾ­ರವಾಗದ ಸಂಬಂಧ ನಮ್ಮ ಹುಡು­ಕಾಟದ ಮುಖ್ಯ ವಸ್ತುವಾಗ­ಬೇಕು. ಸಂತೋಷ ಹೊರಗಿನ ವಸ್ತುಗಳ­ಲ್ಲಿಲ್ಲ. ಅದು ನಮ್ಮ ಆಂತರ್ಯದಲ್ಲಿದೆ ಎನ್ನುತ್ತದೆ ಭಾರತೀಯ ದರ್ಶನ.  


ತಾಯಿಯ ಮಡಿಲ ಮೇಲೆ ಮಲಗಿ ನಿದ್ರಿಸುವ ಮುಗ್ಧ ಮಗು ಛಲ್ಲನೇ ಚಿಮ್ಮಿಸುವ ನಗೆಯ ಹಿಂದಿನ ಸಂತೋಷಕ್ಕೆ ಯಾವ ಪ್ರಮೋಷನ್, ಹಣ, ಕಾರು, ಬಂಗಲೆ, ಜನಮನ್ನಣೆ? ಯಾವುದರ ಚಿಂತೆ ಇಲ್ಲದೇ ನಗುವ ಮಗುವಿನ ಸಂತೋಷ ನಮ್ಮ ಒಳಗೇ ಇದ್ದದ್ದು. ಅದನ್ನು ಹೊರಗಡೆಗೆ ಹುಡುಕುವ ಪ್ರಯತ್ನ ದೀಪದ ಹುಳು ಬೆಂಕಿಯಲ್ಲಿ ಶಾಂತಿ­ಯನ್ನು ಪಡೆಯಲು ಪ್ರಯತ್ನಿಸಿದಂತೆ. 


ಕೃಪೆ:ಅಂತರ್ಜಾಲ

Monday, February 2, 2026

 ಕಥೆ-1024

ಎಲ್ರಿಗೂ ಎಲ್ಲಾ ಹೊತ್ತೂ ಹಾಗೆ ಅನಿಸ್ಲೇಬೇಕು ಅಂತೇನಿಲ್ಲ.


ಚೀನಾದಲ್ಲಿ ಚೌ ಆಡಳಿತ ಕಾಲದಲ್ಲಿ ಸುಂಗ್ ಹೆಸರಿನ ಹಳ್ಳಿಲಿ ಒಬ್ಬ ರೈತ ಇದ್ದ, ಅವ್ನು ಯಾವಾಗ್ಲೂ ಒರಟಾದ ಸೆಣಬಿನ ಬಟ್ಟೆ ಮಾತ್ರ ತೊಟ್ಕೋತ್ತಿದ್ದ. ಚಳಿಗಾಲದಲ್ಲೂ ಅವ್ನು ಬೇರೆ ಬಟ್ಟೆ ಹಾಕ್ಕೊಳ್ತಾ ಇರ್ಲಿಲ್ಲ. ಗದ್ದೇಲಿ ಹೊಲ ಉಳುವಾಗ ಬಿಸಿಲಲ್ಲಿ ತನ್ನ ಮೈ ಬೆಚ್ಚಗೆ ಮಾಡ್ಕೊಳ್ತಿದ್ದ.


ದೊಡ್ ದೊಡ್ಡ ಅರಮನೆ, ಚಳಿಕಾಯಿಸೋ ಅಗ್ಗಿಷ್ಟಿಕೆ ಗೂಡು, ರೇಷ್ಮೆ ಬಟ್ಟೆ, ನರಿದೋ ತೋಳದ್ದೋ ತುಪ್ಪಳದ ಕೋಟು, ಇವೆಲ್ಲ ಇರತ್ತೆ ಅಂತಾನೇ ಅವ್ನಿಗೆ ಗೊತ್ತಿರಲಿಲ್ಲ. ಒಂದಿನ ಅವ್ನು ತನ್ನ ಹೆಂಡ್ತಿ ಹತ್ರ, “ಎಳೆ ಬಿಸಿಲಲ್ಲಿ ಬೆನ್ನು ಕಾಯಿಸ್ಕೊಳೋದು ಎಂಥಾ ಸುಖ ಅಂತ ತುಂಬಾ ಜನಕ್ಕೆ ಗೊತ್ತೇ ಇಲ್ಲ. ಇದನ್ನ ಹೋಗಿ ದೊರೆ ಹತ್ರ ಹೇಳ್ತೀನಿ. ಇಷ್ಟೊಳ್ಳೆ ವಿಚಾರ ಹೇಳಿದ್ದಕ್ಕೆ ಅವ್ನು ನಂಗೆ ಬಹುಮಾನ ಕೊಟ್ರೂ ಕೊಡ್ಬಹುದು” ಅಂದ. ಅಷ್ಟೇ ಅಲ್ಲ, ದೊರೆನ ಭೇಟಿ ಮಾಡಕ್ಕೆ ಅವಕಾಶ ಕೊಡ್ಸು ಅಂತ ಊರಿನ್ ಶ್ರೀಮಂತ ವ್ಯಾಪಾರಿ ಹತ್ರ ಹೋಗೂಬಿಟ್ಟ.


ಆ ಶ್ರೀಮಂತ ಅವ್ನು ಹೇಳಿದ್ದೆಲ್ಲ ಕೇಳಿ, “ನಿನ್ನನ್ ನೋಡಿ ನಮ್ಮಪ್ಪ ಹೇಳಿದ್ ಕತೆ ನೆನಪಾಯ್ತು. ಒಂದ್ ಸಲ ಒಬ್ಬಂಗೆ ಹಬೆಯಾಡೋ ಹದ ಬೆಂದ ಬೀನ್ಸ್, ಸುಟ್ಟ ಗೆಣಸು, ಖಾರ ಮಸಾಲೆ ಹಚ್ಚಿದ ಬಾತುಕೋಳಿ ಮಾಂಸ – ಸ್ವರ್ಗ ಸುಖ ಅನಿಸಿಬಿಟ್ಟಿತ್ತು. ಇನ್ಮೇಲೆ ಊರಿಗೆ ಇದೇ ಆಹಾರ ಆಗ್ಬೇಕು ಅಂತ ಶಿಫಾರಸು ಮಾಡೋಕೆ ಊರಿನ ಮುಖಂಡನ ಹತ್ರ ಹೋದ. ಆ ಮುಖಂಡ ಎಲ್ಲಿ ನೋಡೇ ಬಿಡೋಣ ಅಂತ ಅವನ್ನ ತಿನ್ನೋಕೆ ಹೋದಾಗ ಬಾಯೆಲ್ಲ ಸುಟ್ಟು, ಖಾರ ಅತಿಯಾಗಿ ಒದ್ದಾಡೋ ಪರಿಸ್ಥಿತಿ ಬಂದುಬಿಡ್ತು. ಆಮೇಲೆ ಹೊಟ್ಟೆನೋವು ಶುರುವಾಯ್ತು. ಕೊನೆಗೆ ಆ ಮನುಷ್ಯ ಊರಿನವರ ಕೋಪಕ್ಕೆ ಗುರಿಯಾಗ್ಬೇಕಾಯ್ತು” ಅಂದ.


ಶ್ರೀಮಂತನ ಮಾತು ರೈತನಿಗೆ ಅರ್ಥವಾಯ್ತು. ಸುಮ್ಮನೆ ಮನೆಗೆ ವಾಪಸ್ ಬಂದ.


ನಮ್ದೇ ಕತೆ ತಾನೆ ಇದು? ನಾವೂ ಆ ರೈತನ ಥರಾನೇ!


ಎಳೆ ಬಿಸಿಲು ಮೈಗೆ ಸೋಕೋದು ಹಿತವೇನೋ ಹೌದು. ಆದ್ರೆ ಅದು ಎಲ್ರಿಗೂ ಎಲ್ಲಾ ಹೊತ್ತೂ ಹಾಗೆ ಅನಿಸ್ಲೇಬೇಕು ಅಂತೇನಿಲ್ಲ. ಜನ ತಮ್ಮ ಲೈಫ್ ಸ್ಟೈಲಿಗೆ, ಉದ್ಯೋಗಕ್ಕೆ, ಅನಿವಾರ್ಯಕ್ಕೆ ತಕ್ಕ ಹಾಗೆ ಇಷ್ಟಾನಿಷ್ಟಗಳನ್ನ ಬೆಳೆಸ್ಕೊಂಡಿರ್ತಾರೆ. ಕಂಫರ್ಟ್‌ಗಳನ್ನ ರೂಢಿಸ್ಕೊಂಡಿರ್ತಾರೆ. ಒಬ್ರಿಗೆ ನಡ್ಕೊಂಡ್ ಹೋಗೋದೇ ಸುಖ ಆದ್ರೆ ಒಬ್ರಿಗೆ ಆಟೋ ಬೇಕೇಬೇಕು. ಒಬ್ರಿಗೆ ಟ್ರೈನಲ್ಲಿ ಪ್ರಯಾಣ ಅರಾಮ್ ಅನಿಸಿದ್ರೆ ಇನ್ಯಾರಿಗೋ ಫ್ಲೈಟೇ ಬೇಕು. ಒಬ್ರಿಗೆ ಅಕ್ಕಿ ಅಡುಗೆ ಕಂಫರ್ಟಬಲ್ ಆದ್ರೆ ಒಬ್ರಿಗೆ ಗೋಧಿದು. ಹುಡುಕ್ತಾ ಹೋದ್ರೆ ಅವರವರ ಕಂಫರ್ಟ್‌ನ ಪುಷ್ಟೀಕರಿಸೋ ಲಾಜಿಕ್ ಕೂಡ ಸಿಗ್ತವೆ. ಅಕ್ಕಿ ಒಳ್ಳೇದು ಅನ್ನೋ ತೀರ್ಮಾನವನ್ನ ಹಿಡ್ಕೊಂಡು ಲಾಜಿಕ್ ಹುಡುಕಿದ್ರೆ ಅದನ್ನ ಸಾಬೀತುಪಡಿಸೋ ಪುರಾವೆಗಳೇ ಸಿಗ್ತವೆ. ಕೆಟ್ಟದ್ದು ಅಂತ ತೀರ್ಮಾನ ಮಾಡ್ಕೊಂಡು ಹುಡುಕ್ತಾ ಹೋದ್ರೆ ಅಂಥವೇ ಸಿಗ್ತವೆ.

ಕೃಪೆ :ಅಂತರ್ಜಾಲ

Sunday, February 1, 2026

 ಕಥೆ-1023

ಕನಸಿನಿಂದ ಕಟ್ಟಡವರೆಗೆ


C. J. Roy ಕಾನ್ಫಿಡೆಂಟ್ ಗ್ರೂಪಿನ ನಾಯಕ ಬಹಳಷ್ಟು ಸಾಧಕರಿಗೆ ಅವರೊಂದು ಸ್ಪೂರ್ತಿ.. ಅವರ ಸಾವು ಎಲ್ಲರಿಗೂ ನೋವು ತರುವಂತದ್ದು ...


 ಸಣ್ಣ ಊರಲ್ಲಿ ಹುಟ್ಟಿದ್ದ

ರಾಯ್ ದೊಡ್ಡ ಮನೆಯಲ್ಲಿ ವಾಸವಾಗಿರಲಿಲ್ಲ.

ಅವನು ಆಟ ಆಡುವ ಸಂದರ್ಭದಲ್ಲಿ, ಆಟಿಕೆಗಳಿಗಿಂತ

ಕನಸುಗಳೇ ಹೆಚ್ಚಾಗಿದ್ದವು. ಅವನು ಆಗಾಗ್ಗೆ ಆಕಾಶದ ಕಡೆ ನೋಡುತ್ತಾ ಹೇಳುತ್ತಿದ್ದ,

“ನಾನು ದೊಡ್ಡವನಾದಾಗ ಜನರಿಗೆ ಉಪಯೋಗವಾಗುವ ಕೆಲಸ ಮಾಡಬೇಕು.” ಎಂದು


ಬಾಲ್ಯದಲ್ಲೇ ಕಲಿತ ಪಾಠ ಒಂದೇ: “ಜೀವನ ಸುಲಭವಲ್ಲ, ಆದರೆ ಪ್ರಯತ್ನ ಮಾಡಿದರೆ ಅಸಾಧ್ಯವಲ್ಲ.”

ಆದರೆ “ಪ್ರಯತ್ನಿಸದೆ ಹೇಗೆ ಗೊತ್ತಾಗುತ್ತದೆ?”


ರಾಯ್ ಶಾಲೆಗೆ ತುಂಬಾ ಇಷ್ಟಪಟ್ಟು ಹೋಗುತ್ತಿದ್ದ.

ಅವನಿಗೆ ಅಂಕಗಳ ಆಸಕ್ತಿಗಿಂತ

ಕಲಿಯುವ ಆಸಕ್ತಿ ಹೆಚ್ಚಾಗಿತ್ತು..


ಶಿಕ್ಷಕರ ಒಂದು ಮಾತು ಅವನ ಮನಸ್ಸಿನಲ್ಲಿ ಉಳಿದುಕೊಂಡಿತ್ತು..

ಅದೇನೆಂದರೆ, ಶ್ರಮವಿಲ್ಲದೆ ಯಶಸ್ಸು ಇಲ್ಲ...

ಶಾಲೆ ಮುಗಿದ ನಂತರ ಜೀವನ ಸುಲಭವಿರಲಿಲ್ಲ.. ಹಣ ಇರಲಿಲ್ಲ…ಕೆಲಸ ಸಿಗಲಿಲ್ಲ…


ಆದರೂ ರಾಯ್ ಹೇಳುತ್ತಿದ್ದ

“ನಾನು ಪ್ರಯತ್ನ ಬಿಡುವುದಿಲ್ಲ.”


 ಒಂದು ಸಣ್ಣ ಮನೆ ಕಟ್ಟುವ ಕೆಲಸ ಆರಂಭಿಸಿದ.

ಜನರು “ಇದರಿಂದ ಏನು ಆಗುತ್ತದೆ?” ಎಂದರು.


ಆದರೆ ರಾಯ್ ಮನಸ್ಸಿನಲ್ಲಿ ಹೇಳಿಕೊಂಡನು,

“ಇಂದು ಸಣ್ಣದು, ನಾಳೆ ದೊಡ್ಡದು.

ಒಂದು ಕೆಲಸ ಮುಗಿದಾಗ ಇನ್ನೊಂದು ಕೆಲಸ ಸಿಕ್ಕಿತು.


ಸಣ್ಣ ಕೆಲಸಗಳು ದೊಡ್ಡ ಕೆಲಸಗಳಾದವು.

ರಾಯ್ ಕಟ್ಟಿದ ಮನೆಗಳಲ್ಲಿ ಜನರು ಸಂತೋಷದಿಂದ ವಾಸಮಾಡಿದರು.


ಅವನು ತನ್ನ ಸಂಸ್ಥೆಗೆ ಒಂದು ಹೆಸರು ಇಟ್ಟ

“ಕಾನ್ಫಿಡೆಂಟ್ ಗ್ರೂಪ್"

 

ರಾಯ್ ಗೆ ತನ್ನ ಮೇಲೆ ನಂಬಿಕೆ ಇತ್ತು ಅಲ್ಲದೆ ತನ್ನ ಶ್ರಮದ ಮೇಲೆ ನಂಬಿಕೆ ಇತ್ತು.. ಇದು 

ಇಂದು ರಾಯ್ ದೊಡ್ಡ ಸಂಸ್ಥೆಯ ನಾಯಕ.

ಅವನ ಕಟ್ಟಿದ ಮನೆಗಳು ಸಾವಿರಾರು.

ಅವನ ಕೆಲಸದಿಂದ ಸಾವಿರಾರು ಜನರಿಗೆ ಉದ್ಯೋಗ.


ಅವರು ಮಕ್ಕಳಿಗೆ ಹೇಳೋರು...

“ನಾನು ನಿಮ್ಮಂತೆಯೇ ಒಮ್ಮೆ ಮಗು. ನನ್ನನ್ನು ದೊಡ್ಡವನಾಗಿಸಿದ್ದು ನನ್ನ ಕನಸು ಶ್ರಮ & ಆತ್ಮವಿಶ್ವಾಸ..


ಇವು ನಿಮ್ಮಲ್ಲೂ ಇವೆ.

ಅವುಗಳನ್ನು ನಂಬಿ.”

 ಸಣ್ಣ ಆರಂಭವೇ ದೊಡ್ಡ ಯಶಸ್ಸಿನ ಬೀಜ

 ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ

 ಕನಸು ಕಾಣುವವರಿಗೆ ಭವಿಷ್ಯ ಬೆಳಗುತ್ತದೆ.. ಸಾಧನೆ ಮಾಡುವಾಗ ಕಷ್ಟಗಳು ಬಂದರೂ ಧೈರ್ಯ ಕಳೆದುಕೊಳ್ಳಬಾರದು..

ನಿರಂತರ ಕಲಿಕೆ ಬಹಳ ಮುಖ್ಯ

 ಪ್ರಾಮಾಣಿಕತೆ ಮತ್ತು ಶ್ರಮ ಎಂದಿಗೂ ವಿಫಲವಾಗುವುದಿಲ್ಲ..


ದೊಡ್ಡ ಸಾಧಕರಾಗಲು ಬೇಕಾದದ್ದು...

ಕನಸು, ಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ...

ಕೃಪೆ-ನೆಟ್

Saturday, January 31, 2026

 ಕಠೆ-1022

ಚಿತ್ತವೃತ್ತಿ ನಿರೋಧರೂಪಯೋಗ.


ಒಂದು ಇರುವೆ ಬೇವಿನ ಮರದಲ್ಲಿ ವಾಸವಾಗಿತ್ತು. ಒಂದು ದಿನ ಅಲ್ಲಿಗೆ ಸಕ್ಕರೆ ಬೆಟ್ಟದ ಇರುವೆ ಬಂದಿತು. ಇದನ್ನು ತನ್ನ ಸಕ್ಕರೆ ಬೆಟ್ಟಕ್ಕೆ ಕರೆದೊಯ್ದಿತು. ಆದರೆ ಅಲ್ಲಿಯೂ ಬೇವಿನ ಮರದ ಇರುವೆಗೆ ಎಲ್ಲವೂ ಕಹಿ ಕಹಿಯಾಗಿತ್ತು. ಏಕೆಂದರೆ ದಾರಿ ಬುತ್ತಿ ಇರಲೆಂದು ಅದು ತನ್ನ ಬಾಯಿಯಲ್ಲಿ ಒಂದು ಬೇವಿನ ಕಡ್ಡಿ ಹಿಡಿದಿತ್ತು. ಆ ಬೇವಿನಕಡ್ಡಿ ತೆಗೆದೊಗೆದಾಗ ಬೇವಿನ ಮರದ ಇರುವೆಗೆ ಎಲ್ಲೆಲ್ಲೂ ಸವಿ ಸವಿ, ಸ್ವರ್ಗಸ್ವರ್ಗ !! ನಾವಾದರೂ ನಮ್ಮಲ್ಲಿರುವ ಭೂತಕಾಲದ ಎಲ್ಲ ಕಹಿ ವೃತ್ತಿಗಳನ್ನು ನಿರೋಧಿಸಿದಾಗ

ನಮಗೂ ಸರ್ವತ್ರ ಸವಿ-ಸ್ವರ್ಗ!! ಇದುವೇ ಚಿತ್ತವೃತ್ತಿ ನಿರೋಧರೂಪಯೋಗ.


 -ಶ್ರೀ ಸಿದ್ಧೇಶ್ವರ ಸ್ವಾಮೀಜಿ

Friday, January 30, 2026

 ಕಥೆ-1021

ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....


ನಿಜವಾಗಿ ಹೇಳಬೇಕೆಂದರೆ ನಾವು ಹೊರುವ ಅತಿ ಭಾರವಾದ ಹೊರೆಯೇ ನಕಾರಾತ್ಮಕ ಚಿಂತನೆ. ಸಾಧ್ಯವಿಲ್ಲ, ಕಷ್ಟ, ನನಗೆಲ್ಲಿ ಆಗುತ್ತೆ.. ಈ ಪದಗಳು ಏಕಾಏಕಿ ನಮ್ಮಸುಪ್ತಮನಸ್ಸಿನೊಳಗಿಳಿಯುವ ವಿಷ. ಕುಳಿತವನು ಏಳಲಾಗುವುದೇ ಇಲ್ಲ ಎಂದು ಕುಳಿತಲ್ಲೇ ಕೂತು 'ನಕಾರಾತ್ಮಕತೆಯನ್ನು ಭಜಿಸಿದರೆ ಕೊಳೆತು ಹೋಗುತ್ತಾನೆಯೇ ಹೊರತು, ನಿಂತು ನಡೆಯಲಾರ. 

     ಒಮ್ಮೆ ನಕಾರಾತ್ಮಕದ ಕೆಸರು ನಮ್ಮೊಳಗೆ ತುಂಬಿಕೊಂಡಿತೆಂದರೆ ನಮ್ಮ ಶಕ್ತಿ, ಉಲ್ಲಾಸವನ್ನೆಲ್ಲಾ ಗೊಬ್ಬರ ಮಾಡಿಬಿಡುತ್ತದೆ. ಜೊತೆಗೆ ಇದರ ಹೊರೆ ಅದೆಷ್ಟಿರುತ್ತದೆಂದರೆ, ಯಾವುದೇ ಕೆಲಸದ ಮುನ್ನ ನಮ್ಮನ್ನು ಹಗ್ಗ ಹಾಕಿ ಕಟ್ಟುತ್ತದೆ. ನಾಲಿಗೆಯಲ್ಲಿ ಆಗುವುದಿಲ್ಲವೆಂದು ಹೇಳು ಎಂದು ಹಿಂಸಿಸುತ್ತದೆ. ಕಣ್ಣಿನಲ್ಲಿ ತುಂಬಿಕೊಂಡ ಕನಸುಗಳಿಗೆ ಮಸಿ ಬಳಿಯುತ್ತದೆ. ಒಟ್ಟಾರೆ ಮುಂದಡಿ ಇಡಲು ನಾನಾ ಭಯಗಳನ್ನು ತುಂಬಿ ಆತ್ಮವಿಶ್ವಾಸದ ಟ್ಯಾಂಕನ್ನು ಖಾಲಿ ಮಾಡಿಬಿಡುತ್ತದೆ. ನನಗೆ ಸಾಧ್ಯ, ಮುಂದೇನಾಗುವುದೋ ಆಗಲಿ ಎಂದು ಆ ಹೊರೆಯನ್ನು ದೂಡಿ ಮುಂದಡಿ ಇಟ್ಟಾಗ ಬಾಗಿಲುಗಳು ತೆರೆಯುತ್ತವೆ, ಅವಕಾಶಗಳು ಕೈಬೀಸುತ್ತವೆ. ತುಟಿಯಂಚಿನಲ್ಲಿ ನಗೆಯ ಬುಗ್ಗೆ ಪುಟಿದೇಳುತ್ತದೆ. ಮತ್ತಿನ್ಯಾಕೆ ಈ ಹೊರೆ .... ನಮ್ಮ ಇಂಧನವನ್ನು ಸಕಾರಾತ್ಮಕವಾಗಿ ಬಳಿಸಿ. 


ಮುಗುಳ್ನಗೆಯೇ ಸಕಾರಾತ್ಮಕತೆಯ ಕುರುಹು....

-ವಸು ವತ್ಸಲೆ

Thursday, January 29, 2026

 ಕಥೆ-1020

ಉಪ್ಪಿನ ಅರಿವು


ಒಂದಾನೊಂದು ಕಾಲದಲ್ಲಿ ಮಧುರಾಪುರ ಎಂಬ ರಾಜನಿಗೆ ಮೂವರು ಹೆಣ್ಣು ಮಕ್ಕಳು ಇದ್ದರು. ಒಂದು ದಿನ ರಾಣಿ ರಾಜನಿಗೆ ಕೇಳುತ್ತಾಳೆ. ಮುಂದೆ ಈ ಸಿಂಹಾಸನ ಮೆಟ್ಟಿಲೇರುವರು ಯಾರು ಎಂದು ಕೇಳುತ್ತಾಳೆ. ಆಗ ರಾಜ ಹೇಳುತ್ತಾನೆ. ಮೂವರು ಮಕ್ಕಳನ್ನು ಕರೆಯುತ್ತಾನೆ. ಮೊದಲನೆ ಮಗಳು ಬರುತ್ತಾ ಏನು ಅಪ್ಪಾಜಿ ಎಂದು ಕೇಳುತ್ತಾಳೆ ನಾನು ನಿನಗೆ ಎಷ್ಟು ಇಷ್ಟ ಎಂದು ಕೇಳುತ್ತಾನೆ. ಆಗ ಭಾನುಮತಿ ಜೇನುತಪ್ಪ ಎಷ್ಟು ಇಷ್ಟವೋ ನೀವು ಅಷ್ಟೇ ಇಷ್ಟ ಎಂದು ಹೇಳುತ್ತಾಳೆ. ಗೋಮತಿಯನ್ನು ಕರೆಯುತ್ತಾನೆ. ಆಗ ಗೋಮತಿ ಹೇಳುತ್ತಾಳೆ ಸಕ್ಕರೆ ನನಗೆ ಎಷ್ಟು ಇಷ್ಟವೋ ನೀವು ಕೂಡಾ ನನಗೆ ಅಪ್ಪ ಇಷ್ಟ ಎಂದು ಹೇಳುತ್ತಾಳೆ. ಇವರಿಬ್ಬರ ಮಾತು ಕೇಳಿ ರಾಜನಿಗೆ ಸಂತೋಷವಾಗುತ್ತದೆ ಆಗ ರಾಜ ಕೊನೆಯ ಮಗಳಾದ ಸುಮತಿಯನು ಕರೆಯುತ್ತಾನೆ. ಆಗ ಸುಮತಿ ಹೇಳುತ್ತಾಳೆ ಅಪ್ಪಾಜಿ ನಿಜ ಹೇಳಬೇಕೆಂದರೆ ಉಪ್ಪಿನ ರುಚಿ ಎಷ್ಟು ಇದೆಯೋ ಅಷ್ಟೇ ನೀವು ನನಗೆ ಇಷ್ಟ ಎಂದು ಹೇಳುತ್ತಾಳೆ ಅವಳ ಮಾತು ಕೇಳಿ ರಾಜನಿಗೆ ಕೋಪ ಬಂದಿತು. ಕೆಲವು ವರ್ಷಗಳ ಕಳೆದವು ರಾಜನು ಬಾನುಮತಿಗೆ ಮದುವೆ ಮಾಡಿದನು. ಮಗಳಿಗೆ ಆನೆ ಹೊರವಷ್ಟು ಉಡುಗೊರೆ ಕಳುಹಿಸಿದನು ಅದೆ ವೈಭವದಲ್ಲಿ ಗೋಮತಿಗೂ ಸಹ ಮದುವೆ ಮಾಡಿದನು ಆಕೆಗೆ ಕುದುರೆ ಹೊರುವಷ್ಟು ಉಡುಗೊರೆ ಕಳುಹಿಸಿದನು. ಆದರೆ ಸುಮತಿಗೆ ಒಬ್ಬ ಕುಂಬಾರನ ಜೊತೆಗೆ ಮದುವೆ ಮಾಡಿದನು ಮಗಳಿಗೆ ಕಪ್ಪೆ ಹೊರುವಷ್ಟು ಉಡುಗೊರೆ ಕೊಟ್ಟನು. ಕೆಲವು ವರ್ಷಗಳು ಉರುಳಿದವು ರಾಜನು ಬಾನುಮತಿ ಮನೆಗೆ ಹೋದನು. ಆದರೆ ಬಾನುಮತಿ ತಂದೆಯ ಸೇವೆ ಮಾಡದೆ ಸಖಿಯರ ಜೊತೆ ಕಾಲ ಕಳೆದಳು ಇದರಿಂದ ರಾಜನಿಗೆ ತುಂಬಾ ಬೇಸರವಾಯಿತು. ಗೋಮತಿಯ ಮನೆಗೆ ಹೋದನು. ಅವಳು ಸಹ ಹಾಗೆ ಮಾಡಿದಳು. ಕೊನೆಗೆ ರಾಜ ಸುಮತಿ ಮನೆಗೆ ಹೋದನು. ಸುಮತಿಯು ಅಪ್ಪನನ್ನು ಕಂಡು ಅಡುಗೆ ಮನೆಯಿಂದ ಓಡಿ ಬಂದಳು ರಾಜನಿಗೆ ಖುಷಿಯಾಯಿತು. ಅವಳು ತಂದೆ ಸೇವೆ ಮಾಡಿದಳು, ರಾಜನು ಊಟ ಮಾಡುವಾಗ ಇದೇನಿದು ಸಾರು ಸಪ್ಪಗಾಗಿದೆ ಎಂದು ರಾಜ ಕೇಳುತ್ತಾನೆ. ಆಗ ಸುಮತಿ ಹೇಳುತ್ತಾಳೆ. ಅಪ್ಪ ಅವತ್ತು ನೀವು ನಾನು ಉಪ್ಪಿನ ರುಚಿ ಹೇಳಿದಾಗ ನೀವು ಕೋಪಗೊಂಡು ಬಿಟ್ಟಿರಿ ಅದಕ್ಕೋಸ್ಕರ ನಾನು ಇವತ್ತು ಉಪ್ಪು ಹಾಕದೆ ಅಡುಗೆ ಮಾಡಿದ್ದೇನೆ ಎಂದು ಹೇಳುತ್ತಾಳೆ. ಆಗ ರಾಜನಿಗೆ ಉಪ್ಪಿನ ಅರಿವಾಗುತ್ತದೆ. ಅದಕ್ಕೆ ರಾಜನು ಈಕೆಯ ಜಾಣತನವನ್ನು ಮೆಚ್ಚಿ ನೀನೆ ಮಧುರಾಪುರ ಸಿಂಹಾಸನ ಏರಬೇಕು ಎಂದು ರಾಜನು ಸುಮತಿಯನ್ನು ಕರೆದುಕೊಂಡು ಹೋದನು...ಅವಳಿಗೆ ಪಟ್ಟಾಭಿಷೇಕ ಮಾಡಿದ...

Wednesday, January 28, 2026

 ಕಥೆ-1019

ನೀರಿನಿಂದ ಬೆಂಕಿ ಹುಟ್ಟಿದ ಚರಿತ್ರೆಯೇ ಇಲ್ಲ.. ಆದರೆ ಆ ತಾಯಿಯ ಕಣ್ಣೀರಿಂದ ಬೆಂಕಿಯೂ ಹುಟ್ಟಿತು, ಯುವರಾಜನೆಂಬ ಚರಿತ್ರೆಯೂ ಸೃಷ್ಠಿಯಾಯಿತು..!

 KGF ಸಿನಿಮಾದಲ್ಲಿ ತಾಯಿಯ ಬಗ್ಗೆ ಕೇಳುವ ಆ ಡೈಲಾಗ್’ಗಳು. ಇವತ್ತಿನ ಕಥಾನಾಯಕಿಯ ಬಗ್ಗೆ ಬರೆಯಲು ಕುಳಿತಾಗ ಮೊದಲು ನೆನಪಾಗಿದ್ದು ಅದೇ ಸಾಲುಗಳು..

ನಿಜ.. ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ.. ಭಾರತದ ವಿಶ್ವಕಪ್ ಹೀರೋ ಯುವರಾಜನ ತಾಯಿ..ಶಬ್ನಮ್ ಸಿಂಗ್.. 

ಸಾಮಾನ್ಯ ರೈತ ಕುಟುಂಬದಿಂದ ಬಂದಿದ್ದ ಕ್ರಿಕೆಟಿಗ ಯೋಗರಾಜ್ ಸಿಂಗ್.. ಶಬ್ನಮ್ ಅನುಕೂಲಸ್ಥ ಮನೆಯ ಹೆಣ್ಣು ಮಗಳು.. ಆ ಕಾಲಕ್ಕೆ ಚಂಡೀಗಢದ ಕ್ರಿಕೆಟಿಗನಾಗಿದ್ದ ಯೋಗರಾಜ್ ಸಿಂಗ್’ ಮದುವೆಯಾಗಿದ್ದವರು ಶಬ್ನಮ್ ಸಿಂಗ್.

ಯೋಗರಾಜ್ ಸಿಂಗ್ ಜಮದಗ್ನಿಯಂಥಾ ಗಂಡ.. ಮಹಾ ಮುಂಗೋಪಿ.. ಅಷ್ಟೇ ಕಟ್ಟುನಿಟ್ಟಿನ ಮನುಷ್ಯ.. ಒಂದು ರೀತಿಯಲ್ಲಿ ಬೆಂಕಿ ನವಾಬ.. ಶಬ್ನಮ್ ಹಕ್ಕಿಯಂತೆ ಹಾರಾಡುತ್ತಿರಬೇಕೆಂಬ ಸ್ವತಂತ್ರ ಮನಸ್ಥಿತಿಯ ಹೆಣ್ಣು ಮಗಳು. ಇಬ್ಬರ ಯೋಚನೆಗಳು ಬೇರೆ, ಆದ್ಯತೆಗಳೂ ಬೇರೆ ಬೇರೆ.. ಮದುವೆಯಾದರೂ ಮನಸ್ಸುಗಳು ಒಂದಾಗಲೇ ಇಲ್ಲ. ಈ ಮಧ್ಯೆ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಅವರಲ್ಲಿ ಒಬ್ಬ ಯುವರಾಜ್ ಸಿಂಗ್. 


ಮಗನನ್ನು ಕ್ರಿಕೆಟಿಗನಾಗಿಸಬೇಕೆಂಬ ಹಠ ತಂದೆಗೆ.. ಆಗಿನ್ನೂ ಯುವಿ 10-11ರ ಪೋರ.. ಕ್ರಿಕೆಟ್ ಆಡಲು ಆಸಕ್ತಿಯೇ ಇರಲಿಲ್ಲ ಹುಡುಗನಿಗೆ. ಟೆನಿಸ್, ಫುಟ್ಬಾಲ್, ಸ್ಕೇಟಿಂಗ್ ಮೇಲೆ ಪ್ರೀತಿ.. ಒಂದು ದಿನ 

ರೋಲರ್ ಸ್ಕೇಟಿಂಗ್ ಅಂಡರ್-14 ಚಾಂಪಿಯನ್’ಷಿಪ್’ನಲ್ಲಿ ಗೆದ್ದ ಚಿನ್ನದ ಪದಕವನ್ನು ಕೊರಳಲ್ಲಿ ಹಾಕಿಕೊಂಡು, ಕೈಯಲ್ಲಿ ಸರ್ಟಿಫಿಕೇಟ್ ಹಿಡಿದು ಅಪ್ಪನ ಮುಂದೆ ಹೋಗಿ ನಿಂತಿದ್ದ ಯುವರಾಜ.


 ‘‘ಅಪ್ಪಾ, ನಾನು ಇವತ್ತು ಚಿನ್ನದ ಪದಕ ಗೆದ್ದಿದ್ದೇನೆ’’ ಎಂದಿದ್ದ. ತಂದೆ ಏನೂ ಮಾತನಾಡಲಿಲ್ಲ.. ಮಗನ ಕೊರಳಲ್ಲಿದ್ದ ಪದಕ ಮತ್ತು ಕೈಯಲ್ಲಿದ್ದ ಸರ್ಟಿಫಿಕೇಟನ್ನು ಕಿತ್ತುಕೊಂಡು ಎಸೆದೇ ಬಿಟ್ಟರು. 


ಮಗನಿಗೆ ಹೇಳಿದ್ದು ಒಂದೇ ಮಾತು.. ‘‘ನಿನ್ನ ನಾಟಕ ಅತಿಯಾಯಿತು.. ಇವತ್ತಿನಿಂದ ನೀನು ಕ್ರಿಕೆಟ್ ಆಡುತ್ತೀಯಾ.. ಕ್ರಿಕೆಟ್ ಮಾತ್ರ..’’ 


ಅದು ಜನವರಿ ತಿಂಗಳು.. ಕೊರೆಯುವ ಚಳಿಯಲ್ಲಿ ಚಂಡೀಗಢ ಹೇಗಿರುತ್ತದೆ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಒಂದು ದಿನ ಬೆಳಗ್ಗೆ ಯುವಿ ಮಲಗಿದ್ದ, ಬೆಳಗ್ಗಿನ ಚಳಿಯಲ್ಲಿ ಗಾಢ ನಿದ್ದೆಯಲ್ಲಿದ್ದ.. ತಂದೆ ಬಂದರು.. ‘’ಕ್ರಿಕೆಟ್ ಅಭ್ಯಾಸಕ್ಕೆ ಹೋಗಬೇಕು ಎದ್ದೇಳು’’ ಎಂದರು.. 


ಚಳಿಯಲ್ಲಿ ಮುದುಡಿ ಮಲಗಿದ್ದ ಪುಟ್ಟ ಮಗ ಏಳಲೇ ಇಲ್ಲ. 

ನಾಲ್ಕಾರು ಬಾರಿ ಹೇಳಿದರು.. ಉಹೂಂ.. ಮಗ ಅಲುಗಾಡಲಿಲ್ಲ.. ಅಲ್ಲಿಂದ ತೆರಳಿದ ಅಪ್ಪ ಒಂದು ಬಕೆಟ್ ನೀರಿನೊಂದಿಗೆ ಬಂದು ಮಗನ ಮೇಲೆ ಸುರಿದರು. 11 ವರ್ಷದ ಹುಡುಗ..! ಹೇಗಾಗಿರಬೇಡ… ತಾಯಿಯ ಕರುಳು ಚುರುಕ್ ಎಂದಿತ್ತು. ಗಂಡನೊಂದಿಗೆ ದೊಡ್ಡ ಜಗಳವನ್ನೇ ಆಡಿ ಬಿಟ್ಟರು ಶಬ್ನಮ್ ಸಿಂಗ್.. 


ಚಳಿಯಲ್ಲಿ ನಡುಗುತ್ತಾ ಕೂತಿದ್ದ ಮಗನನ್ನು ನೋಡಿದ ತಂದೆ, ‘ಎದ್ದು ಓಡು’ ಎಂದರು.. ಓಡುತ್ತಿದ್ದ ಮಗನನ್ನು ಬೈಕ್’ನಲ್ಲಿ ಹಿಂಬಾಲಿಸಿದರು ತಂದೆ.. ಆ ದಿನ ಓಡಲು ಶುರು ಮಾಡಿದ ಯುವಿ ನಿಲ್ಲಲೇ ಇಲ್ಲ..’’ ಯೋಗರಾಜ್ ಸಿಂಗ್ ಅವರ ತರಬೇತಿ ಅದೆಷ್ಟು ಕಠೋರವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.. 


ಚಿಕ್ಕ ವಯಸ್ಸಿನಿಂದಲೂ ಯುವರಾಜನದ್ದು ಹೋರಾಟದ ಬದುಕು. ತಂದೆ-ತಾಯಿ ಮಧ್ಯೆ ಪ್ರತೀ ದಿನ ಜಗಳ.. ಇನ್ನು ಈ ಮನುಷ್ಯನ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದ ಶಬ್ನಮ್ ವಿಚ್ಚೇದನ ಪಡೆಯುತ್ತಾರೆ. 


ಗಂಡನಿಂದ ದೂರವಾದರೂ ಅಪ್ಪನಿಂದ ಮಗನನ್ನು ದೂರ ಮಾಡಲಿಲ್ಲ ಆ ತಾಯಿ.. ತನ್ನ ಮಗ ಒಬ್ಬ ಒಳ್ಳೆಯ ಕ್ರಿಕೆಟಿಗನಾಗಬೇಕೆಂದರೆ ಅವನಿಗೆ ಅಪ್ಪನ ಆಸರೆ ಬೇಕೇ ಬೇಕೆಂದು ಅವರಿಗೆ ಗೊತ್ತಿತ್ತು. ಯೋಗರಾಜ್ ಸಿಂಗ್ ಹಿಡಿದ ಹಠವನ್ನು ಸಾಧಿಸಿ ಬಿಡುವ ಹಠಗಾರ..


ಮಗನ ಪಾಲಿಗಂತೂ ಹಿಟ್ಲರ್ ತಂದೆ.. ಅಂಥಾ ಅಪ್ಪನ ಗರಡಿಯಲ್ಲಿ ಬೆಳೆದ ಯುವಿ ಗಟ್ಟಿಗನಾಗಿ ಬಿಟ್ಟ.. 


ಯುವರಾಜನಿಗೆ ಕ್ರಿಕೆಟ್ ಪಾಠ ಹೇಳಿ ಕೊಟ್ಟವರು ತಂದೆ ಯೋಗರಾಜ್ ಸಿಂಗ್.. ಬದುಕಿನ ಪಾಠ ಕಲಿಸಿದವರು ತಾಯಿ ಶಬ್ನಮ್ ಸಿಂಗ್.. 


ಯೋಗರಾಜ್ ಸಿಂಗ್ ಜೊತೆಗಿನ ದಾಂಪತ್ಯ ಬದುಕಿಗೆ ಎಳ್ಳು ನೀರು ಬಿಟ್ಟ ಶಬ್ನಮ್ ಸಿಂಗ್, ಮಗನ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಾರೆ. ಹಗಲೆಲ್ಲಾ ಅಪ್ಪನ ಗರಡಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ ಯುವರಾಜನಿಗೆ ರಾತ್ರಿಯಾದರೆ ಅಮ್ಮನ ಮಡಿಲೇ ಆಸರೆ… ಅದೆಂಥಾ ಕಷ್ಟ ಬಂದರೂ ಎದೆಗುಂದದೆ ಎದುರಿಸಿ ನಿಲ್ಲಬಲ್ಲ ಮಗನಾಗಿ ಯುವಿಯನ್ನು ಬೆಳೆಸಿದರು ತಾಯಿ ಶಬ್ನಮ್ ಸಿಂಗ್.. 


ಅಪ್ಪ ಒಂದು ಕಡೆ.. ಅಮ್ಮ ಒಂದು ಕಡೆ.. ಇಬ್ಬರ ಮಧ್ಯೆ ಹೊತ್ತಿಕೊಂಡ ಜ್ವಾಲೆ.. ಆ ಜ್ವಾಲೆಯಿಂದ ಭುಗಿಲೆದ್ದು ನಿಂತ ಜ್ವಾಲಾಮುಖಿ ಯುವರಾಜ್ ಸಿಂಗ್.. 


ಸಾಮಾನ್ಯ ಪೆಟ್ಟುಗಳಿಗೆಲ್ಲಾ ಸೋಲುವವನಲ್ಲ ಅವನು.. ಕುಲುಮೆಯಲ್ಲಿ ಬೆಂದು ಬೆಂದು ಗಟ್ಟಿಯಾಗಿದ್ದವನು ದೇಶಕ್ಕೆ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟ.. ಮೊಟ್ಟ ಮೊದಲ ಟಿ20 ವಿಶ್ವಕಪ್ ಭಾರತದ ಮುಡಿಗೇರುವಂತೆ ಮಾಡಿದ. ಮುಂದಿನದ್ದು 2011ರ ವಿಶ್ವಕಪ್. ಅದಕ್ಕೂ ಮೊದಲೇ ಅವನನ್ನು ಕಾಡಿತ್ತು ಕ್ಯಾನ್ಸರ್.. 


2010.. ರಾತ್ರಿ ಮಲಗಿದ್ದವನು ಮಧ್ಯರಾತ್ರಿ ಎದ್ದು ಕುಳಿತಿದ್ದ.. ಹೊಟ್ಟೆಯಲ್ಲಿ ಅಸಾಧ್ಯ ನೋವು.. ಕೆಮ್ಮಿದಾಗ ರಕ್ತ.. ಏನೋ ಎಡವಟ್ಟಾಗಿದೆ ಎಂದು ಗೊತ್ತಾಗಿತ್ತು. ಆದರೆ ಅದು ಕ್ಯಾನ್ಸರ್ ಎಂದು ಅವನಿಗೂ ಗೊತ್ತಿರಲಿಲ್ಲ.. 

ನೋವಿನಲ್ಲೇ 2011ರ ವಿಶ್ವಕಪ್ ಆಡಿದ.. ವಿಶ್ವಕಪ್ ಗೆಲ್ಲಿಸಿದ.. ವಿಶ್ವಕಪ್’ನಲ್ಲಿ 4 ಬಾರಿ ಮ್ಯಾನ್ ಆಫ್ ದಿ ಮ್ಯಾಚ್.. ಸರಣಿಶ್ರೇಷ್ಠ.. ವಿಶ್ವಕಪ್ ಇತಿಹಾಸದಲ್ಲೇ ದಾಖಲಾದ ಅತ್ಯಂತ ಶ್ರೇಷ್ಠ ಆಲ್ರೌಂಡ್ ಆಟವದು. 

ಏನಂದುಕೊಂಡಿದ್ದನೋ ಅದನ್ನು ಸಾಧಿಸಿದ್ದ ಯುವಿ.. ಹೊರಗೆ ಸಂಭ್ರಮ.. ಒಳಗೆ ಅಸಾಧ್ಯ ನೋವು.. 


ತಾಯಿಯೊಂದಿಗೆ ವೈದ್ಯರ ಬಳಿ ಹೋಗಿ ಸ್ಕ್ಯಾನ್ ಮಾಡಿಸಿದಾಗ ಶಬ್ನಮ್ ಸಿಂಗ್ ಒಂದು ಕ್ಷಣ ಗರ ಬಡಿದವರಂತೆ ನಿಂತು ಬಿಟ್ಟರಂತೆ.. ದೇಹದೊಳಗೆ ಗೆಡ್ಡೆ ಬೆಳೆದಿತ್ತು.. ಯುವರಾಜನನ್ನು ಕ್ಯಾನ್ಸರ್ ಆವರಿಸಿಕೊಂಡಿತ್ತು. 


ಅಲ್ಲಿಂದ ಆರಂಭವಾಗಿದ್ದು ಯುವರಾಜನ ಬದುಕಿನಲ್ಲಿ ಮತ್ತೊಂದು ಹೋರಾಟದ ಅಧ್ಯಾಯ. ಮಗನನ್ನು ಚಿಕಿತ್ಸೆಗೆ ಅಮೆರಿಕಗೆ ಕರೆದೊಯ್ಯುತ್ತಾರೆ ಶಬ್ನಮ್ ಸಿಂಗ್.. ತಾಯಿಯ ಮಡಿಲಲ್ಲಿ ಮತ್ತೊಮ್ಮೆ ಮಗುವಾಗಿ ಬಿಟ್ಟ ಯುವಿ. ಆ ಟ್ರೀಟ್ಮೆಂಟಾ.. ಆ ಕೀಮೋ… ಪ್ರಾಣವನ್ನೇ ತೆಗೆದು ಬಿಡುವಂಥಾ ನೋವು.. ಆ ದಿನಗಳಲ್ಲಿ ಯುವಿ ಜೊತೆಗಿದ್ದದ್ದು ಒಂದೇ ಧೈರ್ಯ. ಆ ಧೈರ್ಯ ತಾಯಿ.. ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡುತ್ತಾರೆ ಶಬ್ನಮ್ ಸಿಂಗ್. 

ದೇಹದೊಳಗೆ ಕ್ಯಾನ್ಸರ್ ಇಂಚಿಂಚೂ ಸಾಯಿಸುತ್ತಿದ್ದಾಗ 

ನೀನು ಮತ್ತೆ ಭಾರತ ಪರ ಆಡುವೆ ಎಂದು ಯುವಿಯನ್ನು ಪ್ರೇರೇಪಿಸಿದವರು ಆ ತಾಯಿ.. 

ಮಗನನ್ನು ಮರಣಶಯ್ಯೆಯಿಂದ ಮರಳಿ ಕರೆ ತಂದವರು ಆ ತಾಯಿ.. 

ಯುವರಾಜನೆಂಬ ಕ್ರಿಕೆಟ್ ಯೋಧನಿಗೆ ಜನ್ಮಕೊಟ್ಟ, ಪುನರ್ಜನ್ಮ ಕೊಟ್ಟ ಆ ಮಹಾತಾಯಿ. 

ಹೊಟ್ಟೆಯಲ್ಲಿ ಸಾಕಷ್ಟು ನೋವಿದ್ದಾಗಲೂ ದೇಶದ ಪರವಾಗಿ ಆಡಿ ಭಾರತಕ್ಕೆ ವಿಶ್ವ ಕಪ್ ತಂದುಕೊಡುವಲ್ಲಿ ಪ್ರಮುಖವಾಗಿ ಪಾತ್ರವಹಿಸಿದರು... ಕ್ರಿಕೆಟ್ ಇತಿಹಾಸ ಸೃಷ್ಟಿಸಿದ..


-ಸುದರ್ಶನ್

Tuesday, January 27, 2026

 ಕಥೆ-1018

ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...


ಒಂದು ಊರಲ್ಲಿ ಮೂವರು ಸ್ನೇಹಿತರಿದ್ದರು. ಒಬ್ಬನ ಹೆಸರು ಜ್ಞಾನ, ಇನ್ನೊಬ್ಬ ಧನ, ಮತ್ತೊಬ್ಬ ವಿಶ್ವಾಸ. ಈ ಮೂವರು ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ, ಒಂದು ಸಾರಿ ಅವರು ಬೇರೆ ಬೇರೆ ಆಗುವ ಸಮಯ ಬಂದಿತು. ಆದರೆ ನಾವು ಮತ್ತೆ ಭೇಟಿಯಾಗುವುದು ಹೇಗೆ ಎಂದು ಚಿಂತಿಸಬೇಕಾದರೆ ಆಗ ಜ್ಞಾನ ಹೇಳಿದ ನಾನು ಮಠ - ಮಂದಿರಗಳಲ್ಲಿ ಹಾಗೂ ಸಾಧು - ಸಂತರು. ಹೆಚ್ಚು ಓದಿದವರ ಜೊತೆ ಇರುತ್ತೇನೆ ಎಂದ. ಆಗ ಧನ ನಾನು ಅಘರ್ಭ ಶ್ರೀಮಂತನ ಹತ್ತಿರ ಇರುತ್ತೇನೆ ಎಂದ. ಇವರ ಮಾತು ಕೇಳಿ ಕಣ್ಣೀರು ಹಾಕುತ್ತಾ ವಿಶ್ವಾಸ ಹೇಳಿದ ನಾನು ಒಂದು ಸಾರಿ ಹೋದರೆ ಮರಳಿ ಬರುವುದಿಲ್ಲ ಎಂದು.  


ಹೌದಲ್ಲವೇ ಜ್ಞಾನವನ್ನು ಪಡೆಯಬಹುದು ಧನವನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡ ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...


-Prakash

Monday, January 26, 2026

 ಕಥೆ-1017

 ಜೀವನದ ವಾಹನ ಗಣರಾಜ್ಯದ ದಿನ

(ಗಣರಾಜ್ಯೋತ್ಸವದ ಶುಭಾಶಯಗಳು)


ಇಂದು ( ಜನವರಿ 26ರಂದು) ಭಾರತೀಯರಾದ ನಮಗೆ, ನಮ್ಮನ್ನು ನಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ... ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನವೊಂದು ಅರ್ಪಿತವಾಯ್ತು. 


ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ 1950, ಜನವರಿ 26ರಂದು ಅಂಗೀಕರಿಸಲ್ಪಟ್ಟಿತ್ತು.


 ಇಂದಿನ ಭಾರತದ ಪ್ರಜೆಗಳಲ್ಲಿ ದೇಶಪ್ರೇಮ ಕುಂದಿದೆ. ಮಹಾತ್ಮರ ಹೋರಾಟದ ಫಲವೇ ಸ್ವಾತಂತ್ರ್ಯ, ಎಲ್ಲರಿಗೂ ತಮ್ಮ ಲಾಭವೇ ಮುಖ್ಯವಾಗಬಾರದು, ದೇಶ ಮುಖ್ಯವಾಗಬೇಕು.


ಅನರ್ಹ ಅಭ್ಯರ್ಥಿಗಳು ಗೆದ್ದು ಅಧಿಕಾರಕ್ಕೆ ದೇಶಕ್ಕೆ ಮಾರಕ. ಹಾಗಾಗಿ ಮತದಾನ ಮಾಡುವ ಸರಿ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಕೈಯಲ್ಲಿದೆ.  


 ಅಂದಿನ ಮಹಾತ್ಮರು ಸಂವಿಧಾನ ಎಂಬ ಪೌಷ್ಠಿಕಾಂಶದಿಂದ ಭಾರತದ ಅಭಿವೃದ್ಧಿ ಎಂಬ ಮಗು ಮುಂದೆ ಏಳಿಗೆಯತ್ತ ಹೆಜ್ಜೆ ಹಾಕುತ್ತೆ ಎಂಬ ಕಲ್ಪನೆಯಲ್ಲಿದ್ದರು. ದೇಶದ ಸಮಗ್ರ ಏಳಿಗೆಯ ಕನಸು ಕಂಡರು. ಪುಟ್ಟ ಮಗುವಿನ ಭವಿಷ್ಯದ ಬಗ್ಗೆ ತಾಯಿ ಕಲ್ಪಿಸಿಕೊಂಡಂತೆ. ಆದರೆ ಅವರ ನಿರೀಕ್ಷೆಯ ಮಟ್ಟದಲ್ಲಿ ಇಂದಿನ ಸಮಾಜ, ದೇಶ ಅಭಿವೃದ್ಧಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ?


ಗಣರಾಜ್ಯ ದಿನ ಎಂದರೆ ಸರಕಾರಿ ರಜೆ. ಅನ್ನುವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅರ್ಥೈಸಿಕೊಂಡಂತಿದೆ. ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯದಿನದ ಆಚರಣೆಗಳನ್ನು ಟೀವಿಯಲ್ಲಿ ನೋಡಿ ಸಂತಸ ಪಟ್ಟು, ಟಿವಿ ಕಾರ್ಯಕ್ರಮ ಮುಗಿದಾಗ ಭವ್ಯ ಭಾರತದ ಪ್ರಜೆಗಳ ಗಣರಾಜ್ಯ ದಿನದ ಆಚರಣೆಯೂ ಮುಗಿದು ಹೋಗುತ್ತದೆ.


ಎಲ್ಲ ಧಾರ್ಮಿಕ ಹಬ್ಬಗಳಂತೆ, ರಾಷ್ಟ್ರೀಯ ಹಬ್ಬಗಳೂ ರಾಷ್ಟ್ರದ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು, ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಪಡೆದುಕೊಂಡ ದೇಶ ನಮ್ಮದು. ನಮ್ಮ ಧ್ಯೇಯ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಅನುರಣಿಸುತ್ತಿರಬೇಕು.


ಸುಸಂಸ್ಕೃತ ಸಮಾಜದ, ಸರ್ವತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಯಶಸ್ವಿ ದೇಶದ ಕನಸು ಕಂಡು, ಆ ದೇಶಕ್ಕಾಗಿ ಬೃಹತ್‌ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಆ ನಾಯಕರ, ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕು. ಆ ನಾಯಕರ ಉದ್ದೇಶವನ್ನು ನೆನಪಿಸಿಕೊಂಡು, ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗುವಂತಾಗಬೇಕೆಂಬ ಉದ್ದೇಶ ಇಂಥ ರಾಷ್ಟ್ರೀಯ ದಿನಗಳ ಆಚರಣೆಯ ಹಿಂದಿದೆ.


ಅಖಂಡ ಭಾರತದ ಕೋಟಿ ಕೋಟಿ ಪ್ರಜೆಗಳಿಗೂ ದೇಶದ ಜವಾಬ್ದಾರಿಯನ್ನು ಅಧಿಕೃತವಾಗಿ ನೀಡಿದ ಶುಭ ದಿನ ಇವತ್ತು. ಪ್ರತಿಯೊಬ್ಬ ಭಾರತೀಯನೂ ದೇಶದ ಅಭಿವೃದ್ಧಿಗೆ ಜವಾಬ್ದಾರನಾಗಿರುತ್ತಾನೆ. ಗಣರಾಜ್ಯದಿನದಂತೆ ಶುಭ ದಿನದಲ್ಲಿ ನಮ್ಮ ಎಲ್ಲ ಜವಾಬ್ಧಾರಿಗಳಿಗೂ ಬದ್ಧರಾಗಿರುತ್ತೇನೆ ಎಂಬ ಪ್ರತಿಜ್ಞೆ ಮಾಡುವುದರ ಮೂಲಕ, ಗಣರಾಜ್ಯದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು. ಆಗಲೇ ಈ ಗಣರಾಜ್ಯದಿನಕ್ಕೆ ನಿಜವಾದ ಅರ್ಥ ಬರುತ್ತದೆ.

ಕೃಪೆ :ನೆಟ್

Sunday, January 25, 2026

 ಕಥೆ-1016

ರಾಷ್ಟ್ರೀಯ ಮತದಾರ ದಿನ.. (ಬುಲೆಟ್‌ಗಿಂತ ಬ್ಯಾಲೆಟ್ ಬಲಿಷ್ಠ)

 ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಮತದಾನವಾಗಿದೆ. ಇಂತಹ ಪವಿತ್ರ ಮತದಾನ ಮಾಡುವ ಅವಕಾಶವನ್ನು ನಮಗೆ ಸಂವಿಧಾನವು ಭಾರತ ಚುನಾವಣಾ ಆಯೋಗದ ಮೂಲಕ ನೀಡಿದೆ.. ಭಾರತೀಯ ಚುನಾವಣಾ ಆಯೋಗದ ಸ್ಥಾಪನೆಯಾದ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುತ್ತಿದೆ..

25ನೇ ಜನವರಿ 1950 ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಚುನಾವಣಾ ಆಯೋಗ, ಮತದಾನದ ಹಕ್ಕನ್ನು ಪ್ರೋತ್ಸಾಹಿಸುತ್ತದೆ.. ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತಿದೆ...

 ಪ್ರತಿಯೊಬ್ಬ 18 ವರ್ಷ ಪೂರ್ಣಗೊಂಡ ಪ್ರಜೆಗೂ ಮತದಾನ ಮೂಲಭೂತ ಹಕ್ಕು. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ.. ಒಮ್ಮೆ ಯೋಚಿಸಿ, ನಾವು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. 

ನನ್ನ ಒಂದು ಮತದಿಂದ ಏನಾಗುತ್ತದೆ, ಎಂಬ ನಿರುತ್ಸಾಹ ಸರಿಯಲ್ಲ... ಒಂದು ಮತಕ್ಕೆ ದೇಶದ ದಿಕ್ಕನ್ನು ಬದಲಾಯಿಸುವ ಶಕ್ತಿ ಇದೆ. ನಮ್ಮ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಯೆಂದರೆ ಅದು ಮತದಾನ ಮಾಡುವುದು...

ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. 

1951-52ರ ಅವಧಿಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 44.87 ರಷ್ಟು ಮತದಾನವಾಗಿದ್ದು, 2019 ರಲ್ಲಿ 17 ನೇ ಲೋಕಸಭೆಗೆ 67.40 ಪ್ರತಿಶತದಷ್ಟು ಮತದಾನದವಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ 65.79 ಪ್ರತಿಶತದಷ್ಟು ಮತದಾನದವಾಗಿದೆ.. ಮತದಾನದ ಪ್ರಮಾಣ ಏರಿಕೆ ಆಗುವುದರ ಬದಲು ಕಡಿಮೆಯಾಗಿರುವುದು ಆತಂಕದ ವಿಷಯ... ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ, ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. 'ನಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. 'ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ,' ಎಂದು ಬರಾಕ್‌ ಒಬಾಮಾ ಹೇಳಿದ್ದಾರೆ.

ಸಮಾಜ ಕೆಟ್ಟಿದೆ ಎಂದು ಹೇಳುತ್ತಾ ನಾವು ಕೆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಜನತಂತ್ರ ಗಟ್ಟಿಗೊಳ್ಳಬೇಕಾದರೆ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಮತದಾನ ಎಂಬುದು ವ್ಯಾಪಾರವಲ್ಲ. ನಾವು ದುಡ್ಡು ಪಡೆದು ಮತ ಹಾಕಿದರೆ ಮತ ಪಡೆದವರು ಅದನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳುತ್ತಾರೆ. ಅವರನ್ನು ಪ್ರಶ್ನಿಸುವ ನೈತಿಕ ಅಧಿಕಾರ ನಮಗಿರುವುದಿಲ್ಲ. ನಮ್ಮನ್ನು ನಾವು ಮಾರಿಕೊಂಡಂತೆ...ಮತ ಮಾರಿಕೊಂಡರೆ ಪ್ರಶ್ನಿಸುವ ಅಧಿಕಾರವನ್ನು ಒತ್ತೆ ಇಟ್ಟಂತೆ

ಆದ್ದರಿಂದ ನಾವು ಮತವನ್ನು ಮಾರಿಕೊಳ್ಳದೆ ನಮ್ಮ ಹಕ್ಕನ್ನು ಚಲಾಯಿಸಲು ಕೆಳಗಿನಂತೆ ಪ್ರತಿಜ್ಞೆ ಮಾಡೋಣ.

ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ

'"ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ" ಎಂದು ಪ್ರತಿಜ್ಞೆ ಮಾಡೋಣ...


ಮತದಾರರ ದಿನಾಚರಣೆಯ ಶುಭಾಶಯಗಳು..

💐💐💐💐💐

-ಶಂಕರಗೌಡ ಬಸಾಪೂರ

Saturday, January 24, 2026

 ಕಥೆ-1015    

ಹೃದಯ ಶ್ರೀಮಂತಿಕೆ ದೊಡ್ಡದು                                                                        


ಒಮ್ಮೆ ಬಿಲ್ ಗೇಟ್ಸ್ ನತ್ರ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ.... ಇದಕ್ಕೆ ಏನಂತೀರಿ ಅಂದಾಗ"


ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ..

ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು....

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್ ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡಾ ಅಂದು ಬಿಟ್ಟೆ..

ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ..

ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ , ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ.... ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು. 

ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ. 

ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. ನಾನು ಆತನಿಂದ ಪೇಪರನ್ನು ತೆಗೊಳ್ಳಲು ಹಿಂಜರಿದೆ..

ಆಗ ಆತ ಪರವಾಗಿಲ್ಲ ಇಟ್ಟುಕೊಳ್ಳಿ... ನನ್ನ ಲಾಭದಲ್ಲಿ ಒಂದು ಚಿಕ್ಕ ಪಾಲು ಇದಾಗಿದೆ ಅಂತ ಹೇಳುತ್ತಾ ಒತ್ತಾಯಿಸಿ ಪೇಪರ್ ಕೊಟ್ಟು ಹೋದ...


ಹತ್ತೊಂಬತ್ತು ವರ್ಷಗಳ ನಂತರ ನಾನು ಶ್ರೀಮಂತನಾದೆ...

ಅದ್ಯಾಕೋ ನನಗೆ ಆ ಹುಡುಗನನ್ನೊಮ್ಮೆ ಕಾಣಬೇಕು ಅಂತ ಮನಸಾಯಿತು.

ಒಂದೂವರೆ ತಿಂಗಳ ಹುಡುಕಾಟದ ಬಳಿಕ ಆ ಹುಡುಗ ಸಿಕ್ಕಿದ...

ಆತನತ್ರ ನಾನು ಕೇಳಿದೆ - " ನನ್ನ ಗುರುತು ಇದೆಯಾ?"

ಹೌದು ಸರ್ ಗುರುತು ಸಿಕ್ಕಿದೆ . ತಾವು ಅತ್ಯಂತ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಅಲ್ಲವೇ? ಕೆಲವು ವರ್ಷಗಳ ಹಿಂದೆ ನೀನು ನನಗೆ ಎರಡು ನ್ಯೂಸ್ ಪೇಪರ್ ಫ್ರೀಯಾಗಿ ಕೊಟ್ಟದ್ದು ನಿನಗೆ ನೆನಪಿದೆಯಾ?

ಅದಕ್ಕೆ ಪ್ರಾಯಶ್ಚಿತ್ತವಾಗಿ ನಿನಗೆ ಏನಾದರೂ ಕೊಡಲು ನಾನು ಬಯಸುವೆ... ನೀನು ಏನು ಬೇಕಾದರೂ ಕೇಳಬಹುದು...

ಆ ಹುಡುಗ - ತಮ್ಮಿಂದ ನನಗೆ ಅದರ ಪ್ರಾಯಶ್ಚಿತ್ತವನ್ನು ಕೊಡಲು ಸಾಧ್ಯವಿಲ್ಲ ಸರ್...

ಬಿಲ್ ಗೇಟ್ಸ್ - ಏನು ಕಾರಣ....!??

ಆ ಹುಡುಗ - ನಾನು ಬಡವನಾಗಿದ್ದಾಗ ನಾನು ನಿಮಗೆ ಕೊಟ್ಟೆ...

ಆದರೆ ತಾವು ಶ್ರೀಮಂತರಾದ ಬಳಿಕ ನನಗೆ ಕೊಡಲು ತಾವು ಬಂದಿದ್ದೀರಿ...


ಹಾಗಿರುವಾಗ ಬಡವನಾಗಿದ್ದ ಅವಸ್ಥೆಯಲ್ಲಿ ನಾನು ಕೊಟ್ಟದ್ದು ಮತ್ತು ಶ್ರೀಮಂತನಾದ ಬಳಿಕ ತಾವು ಕೊಡುವುದಕ್ಕೂ ಸಾಮ್ಯತೆ ಇಲ್ಲ ಸರ್....


ಇಷ್ಟು ಹೇಳಿದ ನಂತರ ಬಿಲ್ ಗೇಟ್ಸ್ ತನ್ನನ್ನು ಅತಿ ದೊಡ್ಡ ಶ್ರೀಮಂತ ಅಂತ ಹೇಳಿದ ವ್ಯಕ್ತಿಯತ್ರ ಹೇಳುತ್ತಾರೆ 


 ಈಗ ಹೇಳಿ ಅತ್ಯಂತ ದೊಡ್ಡ ಶ್ರೀಮಂತ ಆ ಕಪ್ಪಾದ ಹುಡುಗನಲ್ಲವೇ...?


( ದಾನ ಧರ್ಮ ಮಾಡಲು ಶ್ರೀಮಂತರಾಗಬೇಕಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ... 

ಸಹಾಯ ಮಾಡುವ ಗುಣಕ್ಕೆ ಸಮಯದ ಪರಿಧಿಯಿಲ್ಲ. ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ. ಆ ಗುಣವು ಹೃದಯದಿಂದ ಬರಬೇಕು..)

ಕೃಪೆ : ಅಂತರ್ಜಾಲ.

Friday, January 23, 2026

ಕಥೆ-1014

ಹಿರೇಮ್ಯಾಗೇರಿಯಲ್ಲಿ ಸಂಭ್ರಮದ ಜಾತ್ರೋತ್ಸವ 

(ಆಟೋಟ, ರಕ್ತದಾನ, ಭಜನೆ, ಸಾಮೂಹಿಕ ವಿವಾಹ)

ಹಿರೇಮ್ಯಾಗೇರಿಯಲ್ಲಿ ಒಂದು ವಾರ ಜಾತ್ರಾ ಸಂಭ್ರಮ.. ದಿನಕ್ಕೊಂದು ಕಾರ್ಯಕ್ರಮದ ಮೂಲಕ ಸಂತಸ & ಸಂಭ್ರಮ ಮನೆ ಮಾಡಿತ್ತು..

1. ಕಬಡ್ಡಿ ಕ್ರೀಡಾಕೂಟ....

ಭಾರತದ ಮಣ್ಣಿನ ವಾಸನೆಯಲ್ಲೇ ಹುಟ್ಟಿದ ಈ ಆಟಕ್ಕೆ ಹಿರೇಮ್ಯಾಗೇರಿ ತವರೂರಾಗಿದೆ.. ಕ್ರೀಡೆ ಇಲ್ಲದ ಜೀವನ ಕೀಡೆ ತಿಂದ ಸಸ್ಯದ ಹಾಗೆ.. ಕಬಡ್ಡಿ ಆಟ ಕಲಿಸುವುದು ಅನೇಕ ಪಾಠ. ಉಸಿರಿನ ಲಯದಲ್ಲೇ ಗೆಲುವಿನ ಗುಟ್ಟು ಅಡಗಿದೆ, ಬಿದ್ದಾಗಲೂ ಮತ್ತೆ ಎದ್ದು ಹೋರಾಡಬೇಕು..

2. ರಕ್ತದಾನ ಶಿಬಿರ

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ.. ಹೀಗಾಗಿ ರಕ್ತಕ್ಕೆ ಅಪಾರ ಬೇಡಿಕೆ ಇದೆ.. ಅಲ್ಲದೆ ಸತ್ತವರನ್ನು ಬದುಕಿಸಲು ನಮ್ಮಿಂದ ಸಾಧ್ಯವಿಲ್ಲ.. ಆದರೆ ಸಾಯುತ್ತಿರುವವರನ್ನು ಬದುಕಿಸಲು ಅವಕಾಶವಿದೆ.. ಅದು ರಕ್ತದಾನದ ಮೂಲಕ.. 

ಜೀವ ಉಳಿಸುವ ಒಂದು ಶ್ರೇಷ್ಠ ಸೇವೆ, ಅದೊಂದು ಆತ್ಮತೃಪ್ತಿ..

ಮಾನವೀಯ ಮೌಲ್ಯವೂ ಹೌದು.. 

ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪಾದನೆ ಹೆಚ್ಚಾಗುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ... 

3. ಭಜನಾ ಪದಗಳ ಸ್ಪರ್ಧೆ....

ಮನಸ್ಸು ಅಶಾಂತವಾಗಿದ್ದಾಗ ಭಜನೆ ಔಷಧಿ ಆಗುತ್ತದೆ, ಆತ್ಮಕ್ಕೆ ಅದು ಅಮೃತ ಇದ್ದಂತೆ. ಇಂತಹ ನಮ್ಮ ನೆಲದ ಜಾನಪದ ಸಾಹಿತ್ಯವನ್ನು ಪ್ರೋತ್ಸಾಹಿಸಿರುವುದು ಒಳ್ಳೆಯ ಬೆಳವಣಿಗೆ..

4. ಸಾಮೂಹಿಕ ವಿವಾಹಗಳು...

ಜೀವನದ ಆರಂಭಕ್ಕೆ ಐಶ್ವರ್ಯಕ್ಕಿಂತ ಆತ್ಮೀಯತೆ ಮುಖ್ಯ... ಅಂತಹ ಒಬ್ಬ ಆತ್ಮೀಯರನ್ನು ಜೀವನ ಸಂಗಾತಿಯಾಗಿ ಸಹಸ್ರಾರು ಭಕ್ತರ, ಹಿರಿಯರ ಮತ್ತು ಮಠಾಧೀಶ ಗುರುಗಳ ಆಶಿರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ ಮತ್ತು ಜೀವನದ ಸಾರ್ಥಕತೆಯ ಕ್ಷಣ ಎನ್ನಬಹುದು..

ಸಾಮೂಹಿಕ ವಿವಾಹಗಳು 

ಸಮಾಜದ ಒಗ್ಗಟ್ಟನ್ನು, ಊರಿನ ಒಗ್ಗಟ್ಟನ್ನು ಹೆಚ್ಚಿಸುತ್ತದೆ..


ಪ್ರತಿ ವರ್ಷ ಇಂತಹ ಸಾಮಾಜಿಕ ಕಳಕಳಿಯೊಂದಿಗೆ ನಮ್ಮ ಹಿರೇಮ್ಯಾಗೇರಿಯ ಜನತೆ ಜಾತಿ, ಮತ, ಭೇದ-ಭಾವವಿಲ್ಲದೆ, ಹಿರಿಯರು ಕಿರಿಯರು ಎಲ್ಲರೂ ಒಗ್ಗಟ್ಟಾಗಿ ನಡೆಸುವ ಕ್ರೀಡಾಕೂಟಗಳು, ರಕ್ತದಾನ ಶಿಬಿರ, ಭಜನಾ ಸ್ಪರ್ಧೆ, ಸಾಮೂಹಿಕ ವಿವಾಹ ಇತ್ಯಾದಿ... ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಊಟದ ವ್ಯವಸ್ಥೆ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ....

ನೂತನ ದಂಪತಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಚರರಾಗಿ, ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕಜೀವನ ನಡೆಸಲಿ. ಆದರ್ಶ ದಂಪತಿಗಳಾಗಲಿ ಎಂದು ಶುಭ ಹಾರೈಸೋಣ..

💐💐💐

- ಶಂಕರಗೌಡ ಬಸಾಪೂರ

Thursday, January 22, 2026

 ಕಥೆ-1013

ಓದುವ ಅಭ್ಯಾಸ ಇದ್ದರೆ, ಜೀವನದಲ್ಲಿ ಯಾವ ವಯಸ್ಸೂ ಖಾಲಿಯಾಗುವುದಿಲ್ಲ


          ಒಂದನೊಂದು ಕಾಲದಲ್ಲಿ ಪಿ.ಯು.ಸಿ.ಶಿಕ್ಷಣಕ್ಕೆ ಮಂಗಳ ಹಾಡಿ, ಜೀವನಕ್ಕೆ ಭದ್ರವಾದ ಬುನಾದಿ ಹಾಕಲು ಹಲವು 'ಉದ್ಯೋಗ ' ಎಂದು ಎಲ್ಲಾಡೆ ಓಡಾಡಿದ್ದರೂ ಹೆಚ್ಚಿನ ಫಲ ಮಾತ್ರ ದೊರೆಯಲಿಲ್ಲ....! ದುಡಿದು ಸಂಪಾದಿಸುತ್ತಿದ್ದ ಕಾಸು ಹೊಟ್ಟೆ - ಬಟ್ಟೆ - ಇನ್ನಿತರ ಖಚು೯ಗಳಿಗೆ ಖಾಲಿಯಾಗಿಬಿಡುತ್ತಿತ್ತು...!ಒಂದು ಮಧುರವಾದ ಕನಸು ಕಾಣುತ್ತಾ 'ನಿದ್ರೆ' ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ....! ಆದರೆ ಜೀವನದಲ್ಲಿ ಏನಾದ್ದರೂ ಒಂದು 'ಸಾಧನೆ' ಮಾಡುವಂತಹ ಗುರಿ ಮಾತ್ರ ಇತ್ತು...!


   ಕಾಲಚಕ್ರ ತಿರುಗ ತೊಡಗಿತ್ತು.... ನಂತರ ಮದುವೆ.... ಮಕ್ಕಳು ಎಂದು ಹೇಳುತ್ತಾ, 40ರ

ವಯಸ್ಸಿನ ಗಡಿ ತಲುಪಿದ್ದೇ ತಿಳಿಯಲಿಲ್ಲ...! ಬದುಕು ಸಾಗಿಸಲು ಒಂದು ಮಾರುತಿ ವ್ಯಾನ್ ನಲ್ಲಿ, ಬ್ರೆಡ್ - ಬನ್-ಕೇಕ್ - ಮಸಾಲೆ ಕಡಲೆಯಂತಹ ' ಬೇಕರಿ 'ತಿಂಡಿ - ತಿನಿಸುಗಳನ್ನು ತುಂಬಿಸಿಕೊಂಡು, ವಿವಿಧ ಗ್ರಾಮಗಳ ಹೋಟೆಲ್ - ಅಂಗಡಿಗಳಿಗೆ ಈ ತಿಂಡಿ-ತಿನಿಸುಗಳನ್ನು ತಲುಪಿಸಿ, ಒರ್ವ ' ವ್ಯಾಪಾರಿ' ಎಂಬ ಹಣೆಪಟ್ಟಿ ದೊರೆಯಿತು...! ಜೊತೆಗೆ ವ್ಯಾಪಾರವು ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾರಣ, ಈ ಹಿಂದೆ ಕಂಡ ಕನಸುಗಳು ಮೆಲ್ಲನೆ ನನಸಾಗ ತೊಡಗಿತ್ತು..

    ಈ ಕನಸುಗಾರ ಕೊಡಗು ಜಿಲ್ಲೆಯ ಕುಶಾಲನಗರದ ನ್ಯೂ ಹೌಸಿಂಗ್ ಬೋಡ್೯ ನಿವಾಸಿ ಪರಮೇಶ್..!ಹೀಗೆ ಈ ವ್ಯಾಪಾರವು ಯಾವುದೇ ವಿಘ್ನ ಇಲ್ಲಾದೇ ಸಾಗುತ್ತಿದ್ದಾಗ, ಪ್ರಪಂಚವನ್ನು ನಡುಗಿಸಿದ 'ಕೊರೋನಾ' ಮಾರಿಯಿಂದ ಇವರ ವ್ಯಾಪಾರಕ್ಕೆ ತುಸು ಇಳಿಕೆ ಕಂಡು ಬಂತು.. 

      ಆ ಸಮಯದಲ್ಲಿ ಈ ಹಿಂದೆ ಇವರು ಕನಸು ಕಂಡಿದ್ದ ' ಪದವಿ' ಯ ಕನಸು ಪುನಃ ಮನಸ್ಸಿನಲ್ಲಿ ಮೊಳಕೆ ಹೊಡೆಯಿತ್ತು...! ಈಗ ಪುನಃ ಓದು ಮುಂದುವರಿಸಿ ಹೆಸರು ನೊಂದಿಗೆ ಕೇವಲ 'ಪದವಿ' ಸೇರಿಸಿ ಪ್ರಯೋಜನ ಇಲ್ಲ.... ಈ ಪದವಿಯಿಂದ ಸಮಾಜದಲ್ಲಿ ಹತ್ತು ಮಂದಿಗೆ ಪ್ರಯೋಜನವಾಗ ಬೇಕೆಂದು, ಅವರ ಮನ ನುಡಿಯಿತ್ತು...! ಆಗ ಅವರನ್ನು ಕೈ ಬೀಸಿ ಕರೆದದ್ದು ಲಾ.... ಎಲ್.. ಎಲ್.ಬಿ.

ಶಿಕ್ಷಣ...!ಇದು ಇವರಿಗೆ ಸುಲುಭದ ಮಾತುವಾಗಿರಲಿಲ್ಲ ಈ ಹಿಂದೆ ಪಿ.ಯು.ಸಿ.ಶಿಕ್ಷಣವನ್ನು ಮುಗಿಸಿ ಸುಮಾರು 24 ವಷ೯ಗಳೇ ಕಳೆದು ಹೋಗಿದ್ದ ಕಾರಣ, ಓದು -ಬರಹ ಸುಲುಭದ ವಿಚಾರವಾಗಿರಲಿಲ್ಲ...! ಆದರೂ ಧೈರ್ಯ ಮಾಡಿ ಮೈಸೂರಿನ 'ಕನಾ೯ಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ, ಕಾನೂನು ಕಲಿಕೆ ವಿದ್ಯಾಥಿ೯ಯಾಗಿ ದಾಖಲಾಗಿಬಿಟ್ಟರು....!ಐದು ವಷ೯ಗಳ ಓದು...! ಜೊತೆಗೆ ವ್ಯಾಪಾರವು ಎಂದಿನಂತೆ ಸಾಗಬೇಕು,..! ಮನದಲ್ಲಿ ಒಂದು ಧೃಡವಾದ ಗುರಿ ಮತ್ತು ಕನಸು ಇದ್ದ ಕಾರಣ, ನಿತ್ಯ ಕುಶಾಲನಗರದಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತಾ, ಪುನಃ ಅವರ ಬಾಳಿನಲ್ಲಿ ಮತ್ತೊಂದು 'ಕಾಲೇಜ್ ಲೈಫ್'

ಶುರುವಾಯಿತ್ತು...!

        ನಿತ್ಯ ಬೆಳಿಗ್ಗೆ ಐದು ಗಂಟೆಗೆ ಕುಶಾಲನಗರದಿಂದ ಬಸ್ ಏರಿ, ಮೈಸೂರುಗೆ ತಲುಪಿ, ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಬನ್ನೂರು ರಸ್ತೆಯಲ್ಲಿರುವ ಕಾಲೇಜ್ ಗೆ

ಹೋಗಿ ವಿದ್ಯಾಥಿ೯ಯಾಗಿ ಓದು ಪ್ರಾರಂಭಿಸಿಯೇ ಬಿಟ್ಟರು...! ಕೈಯಲ್ಲಿರುವ ದೊಡ್ಡ-ದೊಡ್ಡ ಗಾತ್ರದ ಪುಸ್ತಕಗಳನ್ನು ನೋಡುವಾಗ ಮನಸ್ಸಿನ ಒಂದು ಮೂಲೆಯಲ್ಲಿ ಭಯವಾಗುತ್ತಿತ್ತು, ಆದರೂ ಮನಸ್ಸು ಗಟ್ಟಿಯಾಗಿದ್ದ ಕಾರಣ, ಓದು ಸುಗಮವಾಗಿ ಸಾಗುತ್ತಿತ್ತು...!

ಕಾಲೇಜ್ ಓದು ಮುಗಿಸಿ, ಮನೆಗೆ ತಲುಪಿ ನಂತರ ಎಂದಿನಂತೆ 'ವ್ಯಾಪಾರ'ದ ಚಟುವಟಿಕೆಗಳು ಪ್ರಾರಂಭವಾಗುತ್ತಿತ್ತು!ಈ ಕೆಲಸ ಮುಗಿಯುವ ವೇಳೆಗೆ ರಾತ್ರಿ

ಹನ್ನೊಂದು -ಹನ್ನೇರಡು ಗಂಟೆಯಾಗುತ್ತಿತ್ತು....! ನಂತರ ಒಂದು ಸಣ್ಣ. 'ಕೋಳಿ ನಿದ್ರೆ'..! ಮರುದಿನ ಎಂದಿನಂತೆ ಕಾಲೇಜ್ - ವ್ಯಾಪಾರ ಎಂದು ಬದುಕಿನ ಬಂಡಿ ಸಾಗುತ್ತಿತ್ತು.!!


   ಮನಸ್ಸಿನಿಂದ ಸೋಮಾರಿತನವನ್ನು ಓಡಿಸಿ, ಮನಸ್ಸುನಲ್ಲಿ

ಗುರಿ ಮತ್ತು ಕನಸುಗೆ ಭದ್ರವಾದ ಸ್ಥಾನ ನೀಡಿದ್ದ ಫಲವಾಗಿ ,

ಐದು ವಷ೯ದ ಕಾನೂನು ಪದವಿ ಪರೀಕ್ಷೆ ಬರೆದು ಮುಗಿಸಿ ಫಲಿತಾಂಶ ಹೊರಬಂದಾಗ, ಈ ವ್ಯಾಪಾರಿ ಉತ್ತಮ ಅಂಕದೊಂದಿಗೆ ವಕೀಲರಾಗಿ, ಅರಳಿ ಬಿಟ್ಟರು...! ಕನಸು ನನಸಾಯಿತ್ತು....! ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಿತ್ತು..!ಈಗ ವ್ಯಾಪಾರಿ ಪರಮೇಶ್,

ವಕೀಲ.. ಲಾಯರ್ ಪರಮೇಶ್....!ಹೆಸರು ಜೊತೆ ಪದವಿ..!

      ಈಗ ಪರಮೇಶ್ ನವರ ಕೈಯಲ್ಲಿ ಎರಡು 'ತಕ್ಕಡಿ'ಗಳು ಇದೆ..!ಒಂದು ವ್ಯಾಪಾರದ ಲಾಭ-ನಷ್ಟಗಳ ಲೆಕ್ಕಚಾರದ ತಕ್ಕಡಿ...! ಮತ್ತೊಂದು ಅನ್ಯಾಯ-ನ್ಯಾಯಗಳನ್ನು ತೂಕ ಮಾಡಿ, ನೊಂದ ಮನಸ್ಸುಗಳಿಗೆ ನ್ಯಾಯ ಒದಗಿಸುವ ನ್ಯಾಯದ ತಕ್ಕಡಿ...!

      ಈ ಶುಭ ವೇಳೆಯಲ್ಲಿ ಎರಡು ತಕ್ಕಡಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಪರಮೇಶ್ ನವರಿಗೆ ಹೇಳಿದ್ದರೇ, ಅವರಿಗೆ ಬಲು ಕಷ್ಟವಾಗುತ್ತದೆ...! ಏಕೆಂದರೆ ವ್ಯಾಪಾರದ ತಕ್ಕಡಿ ಅವರನ್ನು ಕಷ್ಟ ಕಾಲದ ದಿನಗಳಲ್ಲಿ ಕೈ ಹಿಡಿದು ಮೇಲೆ ಕ್ಕೆ ಎತ್ತಿ, ಈ ಸಮಾಜದಲ್ಲಿ ಒಂದು ಬೆಲೆ - ಗೌರವದಿಂದ ಬಾಳುವಂತಹ ರೀತಿಯಲ್ಲಿ ಕೆತ್ತನೆ ಮಾಡಿದ್ದು...!ಈಗ ಕೈಯಲ್ಲಿ ಇರುವ ನ್ಯಾಯದ ತಕ್ಕಡಿ ಸುಮ್ಮನೆ ' ಟೈಂ ಪಾಸ್' ಅಥವಾ ಅದೃಷ್ಟ ಬಲದಿಂದ ದೊರೆತದ್ದು ಅಲ್ಲ.....!ಇದಕ್ಕಾಗಿ ಐದು ವಷ೯ಗಳ ಕಾಲ ಸರ್ವ ಮೋಜು- ನಿದ್ರೆ ಹಾಳು ಮಾಡಿಕೊಂಡು, ಓಡಾಡಿ ಓದಿದ ಫಲವಾಗಿ ಮಾತ್ರ ಈ

'ಕರಿಕೋಟು' ಧರಿಸುವಂತಹ ಸೌಭಾಗ್ಯ ಸಿಕ್ಕಿದ್ದು....!

    ಈಗ ಪರಮೇಶ್ ನವರು ಪತ್ನಿ ಸುಮಿ ಮತ್ತು ಮಕ್ಕಳಾದ ಅಭಯ್ & ಜಿನಿಯೊಂದಿಗೆ ಕುಶಾಲನಗರದಲ್ಲಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ....!ಕರಿಕೋಟು ಧರಿಸಿ ಕೋರ್ಟ್ ಗೆ

ಹೋಗುವ ವೇಳೆ, ಪ್ರೀತಿಯಿಂದ ಪತ್ನಿಯಿಂದ ಒಂದು ನೋಟ ನೋಡಿ ಮುಂದಕ್ಕೆ ಸಾಗುತ್ತಾರೆ..!ಏಕೆಂದರೆ ಇವರ ಈ ಗೆಲುವಿನ ಹಿಂದೆ ಪತ್ನಿಯ ಪರಿಶ್ರಮವು ಬಹಳ ಇದೆ ಎಂದು ಹೇಳಲು ಪರಮೇಶ್ ಮರೆಯುವುದಿಲ್ಲ...!

   ಪರಮೇಶ್ ನವರ ಈ ಸಾಧನೆಯ ಕಥೆ ಕೇಳಿದಾಗ, ಕಲಿಕೆಯ ದೀಪ ವಯಸ್ಸನ್ನು ನೋಡದು; ಆಸಕ್ತಿಯನ್ನು ಮಾತ್ರ ನೋಡುತ್ತದೆ.”ಓದುವ ಅಭ್ಯಾಸ ಇದ್ದರೆ, ಜೀವನದಲ್ಲಿ ಯಾವ ವಯಸ್ಸೂ ಖಾಲಿಯಾಗುವುದಿಲ್ಲ.”


ಬರಹ: ಐಗೂರು ಮೋಹನ್ ದಾಸ್ ಜಿ.

Wednesday, January 21, 2026

 ಕಥೆ-1012

ತಾಳ್ಮೆಯಿಂದ ಯೋಚಿಸಿದರೆ ಎಲ್ಲವು ಸರಿಯಾಗುತ್ತದೆ.

ಒಂದು ಊರಲ್ಲಿ ರಾಘು ಎಂಬ ವ್ಯಕ್ತಿ ಇದ್ದ. ಆತನ ಮಗ ಶಾಮು.. ಒಂದು ದಿನ ಶಾಮು ತನ್ನ ತಂದೆಗೆ ತನಗೆ ಇಷ್ಟವಾದ ಕಾರನ್ನು ಕೊಡಿಸೆಂದು ಕೇಳುತ್ತಾನೆ, ಆದರೆ ಅವರ ಅಪ್ಪ ನೀನು ಕಾಲೇಜಿಗೆ 1st rank ಬಂದರೆ ಮಾತ್ರ ನಿನಗೆ ನಾನು ಆ ಕಾರನ್ನು ಕೊಡಿಸುತ್ತೇನೆ ಎಂದನು. ಆ ಮಾತನ್ನು ಕೇಳಿದ ಶಾಮು ಹಗಲು ರಾತ್ರಿ ಎನ್ನದೆ ಓದಲು ತೊಡಗಿದ ಹಾಗೆ ಪರೀಕ್ಷೆಯು ಬಂದಿತು. ಆ ಪರೀಕ್ಷೆಯಲ್ಲಿ ಅವನು ಕಾಲೇಜಗೆ 1st rank ಬಂದ.. ಅವನಿಗೆ ಆತುರ "ನಮ್ಮ ಅಪ್ಪ ನನಗೆ ಇಷ್ಟವಾದ ಕಾರನ್ನು ಕೊಡಿಸುತ್ತಾರೆಂದು" ಖುಷಿಯಿಂದ ಓಡೋಡಿ ಮನೆಗೆ ಬರುತ್ತಾನೆ ಆದರೆ ಅವರ ಅಪ್ಪ ಕಾರು ಬದಲಿ ರಾಮಾಯಣ ಪುಸ್ತಕ ಕೊಡುತ್ತಾನೆ. ಹಾಗಾಗಿ ಅವನು ತುಂಬಾ ದುಃಖ ಪಡುತ್ತಾನೆ. ಅವನು ಕೇಳಿದ್ದು ಪುಸ್ತಕವಲ್ಲ ಬದಲಾಗಿ ಕಾರು ಅದಕ್ಕೆ ಅವನು ಆ ಪುಸ್ತಕ ಓದದೇ ಅದನ್ನು ಅಲ್ಲೇ ಇಟ್ಟು ಮನೆ ಬಿಟ್ಟು ಹೊರಗೆ ಓಡಲು ಶುರುಮಾಡುತ್ತಾನೆ.. ಒಂದು ನಿಮಿಷ ಕೇಳು ಶಾಮು ಎಂದರೂ ನಿಲ್ಲುವುದಿಲ್ಲ.. ಮನೆ ಬಿಟ್ಟು ಹೋಗುತ್ತಾನೆ.. ರಾಘು ಮಗನನ್ನು ಹುಡುಕುವ ಪ್ರಯತ್ನ ಮಾಡಿದರು ಸಿಗಲಿಲ್ಲ...

ಮನೆ ಬಿಟ್ಟು ಹೋದ ಮೇಲೆ ಅವನು ಅಲ್ಲಿ ಇಲ್ಲಿ ಕೆಲಸ ಮಾಡಿ ಚೆನ್ನಾಗಿ ಓದಿ ಒಂದು ಒಳ್ಳೆ ಕೆಲಸಕ್ಕೆ ಸೇರಿ ತನ್ನದೇ ಆದ ಕಂಪನಿ ಶುರುಮಾಡುತ್ತಾನೆ ಆ ಕಂಪನಿಯಿಂದ ಶ್ರೀಮಂತನಾಗುತ್ತಾನೆ.. ಅವನ ಸ್ವಂತ ದುಡಿಮೆಯಿಂದ ತನಗೆ ಇಷ್ಟವಾದ ಕಾರನ್ನು ಅವನು ಖರೀದಿಸುತ್ತಾನೆ. ಅವನಿಗೆ ಅವನ ಅಪ್ಪನ ನೆನಪಾಗಿ ಅವರ ಅಪ್ಪನಿಗೆ ಹೆಗೋ ಮಾಡಿ ಫೋನ್ ಮಾಡಿದಾಗ ಯಾರೋ ಒಬ್ಬ ವ್ಯಕ್ತಿ ಮಾತನಾಡುತ್ತಾನೆ "ನಿಮ್ಮ ಅಪ್ಪ ತೀರಿಕೊಂಡು ಒಂದು ವಾರ ಆಯಿತು ನಿಮಗೆ ಫೋನ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಬೇಗನೆ ಮನೆಗೆ ಬನ್ನಿ" ಎಂದು ಆ ಅಪರಿಚಿತ ಹೇಳಿದ ಕ್ಷಣವೇ ಓಡೋಡಿ ಮನೆಗೆ ಹೋಗುತ್ತಾನೆ ಅಲ್ಲಿ ಅವನ ಅಪ್ಪ ಕೊಟ್ಟ ರಾಮಾಯಣ ಪುಸ್ತಕ ಇರುತ್ತದೆ ಅದನ್ನು ತೆಗೆದುಕೊಂಡು ಓದುತ್ತಾನೆ. ಒಂದನೇ ಪುಟದಲ್ಲಿ ಅವರ ಅಪ್ಪ "ನೀನು ನಾನು ಹೇಳಿದಂತೆ ಕಾಲೇಜಿಗೆ 1st rank ಬಂದು ನನ್ನ ಕನಸನ್ನು ನನಸು ಮಾಡಿದೆ ಅದಕ್ಕಾಗಿ ನಾನು ನಿನಗೆ ಜೀವನದ ಮೌಲ್ಯವನ್ನು ತಿಳಿಸಲು ಈ ಪುಸ್ತಕವನ್ನು ನೀಡಿರುವೆ ಈ ಪುಸ್ತಕದ ಕೊನೆಯ ಪುಟದಲ್ಲಿ ನೀನು ಹೇಳಿದ ಹಾಗೆ ನಿನಗೆ ಇಷ್ಟವಾದ ಕಾರಿನ key ಇಟ್ಟಿದ್ದೇನೆ ತೆಗೆದುಕೋ" ಎಂದು ಬರೆದಿರುತ್ತಾನೆ.. ಅದನ್ನು ಓದಿದ ಅವನ ಶಾಮನ ಕಣ್ಣಲ್ಲಿ ನೀರಿನ ಧಾರೆ ಶುರುವಾಯಿತು.. "ನಾನು ಅವತ್ತು ಶಾಂತವಾಗಿ ಈ ಪುಸ್ತಕ ಓದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ" ಎಂದು ತುಂಬಾ ದುಃಖ ಪಡುತ್ತಾನೆ.

ಇವತ್ತಿನ ಜನರೇಶನ್ ಗೆ ತಾಳ್ಮೆ ಬಹಳ ಕಡಿಮೆ.. ಆತುರದ ನಿರ್ಧಾರ ತೆಗೆದುಕೊಂಡು ಜೀವನ ಪರಂತ ಕೊರಗುತ್ತಾರೆ.. ಏನೇ ಮಾಡಿದರೂ, ತಾಳ್ಮೆಯಿಂದ ಯೋಚಿಸಬೇಕು. ಆದ್ದರಿಂದ ದುಡುಕು ಕೆಡುಕು..

ಸಂಗ್ರಹ:-ಪ್ರಜ್ವಲ್ ರಾಮಶೆಟ್ಟಿ ಹಿರೇಮ್ಯಾಗೇರಿ

Tuesday, January 20, 2026

 ಕಥೆ-1011

ಬದಲಾವಣೆಯತ್ತ ಒಂದೊಂದೇ‌ ಹೆಜ್ಜೆ.


 ‌ ‌ಡಾಕ್ಟರ್ ಶಿಗಾಕಿ ಹಿನೋಹರಾ ಜಪಾನಿನ ಅತ್ಯಂತ ಪ್ರಸಿದ್ಧ ವೈದ್ಯರು. ನೂರಾಐದು ವರ್ಷ ಬದುಕಿ ಬಾಳಿದ್ದ‌ ಅವರು ಕೊನೆಯವರೆಗೂ ನಿವೃತ್ತರಾಗದೇ, ಚಟುವಟಿಕೆಯಿಂದಿದ್ದರು .


    ಅವರಲ್ಲಿಗೆ ಒಬ್ಬ ಮಹಿಳೆ ಸಲಹೆಗಾಗಿ ಬಂದಳು. ಆಕೆಗೆ ಹೆಚ್ಚುತ್ತಿರುವ ತೂಕದಿಂದ ಹಲವಾರು ಖಾಯಿಲೆಗಳೂ ಕಾಣಿಸಿಕೊಂಡಿದ್ದವು. ಬಹಳ ಒತ್ತಡದ ಜೀವನ‌ಶೈಲಿಯ ಆಕೆಗೆ, ವ್ಯಾಯಾಮ ಮಾಡಲಾಗಲೀ,ನಡೆಯಲಾಗಲಿ, ಸಮಯವಿರಲಿಲ್ಲ. ಡಾಕ್ಟರ್ ಶಿಗಾಕಿಯವರಿಗೆ , ಇದು ತಕ್ಷಣಕ್ಕೆ ಪರಿಹಾರವಾಗುವಂತಹ ಸಮಸ್ಯೆಯಲ್ಲಾ ಎಂದು ಗೊತ್ತಾಯಿತು. ಆಗ ಅವರು, ನಿಮಗೆ ದಿನಾ ಹಾಡು ಕೇಳುವ ಅಭ್ಯಾಸ ವಿದೆಯಾ ? ಎಂದು ಮಹಿಳೆಯನ್ನು ಕೇಳಿದರು.ಆಕೆ ಹೌದೆಂದು ತಲೆ ಅಲ್ಲಾಡಿಸಿದಳು. ಹಾಗಾದರೆ, ಒಂದು ವಾರ ಯಾವುದಾದರೂ ಹಾಡಿಗೆ ದಿನಕ್ಕೊಂದು ನಿಮಿಷದಂತೆ ನೃತ್ಯ ಮಾಡಲಾಗುವುದೇ? ಎಂದು ಕೇಳಿದರು ವೈದ್ಯರು.

ಆಗ ಆ ಮಹಿಳೆ, ಮುಗುಳ್ನಗುತ್ತಾ, ಓಹ್, ಒಂದು ನಿಮಿಷ ತಾನೇ, ಅಷ್ಟು ಸಮಯವಿಲ್ಲದೆ ಏನು? ಎಂದು ನೃತ್ಯ ಮಾಡಲು ಒಪ್ಪಿಕೊಂಡಳು.


   ಒಂದು ವಾರ ಬಿಟ್ಟು ಮತ್ತೆ ಆಕೆ ವೈದ್ಯರ ಬಳಿಗೆ ಬಂದಾಗ, ಶಿಗಾಕಿ ಯವರು, ಇಡೀ ಹಾಡಿಗೆ ದಿನವೂ ನೃತ್ಯಮಾಡಲು ಸಮಯವಿದೆಯೇ? ಎಂದು ಕೇಳಿದರು. ಅದಕ್ಕೂ ಆ ಮಹಿಳೆ ಸಂತೋಷದಿಂದ ಒಪ್ಪಿಕೊಂಡಳು. ಹಾಗೆ ಮುಂದಿನ ವಾರ ಬಂದಾಗ, ಎರಡು ಹಾಡುಗಳ ನೃತ್ಯ ಮಾಡಲು ಹೇಳಿದರು, ಅದಾದ ಮೇಲೆ ನೃತ್ಯದ ಜೊತೆಗೆ ಕೆಲವು ಸುಲಭ ವ್ಯಾಯಾಮಗಳನ್ನು ಸೇರಿಸಿಕೊಳ್ಳಲು ಹೇಳಿಕೊಟ್ಟರು 


   ಹೀಗೆಯೇ ನಿಧಾನವಾಗಿ ವ್ಯಾಯಾಮದ ಅವಧಿಯನ್ನು ಹೆಚ್ಚಿಸುತ್ತಾ ಒಂದು ವರ್ಷ ಕಳೆಯುವಷ್ಟರಲ್ಲಿ , ದಿನವೂ ಒಂದರಿಂದ ಒಂದೂವರೆ ಗಂಟೆಯಷ್ಟು ದೈಹಿಕ ವ್ಯಾಯಾಮಕ್ಕೆ ಸಮಯವನ್ನು ಮೀಸಲಿಟ್ಟಳು ಆ ಮಹಿಳೆ. ಆಕೆ ಒಂದು ವರ್ಷದಲ್ಲಿ ಇಪ್ಪತ್ತು ಕೆಜಿ ಅಷ್ಟು ತೂಕವನ್ನು ಇಳಿಸಿಕೊಂಡಳು. ಆರೋಗ್ಯವೂ ಬಹಳಷ್ಟು ಸುಧಾರಿಸಿತು. ಅವಳ ಮುಖಚರ್ಯೆ ಗೆಲುವಿನಿಂದ ಬದಲಾಯಿತು.


  ಮನುಷ್ಯನ ಮಿದುಳು ಎಷ್ಟು ಅದ್ಭುತವಾದದ್ದೊ ಅಷ್ಟೇ, ಹಠಮಾರಿಯೂ ಕೂಡ ಹೌದು. ತಕ್ಷಣದ ಬದಲಾವಣೆಗಳನ್ನು ಅದು ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ವೈದ್ಯರು ಆ ಮಹಿಳೆಗೆ ತಕ್ಷಣವೇ ನೀನು ನಾಳೆಯಿಂದ ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡಬೇಕು ಎಂದಿದ್ದರೆ ಆಕೆ ಯಾವ ಕಾರಣಕ್ಕೂ ಅದನ್ನು ಮಾಡಲು ಒಪ್ಪುತ್ತಿರಲಿಲ್ಲ. ತಕ್ಷಣಕ್ಕೆ ಅದು ಸಾಧ್ಯವೂ ಆಗುತ್ತಿರಲಿಲ್ಲ.


  ನಾವು ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ನಿಧಾನವಾಗಿ ಅಳವಡಿಸಿಕೊಳ್ಳಬೇಕು. ಏನೂ ಓದದ ಮಕ್ಕಳಿಗೆ ದಿನವೂ ನೀನು ನಾಲ್ಕಾರು ಗಂಟೆ ಗಳ ಕಾಲ ಓದಬೇಕು ಎಂದರೆ ಅದು ಸಾಧ್ಯವೇ? ಒಂದೊಂದು ವಿಷಯವನ್ನು ಹದಿನೈದು ನಿಮಿಷಗಳ ಕಾಲ ಓದು ಎನ್ನಬೇಕು. ಹಾಗೆಯೇ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಮನೆಕೆಲಸವನ್ನೂ(ಹೊಮ್ ವರ್ಕ್)ಕೂಡಾ ಸ್ವಲ್ಪ ಸ್ವಲ್ಪವೇ ಕೊಡುತ್ತಾ ಹೋದರೆ ಮಕ್ಕಳು ಖುಷಿಯಿಂದ ‌ತಪ್ಪದೇ ಮಾಡುತ್ತವೆ. ಕ್ರಮೇಣವಾಗಿ ಅದನ್ನು ‌ಸ್ವಲ್ಪ ಸ್ವಲ್ಪವಾಗಿ, ಹೆಚ್ಚಿಸುತ್ತಾ ಹೋದರೆ ಅವುಗಳಿಗೆ ಅದು ಹೊರೆ‌ ಎನಿಸುವುದಿಲ್ಲ. ಐದು ಚಪಾತಿ ತಿನ್ನುವವರಿಗೆ ನೀನು ಒಂದೇ ಚಪಾತಿ ತಿನ್ನಬೇಕು ಎಂದರೆ, ಅದು ಖಂಡಿತ ಸಾಧ್ಯವಿಲ್ಲ. ಅಂತಹವರಿಗೆ ಕೇವಲ ಒಂದು ಚಪಾತಿ ಕಡಿಮೆ ಮಾಡು ಎಂದು ಹೇಳಬೇಕು. ಹಾಗೆಯೇ ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುವವರು ಮೊದಲು ಒಂದು ಸಿಗರೇಟನಿಂದ ಕಡಿಮೆಮಾಡಿಕೊಳ್ಳಬೇಕು.


ಸಣ್ಣ ಸಣ್ಣದಾಗಿ ಪ್ರಾರಂಭಿಸಿದ ಕೆಲಸಗಳೂ

 ನಮ್ಮ ಅರಿವಿಗೇ ಬಾರದಂತೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದು ಬಹಳ ಅಚ್ಚರಿಯ ವಿಚಾರ.


ಸಾವಿರ ಮೈಲಿಗಳ ಪಯಣವು ಕೂಡಾ ಶುರುವಾಗುವುದು ಕೇವಲ ಮೊದಲ ಹೆಜ್ಜೆಯಿಂದಲೇ, ಈ ರೀತಿಯ ಯಾವುದೇ ಬದಲಾವಣೆಯಡೆಗೆ ನಾವು ಸಾಗುವಾಗ ಹಂತ ಹಂತವಾಗಿ ಮುನ್ನೆಡವ ತೀರ್ಮಾನ ಕೈಗೊಳ್ಳಬೇಕು. ಆಗ‌ ಅದು ನಮಗೆ ಸುಲಭವೆನಿಸಿ, ಅದರಲ್ಲಿ ಆಸಕ್ತಿ ಉಂಟಾಗಿ, ಇನ್ನೂ ಮುಂದುವರಿಯಲು ಪ್ರೇರೇಪಿಸುವುದು. ಆಗ ಯಶಸ್ಸು ಖಂಡಿತವಾಗಿ ನಮ್ಮದಾಗುತ್ತದೆ.


ಕೃಪೆ :ಸುವರ್ಣಾ ಮೂರ್ತಿ

Monday, January 19, 2026

 ಕಥೆ-1010

ಚಿಂತೆಗಳ ಹೊರೆ ಚಿತೆಗೆ ಸಮ


ಒಂದು ಊರಿನಲ್ಲಿ ಒಬ್ಬ ಯುವಕನಿದ್ದ, ಅವನು ಸಣ್ಣ ಪುಟ್ಟ ವಿಷಯಗಳನ್ನು ಯೋಚಿಸುತ್ತಾ ಮತ್ತಷ್ಟು ಚಿಂತೆಗಳನ್ನು ತುಂಬಿಸಿಕೊಂಡು ಹೊರೆ ತಾಳಲಾರದೆ ದಿನವಿಡೀ ಒದ್ದಾಡುತ್ತಿದ್ದನು. ಕೆಲವೊಮ್ಮೆ ಅವನನ್ನೆ ಅವನು ಬೈದುಕೊಳ್ಳುತ್ತಿದ್ದ ಯಾಕೆ ಹುಟ್ಟಿದೆ? ಯಾಕೆ ಇಂಥ ಕಷ್ಟ ಕೊಟ್ಟೆ ಎಂದು ದೇವರನ್ನು ಕೇಳುತ್ತಿದ್ದ.ತನ್ನ ಜಾತಕ, ರಾಶಿ, ನಕ್ಷತ್ರ, ಹುಟ್ಟಿದ ಘಳಿಗೆ, ಯಾವುದು ಸರಿ ಇಲ್ಲ, ಅದೃಷ್ಟವು ನನಗೆ ಸಮಯದಲ್ಲಿ ಕೈಕೊಡುತ್ತದೆ. ಹೀಗೆ ಹೇಳುತ್ತಲೇ ಮತ್ತೆ ಇದನ್ನೇ ಮನಸ್ಸಿನಲ್ಲಿ ಯೋಚಿಸುತ್ತಿದ್ದ. ಕೆಲವೊಮ್ಮೆ ಯಾರೋ ಆಡಿದ ವ್ಯಂಗ್ಯ ಮಾತು, ಮಾಡಿದ ಅವಮಾನ ಇವುಗಳ ಸುತ್ತಲೇ ಯೋಚನೆಯನ್ನು ಹರಿಬಿಡುತ್ತಾ ಅತಿಯಾಗಿ ಅವರ ಮೇಲೆ ದ್ವೇಷ ಬೆಳೆಸಿ ಸೇಡು ತೀರಿಸಿಕೊಳ್ಳುವುದು ಹೇಗೆಂದು ಮತ್ತೆ ಅದೇ ವಿಚಾರಗಳಿಗೆ ಹೊಸರೂಪ ಕೊಟ್ಟು ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದ . ಹೀಗಾಗಿ ಅವನ ಹತ್ತಿರ ಉತ್ತಮವಾದ ಗೆಳೆಯರು ಇರಲಿಲ್ಲ, ಅವನಿಗೆ ಅ

ದರಲ್ಲಿ ಆಸಕ್ತಿಯು ಇರಲಿಲ್ಲ. ಒಟ್ಟಾರೆ ಆ ಯುವಕ ಊಟ, ತಿಂಡಿ, ನಿದ್ದೆಯ ಸಮಯದಲ್ಲೂ ತನ್ನ ಸಮಸ್ಯೆಗಳನ್ನು ಮತ್ತಷ್ಟು ಹೆಣೆಯುತ್ತಾ, ಚಿಂತೆಯೆಂಬ ಬಲೆಯನ್ನು ತಾನೇ ನೇಯ್ದುಕೊಂಡು ಅದರಲ್ಲೆ ಒದ್ದಾಡುತ್ತಿದ್ದನು. 


ಇವನ ಈ ದುಸ್ಥಿತಿಯನ್ನು ಕಂಡ ಒಬ್ಬನೇ ಗೆಳೆಯ, ಬೇಕಾದಷ್ಟು ಸಲ ಬುದ್ಧಿವಾದ ಹೇಳಿದ್ದನು. ಆದರೂ ಇದರಿಂದ ಅವನು ಹೊರಬಂದಿರಲಿಲ್ಲ. ಇವನು ಇದೇ ಸ್ಥಿತಿಯಲ್ಲಿ ಇದ್ದರೆ ಹುಚ್ಚನಾಗಿಬಿಡುತ್ತಾನೆ ಎಂದು ಯೋಚಿಸಿ, ಸ್ನೇಹಿತನಿಗೆ ಹೇಳಿದನು ಇಲ್ಲೇ ಪಕ್ಕದ ಗ್ರಾಮದಲ್ಲಿ ಒಬ್ಬ ಝೆನ್ ಗುರು ಇದ್ದಾರೆ ನೀನು ಅವರ ಬಳಿ ಹೋಗಿ ನಿನ್ನ ಎಲ್ಲಾ ಸಮಸ್ಯೆಗಳನ್ನು ಹೇಳಿಕೊ, ಅವರು ಖಂಡಿತ ಏನಾದರೂ ಪರಿಹಾರ ಹೇಳುತ್ತಾರೆ. ಆ ಯುವಕ ಪಕ್ಕದ ಗ್ರಾಮಕ್ಕೆ ಬಂದು ಹಳ್ಳಿಯಲ್ಲಿದ್ದ ಗುರುಗಳ ಮನೆಯನ್ನು ಹುಡುಕಿ ಕೊಂಡು ಅಲ್ಲಿಗೆ ಬಂದನು. ಗುರುಗಳಿಗೆ ನಮಸ್ಕರಿಸಿ, ನಾನು ಚಿಂತೆಗಳಿಂದ ಬಳಲಿದ್ದೇನೆ, ಕೂತರೂ, ನಿಂತರೂ, ಮಲಗಿದರೂ ಎಲ್ಲೇ ಹೋದರು, ಯಾರೊಡನೆ ಮಾತಾಡಿದರು, ಹೇಗೆ ಇದ್ದರೂ ನನಗೆ ಏನೇನು ಯೊಚನೆಗಳು ಬಂದು ಮತ್ತು ಅವು ಎಲ್ಲೂ ಹೋಗದೆ ಅಲ್ಲೇ ಉಳಿದು ಅವುಗಳಿಂದ ನನಗೆ ಮುಕ್ತಿಯೇ ಸಿಗುವುದಿಲ್ಲ. ಮತ್ತಷ್ಟು ಹೊಸ ಹೊಸ ತೊಂದರೆಗಳಲ್ಲಿ ಸಿಲುಕಿ ಚಿಂತೆಯ ಹೊರೆಯನ್ನೇ ನಾನು ಹೊತ್ತು ಕೊಂಡಿದ್ದೇನೆ ಇದರಿಂದ ನನ್ನ ತಲೆ ಭಾರವಾಗಿದೆ ತಲೆ ಸಿಡಿಯುತ್ತಿದೆ ಇದರಿಂದ ಹೇಗೆ ಹೊರಬರಲಿ ಗುರುಗಳೇ? ದಯವಿಟ್ಟು ಮಾರ್ಗ ತೋರಿ ಎಂದು ಕಾಲಿಗೆ ನಮಸ್ಕಾರ ಮಾಡಿದನು.‌ 


ಗುರುಗಳು ಅವನ ಸಮಸ್ಯೆ ಕೇಳಿ, ಏನು ಮಾತನಾಡದೆ ಹಾಗೆ ಹೋದರು. ಇವನಿಗೆ ಅವರ ರೀತಿ ವಿಚಿತ್ರ ಅನಿಸಿದರು ಅಲ್ಲೇ ಕುಳಿತಿದ್ದ. ಸ್ವಲ್ಪ ಹೊತ್ತಿನ ನಂತರ ಗುರುಗಳು ಒಂದು ಗಾಜಿನ ಲೋಟದಲ್ಲಿ ಅರ್ಧದಷ್ಟು ನೀರು ತುಂಬಿ ಅವನ ಮುಂದೆ ನಿಂತರು. ಯುವಕನು ಏನಿರಬಹುದೆಂದು ಆಶ್ಚರ್ಯದಿಂದ ಎದ್ದು ನಿಂತನು. ಕೈ ಉದ್ದ ಮಾಡಿ ಗಾಜಿನ ಲೋಟವನ್ನು ಯುವಕನ ಮುಂದೆ ಹಿಡಿದು, ಈ ಗಾಜಿನ ಲೋಟ ಎಷ್ಟು ಭಾರವಿರಬಹುದು ಎಂದು ಕೇಳಿದರು. ಸರಿಯಾಗಿ ಗೊತ್ತಿಲ್ಲ ಆದರೆ ಹೆಚ್ಚೇನು ಭಾರ ಇರುವುದಿಲ್ಲ ಅಂದನು. ಗುರುಗಳು,ಇದನ್ನು ಹೀಗೆಯೇ ಒಂದು ನಿಮಿಷ ಹಿಡಿದು ನಿಂತರೆ ಏನಾಗುತ್ತದೆ ಎಂದು ಕೇಳಿದರು. ಆ ಯುವಕ ತಕ್ಷಣ, ಒಂದು ನಿಮಿಷ ಹಿಡಿದು ನಿಂತರೆ ಏನೂ ಆಗುವುದಿಲ್ಲ ಎಂದನು. ಒಂದು ಗಂಟೆ ಹಿಡಿದು ನಿಂತರೆ ಎಂದು ಕೇಳಿದರು, ಸ್ವಲ್ಪ ಕೈ ತೋಳು ನೋವು ಬರುತ್ತದೆ ಅಂದನು. ಒಂದು ದಿನವಿಡಿ ಹೀಗೆ ಹಿಡಿದು ( ಕೈಯನ್ನು ಉದ್ದಕ್ಕೆ ಮುಂದೆ ಚಾಚಿ) ನಿಂತರೆ ಏನಾಗುತ್ತದೆ ಎಂದಾಗ, ಯುವಕ ಹೇಳಿದ ಕೈ ತುಂಬಾ ನೋವಾಗಿ ಮಾಂಸಖಂಡಗಳು ಮರಗಟ್ಟಬಹುದು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರಿಗೆ ತೋರಿಸಬೇಕಾಗಿ ಬರುತ್ತದೆ ಎಂದನು. 


ನೀನು ಸರಿಯಾಗಿ ಹೇಳಿದೆ ಎಂದು ಹೇಳಿ, ಪುನಃ ಗುರುಗಳು ಕೇಳಿದರು ನಾವು ಗಾಜಿನ ಲೋಟ ಹಿಡಿದು ನಿಂತ ಇಷ್ಟೂ ಸಮಯದಲ್ಲಿ ಗಾಜಿನ ಲೋಟದ ತೂಕದಲ್ಲಿ ಏನಾದರೂ ವ್ಯತ್ಯಾಸ ಆಯಿತಾ? ಅವನು ಇಲ್ಲ ಎಂದನು. ಹಾಗಾದರೆ ನನ್ನ ಕೈಗೆ ಏಕೆ ನೋವಾಯಿತು ಎಂದು ಗುರುಗಳು ಕೇಳಿದರು? ಯುವಕ ಅದಕ್ಕೆ ಉತ್ತರ ಕೊಡದೆ ತಲೆ ತಗ್ಗಿಸಿ ನಿಂತನು. ಮತ್ತೆ ಮುಂದುವರಿಸಿ ಗಾಜಿನ ಲೋಟ ಹಿಡಿದು ನಿಂತ ನನಗೆ ಕೈ ನೋವು ಬಂದರೆ ಏನು ಮಾಡಬೇಕು? ಎಂದರು . ಕೊಂಚವು ಯೋಚಿಸದೆ ಯುವಕ, ಗಾಜಿನ ಲೋಟವನ್ನು ಕೆಳಗೆ ಕೆಳಗಿಡಬೇಕು ಅಷ್ಟೇ ಎಂದನು. 


ಗುರುಗಳು ಹೇಳಿದರು, ನೋಡಿದೆಯಾ? ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು, ತಪ್ಪುಗಳು, ಅಪರಾಧಿಭಾವ, ಬರುವುದು ತಪ್ಪಲ್ಲ. ಆದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಅದರ ಕುರಿತಾಗಿಯೇ ಯೋಚಿಸುತ್ತಿದ್ದರೆ, ಮನಸ್ಸು ದುರ್ಬಲಗೊಳ್ಳುತ್ತದೆ. ಸಮಸ್ಯೆಗಳ ಕುರಿತು ಹೆಚ್ಚಾಗಿ ಚಿಂತಿಸದೆ, ಮಲಗುವ ಮುನ್ನ ಎಲ್ಲಾ ಚಿಂತೆಗಳನ್ನು ಹೊರಹಾಕಿ ಮಲಗಿದರೆ, ಹೊಸ ದಿನವನ್ನು ಹೊಸದಾಗಿ ಆರಂಭಿಸಬಹುದು. ಆಗ ದೇಹ ಮನಸ್ಸು ಎರಡೂ ಸ್ವಸ್ಥವಾಗಿರುತ್ತದೆ. 


 ಮನಸ್ಸೇ ಶತ್ರುವೂ ಆಗಿದೆ, ಬಂಧುವೂ ಆಗಿದೆ...  

ಚಿಂತೆಗಳ ಹೊರೆ ಚಿತೆಗೆ ಸಮ.. ಮನಸ್ಸಿನಿಂದಲೇ ಅವನತಿ, ಮನಸ್ಸಿನಿಂದಲೇ ಉನ್ನತಿ

- ಆಶಾ ನಾಗಭೂಷಣ.

Sunday, January 18, 2026

 ಕಥೆ-1009 

 ಸಂತೋಷದ ಹುಡುಕಾಟ ಸಫಲವಾಗಲಿ


ಅವನ ಹೆಸರು ಕ್ರಿಸ್ ಗಾರ್ಡನರ್. ಊರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ. ಅಮ್ಮನೊಡನೆ ಬೆಳೆದ ಹುಡುಗ. ಅಪ್ಪ ಯಾರೆಂದು ಗೊತ್ತಾಗಿದ್ದೇ 28ನೆಯ ವಯಸ್ಸಿನಲ್ಲಿ. ಚಿಕ್ಕಂದಿನಿಂದಲೂ ಗಣಿತದಲ್ಲಿ ಆಸಕ್ತಿ. ಶಾಲೆಗೇ ಮೊದಲಿಗ. ಸಂಖ್ಯೆಗಳೊಂದಿಗೆ ಆಟವಾಡುವುದೆಂದರೆ ಅದೇನೋ ಹುಚ್ಚು. ಟೆಲಿಫೋನ್ ನಂಬರುಗಳಿಂದ ಹಿಡಿದು ಎಲ್ಲ ಅಂಕಿ-ಅಂಶಗಳನ್ನೂ ಒಮ್ಮೆ ನೋಡಿದರೆ ಅಥವಾ ಕೇಳಿದರೆ ಸಾಕು, ನೆನಪಿನಲ್ಲುಳಿಯುತ್ತಿದ್ದವು. ಪ್ರತಿಸಲ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದಾಗಲೂ ಉಕ್ಕುತ್ತಿದ್ದ, ಬದುಕಿನಲ್ಲಿ ತಾನು ಏನನ್ನಾದರೂ ಸಾಧಿಸಿಯೇ ತೀರುತ್ತೀನೆಂಬ ಅದಮ್ಯ ಆತ್ಮವಿಶ್ವಾಸ.


ಇಂಥ ಗಾರ್ಡರ್ನ ಹೊಟ್ಟೆ ಪಾಡಿಗಾಗಿ ಸೇರಿದ್ದು ಅಮೇರಿಕದ ನೌಕಾ ದಳವನ್ನು. ನುರಿತ ವೈದ್ಯರುಗಳ ಕೆಳಗೆ ಕೆಲಸ ಮಾಡಿ ತಾನೂ ಒಂದಷ್ಟು ಪರಿಣತಿಯನ್ನು ಪಡೆದುಕೊಳ್ಳುವ ಹೊತ್ತಿಗೆ ಅವನಿಗೆ 26ರ ಹರೆಯ. ಆ ವೇಳೆಗಾಗಲೇ ಅವನಿಗೆ ಮದುವೆ–ಯಾಗಿತ್ತು. ಕ್ರಿಸ್ಟೋಫರ್ ಎಂಬ ಐದು ವರ್ಷದ ಮಗನೂ ಇದ್ದ. ಕೈತುಂಬಾ ದುಡ್ಡು, ಮನಸ್ಸಿನ ತುಂಬಾ ನೆಮ್ಮದಿಯಿದ್ದರೂ ಇದ್ದಕ್ಕಿದ್ದ ಹಾಗೆ ತನ್ನ ಕೆಲಸದ ಬಗ್ಗೆ ಬೇಸರ ಮೂಡತೊಡಗಿತು. ಇನ್ನು ಮುಂದುವರಿಸಲಾರೆ ಎನ್ನುವಷ್ಟು ತೀವ್ರವಾದ ವಿಮುಖತೆ.


ಆಗ ಅವನೊಳಗೆ ಚಿಗುರಿದ್ದು ಸೇಲ್ಸ್ ಮ್ಯಾನ್ ಆಗುವ ಬಯಕೆ. ಹೇಗೂ ವೈದ್ಯಕೀಯ ಹಿನ್ನೆಲೆ, ತಿಳಿವಳಿಕೆ ಎರಡೂ ಇತ್ತು. ಮೂಳೆಯ ಸಾಂದ್ರತೆ ಅಳೆಯುವ ಉಪಕರಣವನ್ನು ಮಾರುವ ಏಜೆನ್ಸಿ ಕೊಂಡುಕೊಂಡ. ಅದಕ್ಕೆ ಹಣ ಹೊಂದಿಸುವುದಕ್ಕೋಸ್ಕರ ತನ್ನಿಡೀ ಜೀವಮಾನದ ಸಂಪಾದನೆಯನ್ನು ಸುರಿದ. ಹೆಂಡತಿ ಜಾಕಿಯೊಡನೆ ಸೇರಿ, ಬಹಳ ನಿರೀಕ್ಷೆಗಳೊಂದಿಗೆ ಕೆಲಸವನ್ನೂ ಶುರು ಮಾಡಿದ. ಆದರೆ, ತಾನು ಯಶಸ್ವಿಯಾಗುತ್ತೇನೆಂಬ ಆ ಬುದ್ಧಿವಂತನ ಲೆಕ್ಕಾಚಾರ ನಾಲ್ಕೇ ದಿನಗಳಲ್ಲಿ ತಲೆಕೆಳಗಾಗಿತ್ತು! ಏಕೆಂದರೆ, ಆ ಉಪಕರಣ ವಿಪರೀತ ದುಬಾರಿ.


ಮಾರಾಟವಾದರೆ ಉಂಟು ಇಲ್ಲದಿದ್ದರೆ ಇಲ್ಲ. ಅದನ್ನು ನೆಚ್ಚಿಕೊಂಡರೆ ಪ್ರತಿ ತಿಂಗಳೂ ಇಂತಿಷ್ಟೇ ಎಂಬ ಖಾಯಂ ಆದಾಯವಿಲ್ಲ. ಸಾಲದ ಪಟ್ಟಿ ಬೆಳೆಯತೊಡಗಿತು. ಊಟ-ತಿಂಡಿಗಳಿಗೂ ಪರದಾಡುವಂತಾದಾಗ ಹೆಂಡತಿ ಜಾಕಿ, ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದಳು. ಎರಡೆರಡು ಪಾಳಿಗಳಲ್ಲಿ ಅವಿರತವಾಗಿ ದುಡಿಯತೊಡಗಿದಳು. ತಮ್ಮ ಪರಿಸ್ಥಿತಿ ಇವತ್ತಲ್ಲ ನಾಳೆ ಸರಿಹೋದೀತು ಎಂದು ಕಾದಳು. ಅವನೂ ಕಲಿತ ಬುದ್ಧಿಯನ್ನೆಲ್ಲ ಉಪಯೋಗಿಸಿ ಶ್ರಮ ಪಡುತ್ತಲೇ ಇದ್ದ.


ಆದರೆ ಪರಿಣಾಮ ಮಾತ್ರ ನಿರಾಶಾದಾಯಕವಾಗೇ ಇತ್ತು. ನಿಧಾನವಾಗಿ ಗಂಡ-ಹೆಂಡಿರ ನಡುವೆ ವಿರಸ ಮೂಡತೊಡಗಿತು. ಆ ಉಪಕರಣದ ಪೆಟ್ಟಿಗೆ ನೋಡಿದರೆ ಸಾಕು, ಜಾಕಿ ಸಿಡುಕತೊಡಗಿದಳು. ಹೆಂಡತಿಯ ಪಡುತ್ತಿದ್ದ ಕಷ್ಟ ಹಾಗೂ ಅವಳ ಮೇಲಿನ ಅವಲಂಬನೆಯಿಂದಾಗಿ ಅವನ ಜೀವ ಹಿಂಡಿದಂತಾಗುತ್ತಿತ್ತು. ಸಂತೋಷವೆಂಬುದು ಮರೀಚಿಕೆಯಾಗಿದ್ದ ಸಂದರ್ಭ. ಹೀಗೆ ಒಂದುದಿನ ಗಾರ್ಡನರ್ ತನ್ನ ಪೆಟ್ಟಿಗೆಯನ್ನು ಹೊತ್ತು ಹತಾಶನಾಗಿ ರಸ್ತೆಯಲ್ಲಿ ನಡೆಯುತ್ತಿದ್ದ. ಅವನ ಕಣ್ಣಿಗೆ ಬೀಳುತ್ತಿರುವವರೆಲ್ಲರೂ ನಗುತ್ತಿದ್ದಾರೆ. ಖುಷಿಯಿಂದಿದ್ದಾರೆ. ತನ್ನ ದುಃಖ ಮಾತ್ರ ಮುಗಿಯುವ ಸೂಚನೆಯೇ ಇಲ್ಲವಲ್ಲ ಎನಿಸಿ ಮನಸ್ಸಿಗೆ ಇನ್ನಷ್ಟು ಬೇಸರವಾಯಿತು. ತಾನೂ ನಗಲೆತ್ನಿಸಿದ. ಇನ್ನಿಲ್ಲದ ಉತ್ಸಾಹ ಬರಿಸಿಕೊಂಡು, ಪಕ್ಕದ ಸಿಗ್ನಲ್ನಲ್ಲಿ ನಿಂತಿದ್ದ, ಕೆಂಪು ಫೆರಾರಿ ಕಾರಿನಲ್ಲಿದ್ದ ಅಪರಿಚಿತನನ್ನು ಮಾತನಾಡಿಸಿದ. ಹೇಗಿದ್ದೀಯ ನೀನು? ಎಲ್ಲಿ ಕೆಲಸ ಮಾಡುತ್ತೀಯ? ನಾನು ಚೆನ್ನಾಗಿದ್ದೀನಿ. ಷೇರುಗಳ ದಲ್ಲಾಳಿಯಾಗಿ ಕೆಲಸ ಮಾಡುತ್ತೀನಿ. ನೀನು ಹೇಗಿದ್ದೀಯ? ಆತನೂ ಸಹಜವಾಗೇ ಕೇಳಿದ. ಹೂಂ. ಚೆನ್ನಾಗಿದ್ದೀನಿ. ಹೇಗಿರುತ್ತೆ ಆ ಕೆಲಸ? ಓ ತುಂಬಾ ಚೆನ್ನಾಗಿರುತ್ತೆ. ಆತ ನಗುನಗುತ್ತಲೇ ಹೇಳಿ ಹೊರಟುಹೋದ.


ಅವನ ಫೆರಾರಿ ಕಾರನ್ನು ನೋಡಿದ ಗಾರ್ಡನರ್‌ಗೆ ಅವನು ನಿಜವಾಗಿಯೂ ಸಂತೋಷವಾಗಿದ್ದಾನೆಂಬ ನಂಬಿಕೆ ಹುಟ್ಟಿತು. ದಿನವೂ ಅವನನ್ನು ಭೇಟಿಯಾಗಿ ಷೇರು ಮಾರುಕಟ್ಟೆಯ ಬಗ್ಗೆ ಇಷ್ಟಿಷ್ಟೇ ತಿಳಿದುಕೊಳ್ಳತೊಡಗಿದ. ಸಂಖ್ಯೆಗಳ ಮೇಲಿನ ಹುಚ್ಚು ಪ್ರೀತಿಯ ತಾನೂ ಯಶಸ್ವಿ ಷೇರು ದಲ್ಲಾಳಿಯಾಗಬಹುದೆಂಬ ಕನಸು ಸಣ್ಣಗೆ ಚಿಗುರೊಡಯತೊಡಗಿತು. ಇತ್ತ ಮನೆಯ ಪರಿಸ್ಥಿತಿ ದಿನೇದಿನೇ ಹದಗೆಡತೊಡಗಿತು. ಹೆಂಡತಿಯ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದೇ ದುಸ್ತರವಾಗಿತ್ತು. ಅವಳು ಸಹಜವಾಗೇ ರೋಸಿಹೋಗಿದ್ದಳು. ಮಾತಿಗೆ ಮುಂಚೆ ಮನೆ ರಣರಂಗವಾಗುತ್ತಿತ್ತು. ಅದರ ಪರಿಣಾಮ ಮಗ ಕ್ರಿಸ್ಟೋಫರ್‌ನ ಮೇಲಾಗುತ್ತಿತ್ತು. ಕಡೆಗೊಂದು ದಿನ ಹೆಂಡತಿ ಅವನನ್ನು ಬಿಟ್ಟು ನಡೆದಳು.


ನ್ಯೂಯಾರ್ಕಿನ ಹೋಟೆಲೊಂದರಲ್ಲಿ ಅವಳಿಗೆ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಮಗನನ್ನು ಇರಿಸಿಕೊಳ್ಳುವ ವಿಷಯದಲ್ಲಿ ಇಬ್ಬರ ನಡುವೆಯೂ ಹಣಾಹಣಿಯಾದರೂ ತಾನೇ ಅವನನ್ನು ನೋಡಿಕೊಳ್ಳುತ್ತೇನೆಂಬ ಗಂಡನ ಹಟಕ್ಕೆ ಮಣಿದಳು. ಕಣ್ಣೀರು ತುಂಬಿಕೊಂಡೇ, ಮಲಗಿದ್ದ ಮಗನನ್ನು ಗಂಡನಿಗೊಪ್ಪಿಸಿ ನಡೆದಳು. ಅಲ್ಲಿಂದಾಚೆಗಿನ ಗಾರ್ಡನರ್‌ನ ಬದುಕನ್ನು ತಿಳಿಯಲು ‘ದ ಪರ್ಸೂಟ್ ಆಫ್ ಹ್ಯಾಪಿನೆಸ್’ ಎಂಬ ಮನೋಜ್ಞ ಚಿತ್ರವನ್ನೊಮ್ಮೆ ನೋಡಲೇಬೇಕು.


ಮನೆಯ ಬಾಡಿಗೆ ಕಟ್ಟಿಲ್ಲವೆಂದು ಅಪ್ಪ-ಮಗನನ್ನು ಸಾಮಾನುಗಳ ಸಹಿತ ಮನೆಯಿಂದಾಚೆಗೆ ಹಾಕುವ ಮಾಲೀಕ. ಗಾರ್ಡನರ್‌ನ ಖಾತೆಯಲ್ಲಿದ್ದ ಅಲ್ಪ-ಸ್ವಲ್ಪ ಹಣವನ್ನೂ ತೆರಿಗೆಯ ನೆಪದಲ್ಲಿ ಕಬಳಿಸುವ ಆದಾಯ ಇಲಾಖೆ. ವಾಸಕ್ಕೆ ಮನೆಯಿಲ್ಲದೆ ಮುಂದಿನ ದಿಕ್ಕಿನ ಅರಿವೂ ಇಲ್ಲದೆ ಅವನು ಮಗನೊಡನೆ ರಾತ್ರಿ ಕಳೆಯುವುದೆಲ್ಲಿ ಗೊತ್ತೇ? ರೈಲು ನಿಲ್ದಾಣದ ಟಾಯ್ಲೆಟ್ಟಿನಲ್ಲಿ! ಒಳಗಿನಿಂದ ಬೋಲ್ಟು ಜಡಿದು ನೆಲದ ತುಂಬಾ ಟಿಶ್ಯೂ ಪೇಪರ್ ಗಳನ್ನು ಹಾಸಿ ಅದರ ಮೇಲೆ ಮಗನನ್ನು ಮಲಗಿಸಿಕೊಂಡು, ರಾತ್ರಿ ಯಾರಾದರೂ ಬಾಗಿಲು ಬಡಿದಾಗಲೆಲ್ಲ ಇನ್ನೆಲ್ಲಿ ಬಾಗಿಲು ಮುರಿದು ಒಳನುಗ್ಗುತ್ತಾರೋ ಎಂಬ ಅಸಹಾಯಕತೆಯಲ್ಲಿ ಕಣ್ಣೀರುಗರೆಯುವ ಆ ಅಪ್ಪನ ಕಷ್ಟ ಯಾರಿಗೂ ಬೇಡ.


ತನ್ನದು ಹಾಗಿರಲಿ, ಮಗನಿಗೆ ಪ್ರತಿರಾತ್ರಿಯೂ ಮಲಗಲು ಜಾಗ ಹೊಂದಿಸುವುದು ಹೇಗೆ ಎಂದು ಚಿಂತಾಕ್ರಾಂತನಾದ ಅವನ ಕಣ್ಣಿಗೆ ಬಿದ್ದಿದ್ದು, ಅಮೆರಿಕದ ಸರಕಾರ ನಿರ್ಗತಿಕರಿಗೆಂದೇ ರಾತ್ರಿಯ ವಾಸ್ತವ್ಯಕ್ಕೋಸ್ಕರ ಕೊಡಮಾಡುತ್ತಿದ್ದ ಉಚಿತ ವಸತಿನಿಲಯಗಳು. ಆ ವಸತಿಯೋ, ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಇವತ್ತು ಅಲ್ಲಿ ಒಂದು ಹಾಸಿಗೆಯನ್ನು ಗಿಟ್ಟಿಸಿಕೊಳ್ಳಬೇಕೆಂದರೆ ಸಂಜೆ ಐದರಿಂದಲೇ ದೊಡ್ಡ ಕ್ಯೂನಲ್ಲಿ ನಿಲ್ಲಬೇಕು! ನಾಳೆ ಬೆಳಗ್ಗೆ ಆ ಜಾಗ ಖಾಲಿ ಮಾಡಿ ಸಂಜೆಯ ಹೊತ್ತಿಗೆ ಇನ್ನೊಂದನ್ನು ಹುಡುಕಿಕೊಳ್ಳಬೇಕು. ತಡವಾಗಿ ಹೋದರೆ ಎಲ್ಲೂ ಜಾಗ ಸಿಗುವುದಿಲ್ಲ.


ಮಗನಿಗೋಸ್ಕರ ತನ್ನನ್ನು ಈ ಸಂದರ್ಭಕ್ಕೂ ಒಗ್ಗಿಸಿಕೊಂಡ ಗಾರ್ಡನರ್. ಅಷ್ಟೊತ್ತಿಗಾಗಲೇ ‘ಡೀನ್ ವಿಟ್ಟರ್’ ಎಂಬ ಹಣಕಾಸು ಸಂಸ್ಥೆಯಲ್ಲಿ ಅವನಿಗೆ ಇಂಟರ್ನ್‌ಶಿಪ್ ಸಿಕ್ಕಿತ್ತು. ಆದರೆ ಅದು ಸಂಬಳದ ಉದ್ಯೋಗವಲ್ಲ. ಆರು ತಿಂಗಳ ಕಾಲಾವಧಿಗೆ ಇಪ್ಪತ್ತು ಜನರನ್ನು ಆರಿಸಿ ಅವರಿಗೆ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತಿತ್ತು. ಆ ಅವಧಿಯಲ್ಲಿ ಅವರು ಸಾಧ್ಯವಾದಷ್ಟು ಗ್ರಾಹಕರನ್ನು ಸೆಳೆದು ತರಬೇಕು. ಯಾರು ಅತಿ ಹೆಚ್ಚಿನ ಮೊತ್ತದ ವಹಿವಾಟನ್ನು ತಂದುಕೊಡುತ್ತಾರೋ ಅವರಿಗೆ ಮಾತ್ರ ಉದ್ಯೋಗ. ಅವಧಿಯ ಕೊನೆಯಲ್ಲಿ ಲಿಖಿತ ಪರೀಕ್ಷೆ.


ಆರು ತಿಂಗಳ ಕಾರ್ಯಕ್ಷಮತೆಯ ಒಟ್ಟಾರೆ ಮೌಲ್ಯಮಾಪನ. ಇಪ್ಪತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಆಯ್ಕೆಯಾಗುವ ಅವಕಾಶ. ಉಳಿದ ಐವರಿಗೆ ಇತ್ತ ಸಂಬಳವೂ ಇಲ್ಲ, ಅತ್ತ ಈ ಅವಧಿಯನ್ನು ಕೆಲಸದ ಅನುಭವವೆಂದು ಬೇರೆಡೆ ನಮೂದಿಸುವ ಸ್ವಾತಂತ್ರ್ಯವೂ ಇಲ್ಲ! ಬೇರೆ ಇಂಟರ್ ನೆಟ್ ಗಳೆಲ್ಲ ಬೆಳಗ್ಗೆ ಬೇಗ ಬಂದು ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರೆ, ಗಾರ್ಡನರ್ ಅದರಲ್ಲೂ ಅವಕಾಶ ವಂಚಿತ. ಸಂಜೆ ಐದಕ್ಕೆ ವಸತಿನಿಲಯಗಳ ಮುಂದೆ ಕ್ಯೂನಿಲ್ಲಬೇಕಲ್ಲ! ಬೆಳಗ್ಗೆ ಧಡಬಡನೆ ಎದ್ದು ಮಗನನ್ನು ಡೇ ಕೇರ್ ಒಂದರಲ್ಲಿ ಬಿಟ್ಟು ಸೀದಾ ಆಫೀಸಿಗೆ ಬರುತ್ತಿದ್ದ.


ಉಳಿದವರು ಒಂಭತ್ತು ಘಂಟೆಗಳ ಕಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ತಾನು ಆರೇ ಘಂಟೆಗಳಲ್ಲಿ ಮಾಡಿ ಮುಗಿಸುವುದನ್ನು ಕಲಿತ. ಅದಕ್ಕೋಸ್ಕರ ಏನಾದರೂ ಹೊಂದಾಣಿಕೆ ಮಾಡಿಕೊಳ್ಳಲೇಬೇಕಲ್ಲ? ಕುರ್ಚಿ ಬಿಟ್ಟೆದ್ದು ಹೋಗುವುದನ್ನು ತಪ್ಪಿಸಲು ಊಟ ನಿಂತಿತು. ಬಾತ್ರೂಮಿಗೆ ಹೋದರೆ ಸಮಯ ಹಾಳೆಂದು ನೀರು ಕುಡಿಯುವುದನ್ನೇ ಬಿಟ್ಟುಬಿಟ್ಟ ಪುಣ್ಯಾತ್ಮ! ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಸಮನೆ ಕೆಲಸ. ಗಡಿಯಾರದ ಮುಳ್ಳು ನಾಲ್ಕು ಹೊಡೆಯುತ್ತಿದ್ದ ಹಾಗೇ ಮಗನನ್ನು ಕರೆದುಕೊಂಡು ಬರಲು ದೌಡು. ಅಲ್ಲಿಂದ ಸೀದಾ ಮಲಗುವ ಜಾಗದ ಹುಡುಕಾಟ. ಹೊಟ್ಟೆಹೊರೆಯುವುದಕ್ಕಾಗಿ ಶನಿವಾರ ಭಾನುವಾರಗಳಂದು ತನ್ನ ಉಪಕರಣದ ಮಾರಾಟ.


ಇದು ಒಂದೆರಡು ತಿಂಗಳ ಕಥೆಯಲ್ಲ, ಬರೋಬ್ಬರಿ ಆರು ತಿಂಗಳ ಪರದಾಟ. ಏತನ್ಮಧ್ಯೆ ಮಗುವಿನ ಆತ್ಮವಿಶ್ವಾಸ ಕುಂದದ ಹಾಗೆ ನೋಡಿಕೂಳ್ಳುವ ಹೊಣೆಗಾರಿಕೆ. ಅದನ್ನು ನಗಿಸಿಕೊಂಡು, ತಾನು ಹಸಿದಿದ್ದರೂ ಅದರ ಹೊಟ್ಟೆಗೆ ಹಾಕಿ, ಕಣ್ಣಲ್ಲಿ ಜಿನುಗುವ ನೀರು ಹೊರಬಂದು ಅದಕ್ಕೆ ಕಾಣದಂತೆ ಅಂಚಿನಲ್ಲೇ ತಡೆದು, ತಾವು ಸುಖವಾಗಿರುವ ದಿನ ಬಂದೇ ಬರುತ್ತದೆಂಬುದನ್ನು ಅದಕ್ಕೆ ಹೇಳಲು ಪಡುವ ಪ್ರಯತ್ನ ಎಂಥ ಕಲ್ಲು ಹೃದಯವನ್ನೂ ಕರಗಿಸುತ್ತದೆ.


ಅಂತೂ ಆರು ತಿಂಗಳು ಕಳೆದು ಪರೀಕ್ಷೆಯ ದಿನ ಬಂದಾಗ ಅವತ್ತೂ ಅವನಿಗೆ ಪರೀಕ್ಷೆಯನ್ನು ಎಲ್ಲರಿಗಿಂತ ಬೇಗ ಮುಗಿಸಿ ಓಡಿ ಹೋಗಿ ರೂಮು ಹುಡುಕುವ ಧಾವಂತ! ಸುಕ್ಕಾದ ಹಣೆಯ ನೆರಿಗೆಗಳು ಒಂದು ಕ್ಷಣವೂ ಸಡಿಲಾಗಲು ಬಿಡದ ಕ್ರೂರ ವಿಧಿ.

ಫಲಿತಾಂಶದ ದಿನ ಅತಿಯಾದ ಉದ್ವೇಗದಿಂದಲೇ ಆಫೀಸಿಗೆ ಹೋಗುವ ಅವನನ್ನು ಮ್ಯಾನೇಜರ್ ಒಳಗೆ ಕರೆದು, ‘ನೀನು ಪಟ್ಟ ಶ್ರಮ ಸಾರ್ಥಕವಾಗಿದೆ. ಕೆಲಸಕ್ಕೆ ಆಯ್ಕೆಯಾಗಿದ್ದೀಯ’ ಎನ್ನುತ್ತಾನೆ.


ಅದನ್ನು ಕೇಳಿದ ಗಾರ್ಡನರ್ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಮೂಕನಾಗಿ ಸಂತೋಷಾತಿರೇಕದಿಂದ ಹೊರಬರುತ್ತಾನೆ. ರಸ್ತೆಯಲ್ಲಿ ನಡೆಯುತ್ತಿದ್ದ ಉಳಿದೆಲ್ಲರಿಗಿಂತ ಹೆಚ್ಚಿನ ಸಂತೋಷದಿಂದ ಕುಣಿದಾಡುತ್ತಾನೆ. ಕ್ರಿಸ್ ಗಾರ್ಡನರ್‌ನ ಕಥೆಯನ್ನು ಮನಮುಟ್ಟುವಂತೆ ಹೇಳಿರುವ ಹಾಲಿವುಡ್ ಚಿತ್ರ ‘ದ ಪರ್ಸೂಟ್ ಆಫ್ ಹ್ಯಾಪಿನಸ್’ನಲ್ಲಿ ಗಾರ್ಡನರ್‌ನ ಪಾತ್ರಕ್ಕೆ ನಟ ವಿಲ್ ಸ್ಮಿತ್ ಸಂಪೂರ್ಣ ನ್ಯಾಯ ಒದಗಿಸಿದ್ದಾನೆ. ಅಂದಹಾಗೆ, ಈ ಕಥೆ ಕಾಲ್ಪನಿಕವಲ್ಲ.


ಇದು ಕ್ರಿಸ್ ಗಾರ್ಡನರ್ ಎಂಬ ಸಾಮಾನ್ಯನೊಬ್ಬನ ಯಶೋಗಾಥೆ. ಘಟಿಸಿದ್ದು 80ರ ದಶಕದಲ್ಲಿ. ಬದುಕಿಡೀ ಬರೀ ಒಬ್ಬ ಷೇರು ದಲ್ಲಾಳಿಯಾಗೇ ಇದ್ದಿದ್ದರೆ ಅವನನ್ನು ಯಾರಿಗೂ ಪರಿಚಯಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ಆದರೆ ದಲ್ಲಾಳಿಯಾಗಿ ಸೇರಿದ ಐದೇ ವರ್ಷಗಳಲ್ಲಿ ‘ಗಾರ್ಡನರ್ ರಿಚ್’ ಎಂಬ ಸ್ವಂತ ಷೇರು ಹೂಡಿಕೆ ಸಂಸ್ಥೆಯನ್ನಾರಂಭಿಸಿದ ಅವನು ನೋಡನೋಡುತ್ತಲೇ ಕೋಟ್ಯಾಧಿಪತಿಯಾದ. ನಂತರ 2006ರಲ್ಲಿ ಅವನ ಸಾಮ್ರಾಜ್ಯ ಇನ್ನಷ್ಟು ವಿಸ್ತರಿಸಿದಾಗ ಈ ಚಿತ್ರ ತಯಾರಾಯಿತು. ಈಗ ಅವನನ್ನು ಉದ್ಯಮಿ ಎನ್ನುವುದಕ್ಕಿಂತ ಹೆಚ್ಚಾಗಿ ಕೌನ್ಸೆಲರ್ ಎನ್ನುವುದೇ ಸೂಕ್ತ.


ತನ್ನ ಮಾತುಗಳಿಂದ, ತನ್ನದೇ ಜ್ವಲಂತ ಉದಾಹರಣೆಯಿಂದ ಜನರನ್ನು ಹುರಿದುಂಬಿಸುತ್ತಾನೆ. ವರ್ಷದ 200 ದಿನಗಳನ್ನು ಆ ಕೆಲಸಕ್ಕೆಂದೇ ಮೀಸಲಿಟ್ಟಿದ್ದಾನೆ. ಕೆಲವೊಮ್ಮೆ ನಾವು ನಮ್ಮ ಕಷ್ಟವೇ ಹೆಚ್ಚಿನದು ಎಂದುಕೊಳ್ಳುತ್ತೇವೆ. ಯಾರಾದರೂ ಧೈರ್ಯ ಹೇಳಲು ಬಂದರೆ, ‘ನನ್ನ ಕಷ್ಟ ಅವರಿಗೇನು ಗೊತ್ತಾಗುತ್ತೆ?’ ಎಂಬ ಧೋರಣೆಯ ಮಾತಾಡುತ್ತೇವೆ. ಬದುಕಿನಲ್ಲಿ ಇನ್ನೆಂದೂ ಸಂತೋಷವೇ ಬರಲಾರದೇನೋ ಎನ್ನುವಷ್ಟು ನಿರಾಶರಾಗಿ ಧೃತಿಗೆಡುತ್ತೇವೆ.


ಆದರೆ, ನಮ್ಮ ಪಾಲಿನ ಸಂತೋಷವೂ ಎಲ್ಲೋ ಅಡಗಿ ಕುಳಿತಿರುತ್ತದೆ ಎನ್ನುವುದನ್ನು ಮರೆತುಬಿಡುತ್ತೇವೆ. ಹತಾಶರಾಗಿ ಕುಸಿಯದೆ ಅದನ್ನು ಹುಡುಕಿ ತೆಗೆಯಬೇಕು. ಗಾರ್ಡನರ್ ತನ್ನ ಸಂತೋಷವನ್ನು ಬೆಂಬೆತ್ತಿ ಪಡೆಯುತ್ತಾನೆ. ನಮಗೂ ಕ್ರಿಸ್‌ ಗಾರ್ಡನರ್ ಬದುಕು ಮಾದರಿಯಾಗಲಿ. ಸಂತೋಷಗಳನ್ನು ಹೆಕ್ಕಿ ತೆಗೆಯುವುದೇ ಚಟವಾಗಲಿ


ಕೃಪೆ: ಸಹನಾ ವಿಜಯಕುಮಾರ್.

Saturday, January 17, 2026

 ಕಥೆ-1008

ಮಾಧುರ್ಯತೆ


ಆತ ಆ ವಯಸ್ಸಾದ ಮಹಿಳೆಯಿಂದ ಯಾವಾಗಲೂ ಆರೆಂಜ್ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.ಇದು ಪ್ರತಿ ಸಾರಿ ಹೀಗೆ ಆಗುತ್ತಿತ್ತು

      ಒಂದು ದಿನ ಆತನ ಜೊತೆ ಬಂದ ಪತ್ನಿಯು ಕೇಳುತ್ತಾಳೆ - ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?

      ಆತ ನಗುತ್ತಾ ಹೇಳುತ್ತಾನೆ - ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಗೆ ದುಡ್ಡು ಕೊಡದೆ ಮತ್ತು ನಷ್ಟವಾಗದೆ ಒಂದು ಆರೆಂಜನ್ನು ಆ ವಯಸ್ಸಾದ ಮಹಿಳೆ ತಿನ್ನಬಹುದಲ್ಲಾ?.

       ಆ ಅಂಗಡಿಯ ದೃಶ್ಯವನ್ನು ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸಾದ ಮಹಿಳೆಯತ್ರ ಕೇಳುತ್ತಾಳೆ - ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?

      ಅದಕ್ಕೆ ಆ ವಯಸ್ಸಾದ ಮಹಿಳೆ ನಗುತ್ತಾ ಹೇಳುತ್ತಾಳೆ - ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ . ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ....! ಅದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು ...!


ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ. ಕೃಪೆ : ಇ-ಬುಕ್ಸ್ 5 .

 ಕಥೆ-1001

ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಬೆಳಕು

https://basapurs.blogspot.com


ಒಂದು ಸಣ್ಣ ಹಳ್ಳಿಯಲ್ಲಿ ಸೂರ್ಯ ಎಂಬ ಬಡ ಕುಟುಂಬದ ಹುಡುಗನಿದ್ದ. ಅವನ ತಂದೆ ಕೃಷಿ ಕಾರ್ಮಿಕ, ತಾಯಿ ಮನೆಯ ಕೆಲಸ ಮಾಡುತ್ತಿದ್ದರು. ಹಣದ ಕೊರತೆ ಇದ್ದರೂ, ಸೂರ್ಯನಿಗೆ ಓದುವ ಆಸೆ ತುಂಬಾ ಇತ್ತು.

ಅವನು ಪ್ರತಿದಿನ ಬೆಳಗ್ಗೆ ಬೇಗ ಎದ್ದು ಮನೆಯ ಕೆಲಸ ಮಾಡಿ, ನಂತರ ಶಾಲೆಗೆ ಹೋಗುತ್ತಿದ್ದ.


ಶಾಲೆಯಲ್ಲಿ ಸೂರ್ಯ ತುಂಬಾ ಶ್ರಮಶೀಲ ವಿದ್ಯಾರ್ಥಿ. ಆದರೆ ಕೆಲವು ಮಕ್ಕಳು ಅವನ ಬಡತನವನ್ನು ನೋಡಿ ಅವನನ್ನು ಹಾಸ್ಯ ಮಾಡುತ್ತಿದ್ದರು.

“ನೀನು ಓದಿ ಏನು ಮಾಡ್ತೀಯ? ನೀನೋಬ್ಬ ಬಡವ ನಮ್ಮಂತೆ ಆಗಲಾರೆ,” ಎಂದು ಅವನನ್ನು ಕಿಚಾಯಿಸುತ್ತಿದ್ದರು.


ಆ ಮಾತುಗಳು ಸೂರ್ಯನಿಗೆ ನೋವು ತಂದರೂ, ಅವನು ಮನಸ್ಸಿನಲ್ಲಿ ಒಂದನ್ನು ನಿರ್ಧರಿಸಿದ್ದ...

“ನನ್ನ ಸ್ಥಿತಿ ನನ್ನ ಭವಿಷ್ಯವಲ್ಲ; ನನ್ನ ಪರಿಶ್ರಮವೇ ನನ್ನ ಭವಿಷ್ಯ.” ಎಂದು...


  SSLC ವಾರ್ಷಿಕ ಪರೀಕ್ಷೆ ನಡೆಯಿತು. ಪರೀಕ್ಷೆಯ ದಿನ ಸೂರ್ಯನ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿ ಉತ್ತರ ಪತ್ರಿಕೆಯನ್ನು ತೋರಿಸಿ,

“ನೋಡು, ಕಾಪಿ ಮಾಡಿಕೋ,” ಎಂದ. ಆ ಕ್ಷಣದಲ್ಲಿ ಸೂರ್ಯನ ಮನಸ್ಸಿನಲ್ಲಿ ಯುದ್ಧ ನಡೆಯಿತು.

ಪಾಸ್ ಆಗಬೇಕು ಎಂಬ ಆಸೆ ಒಂದು ಕಡೆ,

ತಂದೆ-ತಾಯಿ ಕಲಿಸಿದ್ದ ಪ್ರಾಮಾಣಿಕತೆ ಇನ್ನೊಂದು ಕಡೆ.


ಅವನು ತಕ್ಷಣ ಹೇಳಿದ,

“ಕ್ಷಮಿಸಿ, ನಾನು ನನ್ನ ಶ್ರಮದ ಮೇಲೆ ನಂಬಿಕೆ ಇಡುತ್ತೇನೆ.”


ಪರೀಕ್ಷೆ ಮುಗಿದ ನಂತರ ಫಲಿತಾಂಶ ಪ್ರಕಟವಾಯಿತು. ಸೂರ್ಯ ಉತ್ತಮ ಅಂಕಗಳನ್ನು ಪಡೆದು ಪಾಸಾಗಿದ್ದ.. ಆದರೆ ಕಾಪಿ ಮಾಡಿದ ಕೆಲವರು ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.


ಆ ದಿನ ಸೂರ್ಯನ ತಂದೆಯ ಕಣ್ಣುಗಳಲ್ಲಿ ಸಂತೋಷದ ನೀರು ಹರಿಯಿತು.

ತಂದೆ ಹೇಳಿದರು,

“ಮಗನೆ, ನಮ್ಮ ಬಳಿ ಹಣ ಇಲ್ಲದಿದ್ದರೂ, ನಿನ್ನ ಬಳಿ ಸತ್ಯ ಮತ್ತು ಪರಿಶ್ರಮವಿದೆ. ಅದೇ ನಿನ್ನ ದೊಡ್ಡ ಆಸ್ತಿ” ತಂದೆ-ತಾಯಿಗಳಿಗೆ ಮಕ್ಕಳೇ ಆಸ್ತಿ, ಮಕ್ಕಳು ಓದಬೇಕಾದಾಗ ತಂದೆ-ತಾಯಿಗಳು ತಮಗಾಗಿ ಎಷ್ಟು ಶ್ರಮ ಪಡ್ತಿದ್ದಾರೆ ಎಂಬುದು ನೆನಪಿರಲಿ...


ಪರಿಶ್ರಮ ಮತ್ತು ಪ್ರಾಮಾಣಿಕತೆ ಇದ್ದರೆ, ಯಾವ ಬಡತನವೂ ಸಾಧನೆಗೆ ಅಡ್ಡಿಯಾಗಲಾರದು.


ಸದ್ಯ ನಡೆಯುತ್ತಿರುವ 2026 ಸರಣಿ-1 ಪರೀಕ್ಷೆಯಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆ ಆಗದೇ ಸ್ವಂತ ತಯಾರಿ ಮಾಡಿಕೊಂಡರೆ ನೀವು ಸರಳವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸ್ ಆಗಬಹುದು...

 ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಯಶಸ್ಸು ಖಂಡಿತ. 

 - ಶಂಕರಗೌಡ ಬಸಾಪೂರ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು